ಹೆಬ್ಬಾಳ-ನಾಗವಾರ ವ್ಯಾಲಿ ನೀರಿನ ಬಗ್ಗೆ ತಪ್ಪುಗ್ರಹಿಕೆ ಬೇಡ: ಶಾಸಕ ಸುಧಾಕರ್
ಚಿಕ್ಕಬಳ್ಳಾಪುರ, ಸೆ.15: ಜಿಲ್ಲೆಯ ಅಂತರ್ಜಲ ವೃದ್ಧಿಗಾಗಿ ಜಾರಿಗೊಳಿಸಲಾಗುತ್ತಿರುವ ಹೆಬ್ಬಾಳ ನಾಗವಾರ ವ್ಯಾಲಿಯ ಯೋಜನೆಯಡಿ ಕೊಳಚೆ ನೀರನ್ನು ಮೂರು ಹಂತದಲ್ಲಿ ಶುದ್ಧೀಕರಿಸಿದ ನೀರನ್ನು ಕೆರೆಗಳಿಗೆ ಹರಿಸಲಾಗುತ್ತಿದ್ದು, ಜಿಲ್ಲೆಯ ಜನತೆ ಕೊಳಚೆ ನೀರೆಂಬ ತಪ್ಪುಗ್ರಹಿಕೆಯಿಂದ ಹೊರಬರಬೇಕೆಂದು ಶಾಸಕ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.
ತಾಲೂಕಿನ ನಂದಿಗಿರಿಧಾಮದ ನೆಹರೂ ನಿಲಯದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆರೆಗಳ ನಾಡಾಗಿರುವ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕಳೆದ ಹಲವು ವರ್ಷಗಳಿಂದ ಮಳೆಯ ಕೊರತೆಯಿಂದಾಗಿ ಕೆರೆಗಳು ಬಣಗುಡುತ್ತಿದ್ದು, ಈ ಕೆರೆಗಳಿಗೆ ಜೀವ ತುಂಬುವ ನಿಟ್ಟಿನಲ್ಲಿ ಹೆಬ್ಬಾಳ ನಾಗವಾರ ಯೋಜನೆಯಡಿಯಲ್ಲಿ ಹಂತ ಹಂತವಾಗಿ ಸಂಸ್ಕರಿಸಿದ ನೀರನ್ನು ಜಿಲ್ಲೆಯ 44 ಕೆರೆಗಳಲ್ಲಿ ತುಂಬಿಸಲಾಗುವುದು ಎಂದರು.
ಹೆಬ್ಬಾಳ ನಾಗವಾರ ವ್ಯಾಲಿಯ ಯೋಜನೆಯಡಿ ಕೊಳಚೆ ನೀರನ್ನು ಶುದ್ದೀಕರಿಸಿ ಕೆರೆಗಳಿಗೆ ಹಾಯಿಸುತ್ತಿರುವುದು ದೇಶದಲ್ಲಿ ಪ್ರಥಮ ಯೋಜನೆಯಾಗಿದೆ. ಶುದ್ಧೀಕರಿಸುವ ನೀರು ಕುಡಿಯಲು ಯೋಗ್ಯವಾಗಿರುವುದರಿಂದ ಯಾವುದೇ ರೀತಿಯ ದುಷ್ಪರಿಣಾಮಗಳು ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಈಗಾಗಲೇ ಅಮೇರಿಕಾ, ದುಬೈ, ಜಪಾನ್, ಇಸ್ರೇಲ್ ದೇಶಗಳಲ್ಲಿ ಕೋಳಚೆ ನೀರನ್ನು ಶುದ್ಧೀಕರಿಸಿ ದಿನನಿತ್ಯ ಚಟುವಟಿಕೆಗಳಿಗೆ ಸೇರಿದಂತೆ ಕುಡಿಯಲೂ ಅದೇ ನೀರನ್ನು ಬಳಸಲಾಗುತ್ತಿದೆ ಎಂದ ಅವರು, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ನೀರಿನ ಬವಣೆಯನ್ನು ನೀಗಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ದಿಟ್ಟ ಹೆಜ್ಜೆಯನ್ನಿಟ್ಟಿದ್ದು, ಈ ಭಾಗದ ನೀರಾವರಿ ಯೋಜನೆಗಾಗಿ ಸುಮಾರು 14 ಸಾವಿರ ಕೋಟಿ ರೂ. ಗೂ ಹೆಚ್ಚು ಅನುದಾನವನ್ನು ಹಂತ ಹಂತವಾಗಿ ಜಾರಿಗೊಳಿಸುತ್ತಿದೆ ಎಂದರು.
947 ಕೋಟಿ ರೂ. ವೆಚ್ಚದ ಹೆಬ್ಬಾಳ ನಾಗವಾರ ವ್ಯಾಲಿಯ ಯೋಜನೆಗೆ ಸಿಎಂ ಸಿದ್ದರಾಮಯ್ಯರವರು ಸೆ.18ರಂದು ಚಾಲನೆ ನೀಡಲಿದ್ದು, ಅದೇ ದಿನದಂದು ನಗರೋತ್ಥಾನ ಮೂರನೇ ಹಂತದ ಯೋಜನೆ, ಸರಕಾರಿ ಜೂನಿಯರ್ ಕಾಲೇಜು ಕಟ್ಟಡ ನಿರ್ಮಾಣ, 37 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸಿಎಂ ಚಾಲನೆ ನೀಡಲಿದ್ದಾರೆಂದರು.
ನೂತನ ಬಸ್ ನಿಲ್ದಾಣದ ಉದ್ಘಾಟನೆ: ನಗರದಲ್ಲಿ 9.92 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸರಕಾರಿ ಬಸ್ನಿಲ್ದಾಣ, 14.43 ಕೋಟಿ ರೂ. ವೆಚ್ಚದಲ್ಲಿ ರೇಣುಮಾಕಲಹಳ್ಳಿಯಲ್ಲಿ ನಿರ್ಮಾಣವಾಗಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಗಾಂಧಿ ಪಥ ಗ್ರಾಮ ಪಥ ಯೋಜನೆಯಡಿ ಸುಮಾರು 21.85 ಕೋಟಿ ರೂ. ಕೈಗೊಂಡಿರುವ ರಸ್ತೆಗಳ ಉದ್ಘಾಟನೆಯನ್ನು ಸಿಎಂ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಯಲುವಹಳ್ಳಿ ಎನ್.ರಮೇಶ್, ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಜಿ.ಆರ್. ಶ್ರೀನಿವಾಸ್, ತಾಪಂ ಅಧ್ಯಕ್ಷ ರಾಮಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.