ದಲಿತನನ್ನು ಪ್ರೇಮಿಸಿದ್ದ ಮಗಳನ್ನೇ ಉಸಿರುಗಟ್ಟಿಸಿ ಕೊಂದ ಹೆತ್ತವರು

Update: 2017-10-14 10:08 GMT

ಮಧುರೈ,ಅ.14 :  ದಲಿತ ಯುವಕನೊಬ್ಬನೊಂದಿಗೆ ಪ್ರೇಮ ವ್ಯವಹಾರ ಹೊಂದಿದ್ದ  ತಮ್ಮ 16 ವರ್ಷದ ಪುತ್ರಿ ತಮ್ಮ ಕುಟುಂಬದ ಮಾನ ಕಳೆಯುತ್ತಿದ್ದಾಳೆಂದು  ಆಕೆಯ ಹೆತ್ತವರೇ ಆಕೆಯನ್ನು  ಹಗ್ಗದಿಂದ  ಉಸಿರುಗಟ್ಟಿಸಿ ಸಾಯಿಸಿದ ಘಟನೆ ಕಿಲವನೇರಿ ಗ್ರಾಮದಿಂದ ವರದಿಯಾಗಿದೆ. ಬಾಲಕಿಯ ಹೆತ್ತವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆಂದು ಪೊಲೀಸರು ಹೇಳಿದ್ದಾರೆ.

ತಮ್ಮ ಪುತ್ರಿಯ ಜೀವನ ಶೈಲಿ ಮತ್ತಾಕೆ  ಬೇರೆ ಜಾತಿಯ ಯುವಕನೊಬ್ಬನೊಂದಿಗೆ ಹೊಂದಿದ್ದ ಪ್ರೇಮ ಸಂಬಂಧದಿಂದ ಬೇಸತ್ತು ಅವರು ಈ ಮರ್ಯಾದಾ ಹತ್ಯೆ ನಡೆಸಿದ್ದಾರೆಂದು ತಿಳಿದು ಬಂದಿದೆ. ಮೃತ ಹುಡುಗಿ ಮೇಲ್ಜಾತಿಗೆ ಸೇರಿದವಳಾಗಿದ್ದು ಆಕೆಯದ್ದು ರೈತ ಕುಟುಂಬವಾಗಿತ್ತು, ಮಗಳು  ಹತ್ತನೇ ತರಗತಿಯಲ್ಲಿ ಅನುತ್ತೀರ್ಣಳಾಗಿದ್ದರಿಂದ  ಆಕೆ  ಅಕ್ಟೋಬರ್ 7ರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆಕೆಯ ಹೆತ್ತವರು ಹೇಳಿದ್ದರು. ನಂತರ ಆಕೆಯ ಮೃತದೇಹವನ್ನು ಮಧುರೈ ಸರಕಾರಿ ಆಸ್ಪತ್ರೆಗೆ ಪೋಸ್ಟ್ ಮಾರ್ಟಂಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸಂಶಯ ವ್ಯಕ್ತ ಪಡಿಸಲಾಗಿತ್ತಲ್ಲದೆ ಆಕೆಯ ಕುತ್ತಿಗೆ ಸುತ್ತ ಉಸಿರುಗಟ್ಟಿಸಿದ ಗುರುತುಗಳೂ ಇದ್ದವು ಎಂದು ಹೇಳಲಾಗಿತ್ತು.

ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ  ಬಾಲಕಿಯ ಹೆತ್ತವರಾದ ಆರ್ ಜ್ಞಾನವೇಲ್ ಹಾಗೂ ಸೀತಾಲಕ್ಷ್ಮಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರು. ಆಕೆ ಅವರ ನಾಲ್ಕನೇ ಮತ್ತು ಕಿರಿಯ ಪುತ್ರಿಯಾಗಿದ್ದಳು ಹಾಗೂ ಗ್ರಾಮದಲ್ಲಿನ ಅನೇಕ ಹುಡುಗರೊಂದಿಗೆ ಆಕೆ ಸಂಬಂಧವನ್ನು ಹೊಂದಿದ್ದಳೆಂದೂ ಆರೋಪಿಸಿದ್ದರೆಂದು ತಿಳಿದು ಬಂದಿದೆ.  ಹುಡುಗಿ ಸ್ನೇಹದಿಂದಿದ್ದಳು ಎನ್ನಲಾದ ಹುಡುಗರನ್ನು ಪೊಲೀಸರು ಪ್ರಶ್ನಿಸುವ ಸಾಧ್ಯತೆಯಿದೆ. ಬಾಲಕಿಯ ಹೆತ್ತವರನ್ನು ಬಂಧಿಸಲಾಗಿದ್ದು ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News