ಸೆ.23ರಂದು ಮನೆ ಮನೆಗೆ ಕಾಂಗ್ರೆಸ್ ಅಭಿಯಾನಕ್ಕೆ ಚಾಲನೆ: ಎಚ್.ಬಿ. ಮಂಜಪ್ಪ
ದಾವಣಗೆರೆ, ಸೆ.20: ಜಿಲ್ಲಾದ್ಯಂತ ಮನೆ ಮನೆಗೆ ಕಾಂಗ್ರೆಸ್ ಎಂಬ ಕಾರ್ಯಕ್ರಮಕ್ಕೆ ಸೆ.23ರಂದು ಬೆಳಗ್ಗೆ 11ಕ್ಕೆ ಪ್ರತಿ ಬೂತ್ನಲ್ಲಿ ಚಾಲನೆ ದೊರೆಯಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಡಾ.ಶಾಮನೂರು ಶಿವಶಂಕರಪ್ಪ ಭವನದಲ್ಲಿ ಬುಧವಾರ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರದ ಸಾಧನೆಗಳು ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಒಳಗೊಂಡ ಒಂದು ಪುಸ್ತಿಕೆಯನ್ನು ಕೆಪಿಸಿಸಿಯಿಂದ ಮುದ್ರಿಸಿ ಪ್ರತಿಬೂತ್ನ ಪ್ರತಿ ಮನೆಗೆ ತಲುಪಿಸಲು ಅಗತ್ಯವಿರುವಷ್ಟು ಪ್ರತಿಗಳನ್ನು ಎಲ್ಲಾ ವಿಧಾನ ಸಭಾ ಕ್ಷೇತ್ರಗಳಿಗೆ ತಲುಪಿಸಲಾಗುತ್ತಿದೆ ಎಂದ ಅವರು, ಸೆ. 23ರಂದು ಮನೆ ಮನೆಗೆ ಕಾಂಗ್ರೆಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಧಾನಸಭಾ ಕ್ಷೇತ್ರದ ಎಲ್ಲಾ ಬ್ಲಾಕ್ನ ಪದಾಧಿಕಾರಿಗಳು, ಕ್ಷೇತ್ರದ ಎಲ್ಲಾ ಹಂತದ ಚುನಾಯಿತ ಪ್ರತಿನಿಧಿಗಳು, ಸ್ಪರ್ಧಿಸಿದ್ದ ಅಭ್ಯರ್ಥಿಗಳು, ಪದಾಧಿಕಾರಿಗಳು, ಶಾಸಕರು ಹಾಗೂ ಎಲ್ಲಾ ಸ್ಥಳೀಯ ಮುಖಂಡರಗಳನ್ನು ಒಳಗೊಂಡು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 2013ರಲ್ಲಿ ಅಧಿಕಾರಕ್ಕೆ ಬಂದಿದ್ದು, ಬಡವರ, ಶೋಷಿತರ, ಅವಕಾಶ ವಂಚಿತರ ಮಹಿಳೆಯರ ಹಾಗೂ ರೈತರ ಪರವಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದು ಜನಪರವಾದ ಸರ್ಕಾರ ಎಂಬುದನ್ನು ಸಾಬೀತುಪಡಿಸದೆ ಎಂದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಮಾಜಿ ದೂಡಾ ಅಧ್ಯಕ್ಷ ಅಯೂಬ್ ಪೈಲ್ವಾನ್, ಜಿಲ್ಲಾ ಕಾಂಗ್ರೆಸ್ ವೀಕ್ಷಕ ಗುಲ್ಷಾದ್ ಅಹಮದ್, ಮಾಜಿ ಮೇಯರ್ ಆಶ್ವಿನಿ ಪ್ರಶಾಂತ್, ಅಂಜಿನಪ್ಪ, ದುಗ್ಗೇಶ್, ಬಿ.ಜಿ.ನಾಗರಾಜ್, ಶಿವು, ಮೃತ್ಯುಂಜಯ, ದಿನೇಶ್ ಮತ್ತಿತರರು ಇದ್ದರು.