ಹೊನ್ನಾವರ: ಸಮವಸ್ತ್ರ, ಸೈಕಲ್ ವಿತರಣೆ
ಹೊನ್ನಾವರ, ಸೆ.21: ತಾಲೂಕಿನ ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣಕ್ಕಾಗಿ ದಾನಿಗಳಿಂದ ಕೊಡಮಾಡಿದ ಕಂಪ್ಯೂಟರ್, ಸಮವಸ್ತ್ರ ಮತ್ತು ಸರಕಾರದಿಂದ ನೀಡಲ್ಪಟ್ಟ ಸೈಕಲ್ ಸಾಂಕೇತಿಕವಾಗಿ ಹಸ್ತಾಂತರಿಸುವ ಕಾರ್ಯಕ್ರಮ ಗುರುವಾರ ನಡೆಯಿತು.
ಜಿಲ್ಲಾ ಪಂಚಾಯತ್ ಸದಸ್ಯ ಶಿವಾನಂದ ಹೆಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಸೂಕ್ತವಾದ ಗುರಿ ಮತ್ತು ಗುರುವನ್ನು ಆಯ್ಕೆ ಮಾಡಿಕೊಂಡು ಬದುಕಿನ ದೀಪವನ್ನು ಬೆಳಗಿಸಿಕೊಳ್ಳಲು ಹಂಬಲಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಕೃಷ್ಣಮೂರ್ತಿ ಹೆಬ್ಬಾರ ಮಾತನಾಡಿ, ಬದುಕಿನ ಹಾದಿಯಲ್ಲಿ ಓಡುವ ಮೊದಲು ನಡಿಗೆಯಲ್ಲಿ ಸಾಮರ್ಥ್ಯ ಪಡೆಯಬೇಕು. ಅಂತೆಯೇ ಜೀವನದ ಪ್ರತಿ ಹೆಜ್ಜೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಮುಂದುವರಿಯಲು ಕೌಶಲಯುತ ಶಿಕ್ಷಣ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಾಧ್ಯಾಪಕ ಎಲ್. ಎಮ್.ಹೆಗಡೆ ಮಾತನಾಡಿದರು. ಗ್ರಾಮ ಪಂಚಾಯತ್ ಸದಸ್ಯ ನಾಗರಾಜ ಗೌಡ, ಮಹಾಬಲೇಶ್ವರ ಮೇಸ್ತ, ಜಿ.ಕೆ.ಶೇಟ್, ಮಾದೇವಿ ಮುಕ್ರಿ, ಶಿವಿ ಮುಕ್ರಿ ಉಪಸ್ಥಿತರಿದ್ದರು.