ಅಂಬೇಡ್ಕರ್‌ರನ್ನು ಮುಗಿಸಲು ದಲಿತರ ಬಳಕೆ: ಎ.ಕೆ. ಸುಬ್ಬಯ್ಯ

Update: 2017-09-18 15:45 GMT

ಮೈಸೂರು, ಸೆ.18: ದಲಿತ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿ ಅವರ ಮೆದುಳಿಗೆ ಬೀಗಹಾಕಿ, ಗುಲಾಮರನ್ನಾಗಿ ಮಾಡಿ ಅಂಬೇಡ್ಕರ್ ಅವರನ್ನು ಮುಗಿಸಲು ರಾಮನಾಥ್ ಕೋವಿಂದ ಅಂತಹವರನ್ನು ಬಿಜೆಪಿಯವರು ಬಳಸಿಕೊಳ್ಳುತ್ತಿದ್ದಾರೆ ಎಂದು ವಿಚಾರವಾದಿ ಎ.ಕೆ.ಸುಬ್ಬಯ್ಯ ವಾಗ್ದಾಳಿ ನಡೆಸಿದರು.

ದಲಿತ ವೆಲ್ಫೇರ್ ಟ್ರಸ್ಟ್, ಅಶೋಕಪುರಂ ಅಭಿಮಾನಿಗಳ ಬಳಗ, ಗಂಗೋತ್ರಿ ಸಂಶೋಧನಾ ವಿದ್ಯಾರ್ಥಿ ಒಕ್ಕೂಟ, ಪ್ರಗತಿಪರ ಸಂಘಟನೆಗಳು ಮತು ದಲಿತ ಸಂಘರ್ಷ ಸಮಿತಿ ಸೋಮವಾರ ಚಾಮುಂಡಿ ಬೆಟ್ಟದಲ್ಲಿ ಆಯೋಜಿಸಿದ್ದ ಗೌರಿ ಲಂಕೇಶ್ ವೇದಿಕೆಯಲ್ಲಿ ಮೂಲ ನಿವಾಸಿಗಳ ಮಹಿಷ ಸಾಂಸ್ಕತಿಕ ಹಬ್ಬ ‘ಮಹಿಷ ದಸರಾ’ವನ್ನು ಸಾಹಿತಿ ಸಿದ್ದಸ್ವಾಮಿ ರಚಿಸಿರುವ ‘ದೇವರುಗಳ ಲೈಂಗಿಕ ರಹಸ್ಯ’, ‘ಎಸ್.ಸಿದ್ದಾರ್ಥ ಎಂಬ ಆರ್ಕೆಸ್ಟ್ರಾ ಕೋಗಿಲೆ’, ಪ್ರೊ.ಮಹೇಶ್‌ಚಂದ್ರ ಗುರು ರಚಿಸಿರುವ ‘ಹಿಂದೂಗಳು ದನದ ಮಾಂಸ ತಿನ್ನುತ್ತಿದ್ದರು’ ಎಂಬ ಪುಸ್ತಕಗಳನ್ನು ಬಿಡುಗಡೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ರಾಮನಾಥ ಕೋವಿಂದ ರಾಷ್ಟ್ರಾಧ್ಯಕ್ಷರಾದ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ಎಲ್ಲಿಯೂ ಸಹ ಅಂಬೇಡ್ಕರ್ ಅವರ ಹೆಸರನ್ನು ಪ್ರಸ್ತಾಪ ಮಾಡುವುದಿಲ್ಲ. ಏಕೆಂದರೆ ಇವರು ಬಿಜೆಪಿಯವರ ಕಪಿಮುಷ್ಟಿಯಲ್ಲಿ ಇರುವವರು, ಇಂಥವರು ಬಹು ಸಂಖ್ಯಾತರ ಬಗ್ಗೆ ಕಾಳಜಿ ವಹಿಸುವುದು ಸಾಧ್ಯವೇ ಎಂದು ಪ್ರಶ್ನಿಸಿದರು. ಎಲ್ಲಾ ಸಮಾಜದಲ್ಲೂ ರಾಮನಾಥ್ ಕೋವಿಂದ ಅಂತಹ ವ್ಯಕ್ತಿಗಳು ಇರುತ್ತಾರೆ. ಆದ್ದರಿಂದ ನಾವುಗಳು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

 ದೇಶದ ಇತಿಹಾಸವನ್ನು ಮರೆಮಾಚಿ ಸುಳ್ಳು ಪ್ರತಿಪಾದನೆ ಮಾಡುತ್ತ ಜನರ ವಿಚಾರ ಶಕ್ತಿಗೆ ಬೀಗ ಹಾಕುತ್ತಿರುವ ಪುರೋಹಿತ ಶಾಹಿಗಳು ದೇಶದ ಮೊದಲ ಶತ್ರುಗಳು ಎಂದು ವಿಚಾರವಾದಿ ಎ.ಕೆ.ಸುಬ್ಬಯ್ಯ ತಿಳಿಸಿದರು.

ದೇಶದಲ್ಲಿ ಪುರೋಹಿತ ಶಾಹಿಗಳು ಹಿಂದಿನಿಂದಲೂ ಮೌಢ್ಯವನ್ನು ಬಿತ್ತುತ್ತ ಜನರ ಭಾವನೆಗಳಿಗೆ ಭಯವನ್ನು ಉಂಟುಮಾಡುತ್ತ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಲಿ ಚಕ್ರವರ್ತಿಯನ್ನು ಮೋಸದಿಂದ ಕೆಳಗಿಳಿಸಿ ಆತನನ್ನು ಮೋಸದಿಂದ ಸಾಯಿಸುತ್ತಾರೆ. ಕೊಲೆ ಮಾಡಿದವರನ್ನು ನಾವು ಪೂಜೆಮಾಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಉತ್ತರದಲ್ಲಿ ದೀಪಾವಳಿ ಸಮಯದಲ್ಲಿ ಬಲಿಪಾಡ್ಯಮಿ ಆಚರಿಸಿ ಸಂಭ್ರಮಿಸುತ್ತಾರೆ. ಆದರೆ ಕೇರಳದಲ್ಲಿ ಓಣಂ ವೇಳೆ ಬಲಿ ಚಕ್ರವರ್ತಿಗೆ ಪೂಜೆ ಸಲ್ಲಿಸುತ್ತಾರೆ ಎಂದು ಎ.ಕೆ.ಸುಬ್ಬಯ್ಯ ಹೇಳಿದರು.

ವೈದಿಕ ಶಾಹಿಯನ್ನು ವೈಭವೀಕರಿಸಲು ಮೈಸೂರು ದಸರಾ ಆಚರಿಸಲಾಗುತ್ತಿದೆ. ಆದರೆ ಇದು ಜನವಿರೋಧಿ ದಸರಾ, ಮಹಿಷ ಮಂಡಲವನ್ನು ಆಳಿದ ಮಹಿಷನಿಗೆ ಗೌರವ ಸಲ್ಲಬೇಕು ಇನ್ನು ಮುಂದೆ ಮಹಿಷ ದಸರಾ ಆಚರಣೆಯಾಗಬೇಕು ಅದು ಕರ್ನಾಟಕದ ನಾಡಹಬ್ಬ ಆಗಬೇಕು. ಆಗ ಮಾತ್ರ ನಿಜವಾದ ಸ್ವಾತಂತ್ರ್ಯ ಸಿಕ್ಕಿದ ಹಾಗೆ ಆಗುತ್ತದೆ ಎಂದು ಹೇಳಿದರು.

ಈ ದೇಶದ ವೈದಿಕ ಶಾಹಿಗಳು ಸುಳ್ಳನ್ನು ಬಿತ್ತಿ ನಮ್ಮ ಆಲೋಚನಾ ಶಕ್ತಿಯನ್ನು ಕೊಂದು ಅಧಿಕಾರ ನಡೆಸುತ್ತಿದ್ದಾರೆ. ಇವರ ಆಡಳಿತವನ್ನು ಕೊನೆಗೊಳ್ಳಿಸಲು ಕೇರಳದಲ್ಲಿ ಕ್ರಾಂತಿಯನ್ನೇ ಮಾಡಿದ ಪೆರಿಯಾರ್ ಮತ್ತೆ ಹುಟ್ಟಿ ಬರಬೇಕು, ಹಾಗೆಯ ಲಿಂಗಾಯತ ಧರ್ಮದ ರೂಪದಲ್ಲಿ ಬಸವಣ್ಣ ಮತ್ತೆ ಹುಟ್ಟಿ ಬರುತ್ತಿದ್ದಾರೆ. ಬಸವಣ್ಣ ಹೇಳುತ್ತಿದ್ದ ಲಿಂಗಾಯತ ಧರ್ಮವನ್ನು ಇಷ್ಟುದಿನ ಕೊಂದು ಬಿಟ್ಟಿದ್ದರು. ಆದರೆ ಲಿಂಗಾಯತ ಎಂಬುದು ಪ್ರತ್ಯೇಕ ಧರ್ಮ ಎಂದು ಹೇಳಿದರು.

ಪ್ರಗತಿಪರ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ ಸರಕಾರ ಜಾತಿಯನ್ನು ಗುರುತಿಸುವುದನ್ನು ಮೊದಲು ನಿಲ್ಲಿಸಬೇಕು, ಎಲ್ಲಾ ಜಾತಿಯಲ್ಲಿರುವ ಬಡವರನ್ನು ಗುರುತಿಸಿ ಅವರಿಗೆ ಸರಕಾರದಿಂದ ಸಲ್ಲುವ ಸೌಲಭ್ಯಗಳನ್ನು ನೀಡಲಿ. ಜೊತೆಗೆ ಅಂತರ್ಜಾತಿ ಮದುವೆಯಾದವರಿಗೆ ಮಾತ್ರ ಸರಕಾರಿ ಕೆಲಸ, ಲೋಕಸಭಾ ವಿಧಾನಸಭಾ ಚುನಾವಣೆಯಲ್ಲಿ ನಿಲ್ಲುವ ಅವಕಾಶ ಎಂದು ಘೋಷಣೆ ಮಾಡಲಿ ಆಗ ಮಾತ್ರ ಜಾತಿ ವ್ಯವಸ್ಥೆ ದೂರ ಆಗುತ್ತದೆ ಎಂದು ಅಭಿಪ್ರಾಯಿಸಿದರು.

ಇದಕ್ಕೂ ಮೊದಲು ಪುರಭವನದ ಮುಂಭಾಗ ಇರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಪ್ರೊ.ಶಬ್ಬೀರ್ ಮುಸ್ತಾಫ ಅವರು ಮಾಲಾರ್ಪಣೆ ಮಾಡುವ ಮೂಲಕ ಬೈಕ್ ರ್ಯಾಲಿಗೆ ಚಾಲನೆ ನೀಡಿದರು. ಮೈಸೂರಿನ ವಿವಿಧ ಬಡಾವಣೆಗಳಿಂದ ಬಂದಿದ್ದ ಹಲವಾರು ಮಂದಿ ಚಾಮುಂಡಿ ಬೆಟ್ಟಕ್ಕೆ ಬೈಕ್ ರ್ಯಾಲಿಯಲ್ಲಿ ಬಂದು ಮಹಿಷಾಸುರನಿಗೆ ಪುಷ್ಪನಮನ ಸಲ್ಲಿಸಿ ಜೈಕಾರ ಹಾಕಿದರು.

ಕಾರ್ಯಕ್ರಮದಲ್ಲಿ ಉರಿಲಿಂಗ ಪೆದ್ದ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ದಲಿತ ವೆಲ್ಫೇರ್ ಟ್ರಸ್ಟ್‌ನ ಶಾಂತರಾಜು, ಪ್ರೊ.ಮಹೇಶ್‌ಚಂದ್ರ ಗುರು, ಪ್ರಾಧ್ಯಪಕ ಸಿ.ಬಸವರಾಜು, ಹರಿಹರ ಆನಂದಸ್ವಾಮಿ, ಸಾಹಿತಿ ಸಿದ್ದಸ್ವಾಮಿ, ಎಸ್‌ಡಿಪಿಐನ ಕಲೀಂ, ಮಾಜಿ ಮೇಯರ್ ಪುರುಷೋತ್ತಮ್, ಗೋವಿಂದರಾಜ್, ವಿವಿಧ ಮಠಗಳ ಸ್ವಾಮೀಜಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News