ನೀರಾವರಿ ವಿಚಾರದಲ್ಲಿ ಸರಕಾರ ತಮಾಷೆ ಮಾಡುತ್ತಿಲ್ಲ : ಸಿಎಂ ಸಿದ್ದರಾಮಯ್ಯ

Update: 2017-09-18 16:14 GMT

ಚಿಕ್ಕಬಳ್ಳಾಪುರ,ಸೆ.18:ತಜ್ಞರಿಂದ ಪ್ರಮಾಣೀಕರಿಸಿದ ನಂತರ ಎತ್ತಿನಹೊಳೆ, ಕೆಸಿ ವ್ಯಾಲಿ ಹಾಗೂ ಹೆಬ್ಬಾಳ-ನಾಗವಾರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಹೊರತು, ನೀರಾವರಿ ವಿಚಾರದಲ್ಲಿ ಸರ್ಕಾರ ಯಾವುದೇ ತಮಾಷೆ ಮಾಡ್ತಾಯಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕ ವಿರುದ್ಧ ಹರಿಹಾಯ್ದರು.

ನಗರದ ಹೊರವಲಯದ ಸೂಲಾಲಪ್ಪನದಿನ್ನೆಯಲ್ಲಿ ಹಮ್ಮಿಕೊಂಡಿದ್ದ ಹೆಬ್ಬಾಳ-ನಾಗವಾರ ಏತನೀರಾವರಿ ಯೋಜನೆ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದ ಅವರು, ಸತತ ಬರದಿಂದ ಬಸವಳಿದ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರೊದಗಿಸುವ ಬದ್ಧತೆಯೊಂದಿಗೆ ಸರ್ಕಾರವು ಸುಮಾರು 15 ಸಾವಿರ ಕೋಟಿ ರೂ.ಗಳ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು.

ಗೋಲಿ ಆಟ ಅಲ್ಲ!

ನೀರಾವರಿ ತಜ್ಞರಿಂದ ಸಮಗ್ರ ಮಾಹಿತಿಯೊಂದಿಗೆ ಸುಮಾರು 13 ಸಾವಿರ ಎತ್ತಿನಹೊಳೆ ಯೋಜನೆಯ ಮೂಲಕ ಬಯಲುಸೀಮೆಯ ಭಾಗದ ಜಿಲ್ಲೆಗಳಿಗೆ 15 ಟಿಎಂಸಿ ನೀರು ಕುಡಿಯಲು ಹಾಗೂ 9 ಟಿಎಂಸಿ ನೀರು 196 ಕೆರೆಗಳಿಗೆ ನೀರು ತುಂಬಿಸಲಾಗುವುದು. ಅಲ್ಲದೆ ಈ ಯೋಜನೆ ಈಗಾಗಲೇ 2.5 ಸಾವಿರ ಕೋಟಿ ರೂಗಳನ್ನು ಬಿಡುಗಡೆಗೊಳಿಸಲಾಗಿದ್ದು, ಕಾಮಗಾರಿಯನ್ನು ಕ್ಷಿಪ್ರಗತಿಯಲ್ಲಿ ನಡೆಸಲಾಗುತ್ತಿದೆ ಹೊರತು ಗೋಲಿ ಆಟ ಆಡ್ತಾ ಇಲ್ಲ ಎಂದು ವ್ಯಂಗ್ಯವಾಡಿದರು.

ಅಪಪ್ರಚಾರದಲ್ಲಿ ಸತ್ಯಾಂಶವಿಲ್ಲ

ಎತ್ತಿನಹೊಳೆ ಜೊತೆಗೆ ಸುಮಾರು 947 ಕೋಟಿ ರೂ.ಗಳ ವೆಚ್ಚದಲ್ಲಿ ಬೆಂಗಳೂರಿನಿಂದ ನೆರೆಯ ತಮಿಳುನಾಡಿಗೆ ಸೇರುತ್ತಿದ್ದ ಕೊಳಚೆ ನೀರನ್ನು ಎರಡು ಹಂತದಲ್ಲಿ ಶುದ್ಧೀಕರಿಸಿ, ಬೆಂಗಳೂರು ನಗರ, ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಸುಮಾರು 65 ಕೆರೆಗಳನ್ನು ತುಂಬಿಸುವ ಮೂಲಕ ಈ ಭಾಗದ ಅಂತರ್ಜಲ ಮಟ್ಟವನ್ನು ಏರಿಸಲು ಸರ್ಕಾರ ಮುಂದಾಗಿದೆ. ಆದರೆ ಈ ಯೋಜನೆಯ ಕುರಿತು ಕೆಲವು ವಿರೋಧಿಗಳು ಮಾಡುತ್ತಿರುವ ಅಪಪ್ರಚಾರದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಜನಪರ ಕಾರ್ಯಗಳಿಗೆ ಕೈಜೋಡಿಸಿ

ಚುನಾವಣಾ ಸಂದರ್ಭದಲ್ಲಿ ರಾಜಕಾರಣ ಮಾಡಬೇಕು. ಅದನ್ನು ಹೊರತುಪಡಿಸಿ ಅಭಿವೃದ್ಧಿ ಹಾಗೂ ಜನಪರ ಕಾಳಜಿಯೊಂದಿಗೆ ಕೈಗೊಳ್ಳುವ ಕಾರ್ಯಕ್ರಮಗಳಿಗೆ ಯಾವುದೇ ಕಾರಣಕ್ಕೂ ಅಡ್ಡಗಾಲು ಹಾಕಬಾರದೆಂದು ಕಿಡಿಕಾರಿದ ಅವರು, ಹಾಗೊಂದು ವೇಳೆ ಜನಪರ ಚಿಂತನೆಯೊಂದಿಗೆ ಹಮ್ಮಿಕೊಳ್ಳುವ ಯೋಜನೆಗಳ ಕುರಿತು ಅಪಪ್ರಚಾರ ಮಾಡಿದಲ್ಲಿ ಮುಂಬರುವ ದಿನಗಳಲ್ಲಿ ಜನತೆಯೇ ತಕ್ಕ ಪಾಠ ಕಲಿಸುವರು ಎಂದು ಅಭಿಪ್ರಾಯಪಟ್ಟರು.

ಶಾಸಕ ಡಾ.ಕೆ. ಸುಧಾಕರ್ ಮಾತನಾಡಿ, ತಮ್ಮ ಅಧಿಕಾರಾವಧಿಯಲ್ಲಿ ಬಯಲುಸೀಮೆ ಭಾಗದ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವ ಗೋಜಿಗೆ ಹೋಗದ ವಿರೋಧಪಕ್ಷಗಳು, ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸುಮಾರು 15 ಸಾವಿರ ಕೋಟಿ ರೂಗಳ ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗುತ್ತಿದ್ದಂತೆ ಟೀಕೆ ಟಿಪ್ಪಣಿಗಳನ್ನು ಮಾಡುತ್ತಿರುವುದು ವಿಪರ್ಯಾಸವಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವರಿ ಸಚಿವ ರಾಮಲಿಂಗಾರೆಡ್ಡಿ, ಸಣ್ಣ ನೀರಾವರಿ ಸಚಿವ ಟಿ.ಬಿ. ಜಯಚಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ, ಸಂಸದರಾದ ಎಂ. ವೀರಪ್ಪ ಮೊಯಿಲಿ, ಕೆ.ಎಚ್. ಮುನಿಯಪ್ಪ, ಶಾಸಕರಾದ ಎಸ್.ಎನ್. ಸುಬ್ಬಾರೆಡ್ಡಿ, ಎಂ.ರಾಜಣ್ಣ, ವಿಧಾನಪರಿಷತ್ ಸದಸ್ಯ ಆರ್. ಚೌಡರೆಡ್ಡಿ ತೂಪಲ್ಲಿ, ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ಸೇರಿದಂತೆ ಮತ್ತಿತರರು ಇದ್ದರು.

ಬಾಗೇಪಲ್ಲಿಗೂ ನೀರು

ಜಿಲ್ಲೆಯ ಚಿಂತಾಮಣಿ ಹಾಗೂ ಬಾಗೇಪಲ್ಲಿ ತಾಲೂಕುಗಳನ್ನು ಹೊರತುಪಡಿಸಿ ಕೈಗೊಂಡಿರುವ ಹೆಬ್ಬಾಳ-ನಾಗವಾರ ಕೊಳಚೆ ನೀರು ಸಂಸ್ಕರಿಸಿದ ನೀರನ್ನು ಜಿಲ್ಲೆಯ ಉಳಿದ ತಾಲೂಕುಗಳ ಸುಮಾರು 44 ಕೆರೆಗಳನ್ನು ತುಂಬಿಸುವ ಯೋಜನೆಯೊಂದಿಗೆ ಬಾಗೇಪಲ್ಲಿ ತಾಲೂಕಿನ 14 ಕೆರೆಗಳು ಸೇರ್ಪಡೆಗೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಅಲ್ಲದೆ ಬಾಗೇಪಲ್ಲಿ ಕೆರೆಗಳಿಗೆ ನೀರು ತುಂಬುವ ಕಾಮಗಾರಿಗೆ ಬೇಕಾವ ಹೆಚ್ಚುವರಿ ಅನುದಾನವನ್ನೂ ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದರು.

ವೈದ್ಯಕೀಯ ಕಾಲೇಜಿಗೆ ಅಡಿಗಲ್ಲು

ರಾಜ್ಯ ಸರ್ಕಾರವು ಬಜೆಟ್‍ನಲ್ಲಿ ಘೋಷಿಸಿರುವಂತೆ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ವೈದ್ಯಕೀಯ ಕಾಲೇಜಿನ ಶಂಕುಸ್ಥಾಪನೆಯನ್ನು ಚುನಾವಣೆಗೂ ಮುನ್ನವೇ ನೆರವೇರಿಸುವಂತೆ ಶಾಸಕ ಸುಧಾಕರ್ ಅವರ ಬೇಡಿಕೆಯನ್ನು ಪುರಸ್ಕರಿಸಿದ ಸಿಎಂ ಸಿದ್ದರಾಮಯ್ಯ, ಚುನಾವಣೆಗೆ ಮುನ್ನವೇ ಶಂಕುಸ್ಥಾಪನೆ ನೆರವೇರಿಸುವುದಾಗಿ ಘೋಷಣೆ ಮಾಡಿದರು.

ವಿವಿಧ ಕಾಮಗಾರಿಗಳಿಗೆ ಚಾಲನೆ

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 1,122 ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಸಿಎಂ ಸಿದ್ಧರಾಮಯ್ಯ ಸೋಮವಾರದಂದು ಚಾಲನೆ ನೀಡಿದರು. ಸುಮಾರು 947 ಕೋಟಿ ರೂ. ವೆಚ್ಚದ ಹೆಬ್ಬಾಳ ನಾಗವಾರ ವ್ಯಾಲಿಯ ಯೋಜನೆಗೆ ಚಾಲನೆ, ನಗರೋತ್ಥಾನ ಮೂರನೇ ಹಂತದ 30 ಕೋಟಿ ರೂ.ಗಳ ಅನುದಾನ, 50 ಕೋಟಿ ರೂಗಳ ವಿಶೇಷ ಅನುದಾನ ಸೇರಿದಂತೆ ವಿವಿಧ ಅನುದಾನಗಳಲ್ಲಿ ಚಿಕ್ಕಬಳ್ಳಾಪುರ ನಗರದ ಸಮಗ್ರ ಅಭಿವೃದ್ಧಿಯ ಕಾಮಗಾರಿಗಳಿಗೆ, 3 ಕೊಟಿ ರೂ. ವೆಚ್ಚದ ಸರ್ಕಾರಿ ಜೂನಿಯರ್ ಕಾಲೇಜು ಕಟ್ಟ ನಿರ್ಮಾಣಕ್ಕೆ, ಲೋಕೋಪಯೋಗಿ ಇಲಾಖೆಯ 37 ಕೋಟಿ ರೂಗಳ ರಸ್ತೆ ಕಾಮಗಾರಿಗಳಿಗೆ, 6.06 ಕೋಟಿ ರೂಗಳಲ್ಲಿ ಪ್ರವಾಸೋದ್ಯಮ, ಕ್ಷೇತ್ರದ ಎಲ್ಲ ಕಾಲೋನಿಗಳಲ್ಲಿ  ಸಿಸಿ ರಸ್ತೆ, ಚರಂಡಿ ಚರಂಡಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಅಲ್ಲದೆ ನಗರದಲ್ಲಿ ಸುಮಾರು 9.92 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸರ್ಕಾರಿ ಬಸ್‍ನಿಲ್ದಾಣ, 14.43 ಕೋಟಿ ರೂಗಳಲ್ಲಿ ತಾಲೂಕಿನ ರೇಣುಮಾಕಲಹಳ್ಳಿಯಲ್ಲಿ ನಿರ್ಮಾಣವಾಗಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಗಾಂಧಿ ಪಥ ಗ್ರಾಮಪಥ ಯೋಜನೆಯಡಿ ಸುಮಾರು 21.85 ಕೋಟಿ ರೂಗಳಲ್ಲಿ ಕೈಗೊಂಡಿರುವ ರಸ್ತೆಗಳ ಉದ್ಘಾಟನೆಯನ್ನು ಸಿಎಂ ಸಿದ್ದರಾಮಯ್ಯ ನೆರವೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News