ಆತ್ಮಸ್ಥೈರ್ಯ ಹೊಂದಿದಲ್ಲಿ ಸಾವನ್ನು ಗೆಲ್ಲಲು ಸಾಧ್ಯ : ಕೆ.ಅಣ್ಣಾಮಲೈ
ಚಿಕ್ಕಮಗಳೂರು, ಸೆ.12:ಮನುಷ್ಯನ ಎಲ್ಲಾ ಸಾಧನೆಗೆ ಮೂಲ ಆತ್ಮಸ್ಥೈರ್ಯ ಅಂತಹ ಸತ್ವವನ್ನು ಹೊಂದಿರುವವರು ಸೋಲಿಗೆ ಹೆದರುವುದಿಲ್ಲ ಬದಲಾಗಿ ಸೋಲನ್ನೆ ಸವಾಲಾಗಿ ಸ್ವೀಕರಿಸಿ ಜಯ ಸಾಧಿಸುತ್ತಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ತಿಳಿಸಿದರು.
ಅವರು ನಗರದ ಎಮ್.ಇ.ಎಸ್ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಗಳ ಘಟಕ, ಅರಕ್ಷಕ ಇಲಾಖೆ ಹಾಗೂ ಮಲೆನಾಡು ವಿದ್ಯಾ ಸಂಸ್ಥೆ ಚಿಕ್ಕಮಗಳೂರು ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಆತ್ಮಹತ್ಯೆ ವೈಯಕ್ತಿಕ ಕ್ರಿಯೆಯಾದರು ಇದಕ್ಕೆ ಯಾರು ಸಹ ಪೂರ್ವಸಿದ್ದತೆ ಹೊಂದುವುದಿಲ್ಲ ಸಾಮಾಜಿಕ, ಸಾಂಸಾರಿಕ ಹಾಗೂ ಆರ್ಥಿಕ ಸನ್ನಿವೇಶಗಳು ಸೇರಿದಂತೆ ಮಾನಸಿಕ ಒತ್ತಡ, ಕಿನ್ನತೆ ಪ್ರಭಾವ ಬೀರುತ್ತದೆ ಇವುಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಹದಿನೈದರಿಂದ ಇಪ್ಪತ್ನಾಲ್ಕು ವರ್ಷದೊಳಗಿನ ಯುವ ಜನರು ಆತ್ಮಹತ್ಯೆಯಂತಹ ದುಷ್ಟಕಾರ್ಯಗಳಿಗೆ ಮುಂದಾಗುತ್ತಿರುವುದು ವಿಷಾಧನೀಯ ಅವರು ತಮ್ಮ ಸಮಸ್ಯೆಗಳನ್ನು ಸ್ನೇಹಿತರು ಹಾಗೂ ಹಿರಿಯರೊಂದಿಗೆ ಹಂಚಿಕೊಳ್ಳುವುದರ ಮೂಲಕ ಪರಿಹಾರ ಕಂಡುಕೊಂಡು ತಮ್ಮ ಸಮಸ್ಯೆಗಳಿಂದ ಹೊರಬರಬೇಕು ಎಂದರು.
ವಿಶ್ವದಾದ್ಯಂತ ಪ್ರತಿ 32 ಸೆಕೆಂಡಿಗೆ ಒಂದು ಆತ್ಮಹತ್ಯೆ ಸಂಭವಿಸುತ್ತಿದೆ ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ 107 ಜನ ಆತ್ಮಹತ್ಯೆಯಲ್ಲಿ ಮರಣಹೊಂದಿದ ಪ್ರಕರಣಗಳು ಕಂಡು ಬಂದಿದೆ ಇಂತಹ ಹೇಯ ಕೃತ್ಯಗಳನ್ನು ತಡೆಗಟ್ಟುವ ಜವಾಬ್ದಾರಿ ನಮ್ಮನಿಮ್ಮೆಲ್ಲರ ಮೇಲಿದೆ ಎಂದರು.
ಜಿಲ್ಲಾ ಮಕ್ಕಳ ಸಮಿತಿ ಅಧ್ಯಕ್ಷ ಹಾಗೂ ವಕೀಲರಾದ ಹೆಚ್.ನಟರಾಜ್ ಉಪನ್ಯಾಸ ನೀಡಿ ಮಾತನಾಡಿ ಆತ್ಮಹತ್ಯೆಯೂ ಕಾನೂನಿನ ಪ್ರಕಾರ ಅಪರಾಧವಾಗಿದ್ದು ಯಾವುದೇ ವ್ಯಕ್ತಿ ಆತ್ಮಹತ್ಯೆಗೆ ಪ್ರಯತ್ನಿಸಿದರೆ ಅವರನ್ನು ಶಿಕ್ಷೆಗೆ ಗುರಿಪಡಿಸಬಹುದಾಗಿದೆ ಎಂದ ಅವರು ಇದಕ್ಕೆ ಪ್ರೇರಣೆ ನೀಡುವ ಹಾಗೂ ಕಾರಣಕರ್ತರಾಗುವ ವ್ಯಕ್ತಿಗಳು ಸಹ ಶಿಕ್ಷೆಗೆ ಅರ್ಹರಾಗಿರುತ್ತಾರೆ ಎಂದರು.
ಜಿಲ್ಲಾ ಮಾನಸಿಕ ರೋಗ ತಜ್ಞ ಡಾ.ವಿನಯ ಕುಮಾರ್ ಕೆ.ಎಸ್. ಮಾತನಾಡಿ ಆತ್ಮಹತ್ಯೆ ಎಂಬ ಪದವೇ ಅಪಭ್ರಂಶವಾಗಿದ್ದು ತತ್ವಶಾಸ್ತ್ರದ ಪ್ರಕಾರ ಆತ್ಮಕ್ಕೆ ಸಾವಿಲ್ಲ, ವೈಜ್ಞಾನಿಕ ದೃಷ್ಟಿಯ ಜೊತೆಗೆ ಆದ್ಯಾತ್ಮಿಕ ಚಿಂತನೆ ಇದ್ದರೆ ನಕಾರಾತ್ಮಕ ಆಲೋಚನೆಗಳು ಬರುವುದೇ ಇಲ್ಲ, ಆತಂಕದ ಕಾಯಿಲೆ, ಮಾದಕವಸ್ತು ಸೇವನೆ ಮುಂತಾದ ಮಾನಸಿಕ ಕಾಯಿಲೆಗಳು, ಕೆಲಸದ ಒತ್ತಡ ಮುಂತಾದವುಗಳು ಅಕಾಲ ಮರಣಕ್ಕೆ ಪ್ರಮುಖ ಕಾರಣವಾಗುತ್ತವೆ ಎಂದರು.
ಮಲೆನಾಡು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಸ್. ಶಾಂತಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಹಿಂದೆ ಒಟ್ಟು ಕುಟುಂಬದ ವ್ಯವಸ್ಥೆಯಲ್ಲಿ ಜೀವನ ಸಾಗಿಸುತ್ತಿದ್ದಾಗ ಕಿನ್ನತೆಗಳು ಕಂಡು ಬರುತ್ತಿರಲಿಲ್ಲ ಆಧುನಿಕ ಕೌಟುಂಬಿಕ ವ್ಯವಸ್ಥೆಯಲ್ಲಿ ತಂದೆ-ತಾಯಿ ಒಂದು ಅಥವಾ ಎರಡು ಮಕ್ಕಳಿದ್ದು ಅವರುಗಳನ್ನು ಪ್ರೀತಿಯಿಂದ ನೋಡಿಕೊಳ್ಳುವುದನ್ನು ಮಕ್ಕಳು ದುರುಪಯೋಗ ಪಡಿಸಿಕೊಂಡು ದೌರ್ಬಲ್ಯವೆಂದು ಬಾವಿಸಿ ಕಿನ್ನತೆಗೆ ಒಳಗಾಗುತ್ತಿದ್ದಾರೆ ಇದು ಸರಿ ಅಲ್ಲ ಎಂದರು.
ಕಾರ್ಯಕ್ರಮದಲ್ಲಿ ಮಲೆನಾಡು ವಿದ್ಯಾ ಸಂಸ್ಥೆಯ ಪ್ರಾಚಾರ್ಯ ವಿಷ್ಣುವರ್ಧನ್ ಮತ್ತಿತರರು ಉಪಸ್ತಿತರಿದ್ದರು.ವಿದ್ಯಾರ್ಥಿನಿ ಸೌಧಾಮಿನಿ ಹಾಗೂ ತಂಡದವರು ಪ್ರಾರ್ಥಿಸಿದರು ಮನಶಾಸ್ತ್ರಜ್ಞರಾದ ನವೀನ್ ಕುಮಾರ್ ಸ್ವಾಗತಿಸಿದರೆ ಆರೋಗ್ಯ ಶಿಕ್ಷಣಾಧಿಕಾರಿ ಜಲಜಾಕ್ಷಿ ನಿರೂಪಿಸಿ ವಂದಿಸಿದರು.