ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ದಶಮಾನೋತ್ಸವ ಹಾಗೂ ಮಾಧ್ಯಮ ಪ್ರಶಸ್ತಿ-2017 ಪ್ರದಾನ
ದಾವಣಗೆರೆ,ಅ.15: ಪತ್ರಕರ್ತರ ಮಕ್ಕಳಿಗೆ ಪಿಯುಸಿ ಹಂತದವರೆಗೂ ನಮ್ಮ ಬಾಪೂಜಿ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಭರವಸೆ ನೀಡಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ದಶಮಾನೋತ್ಸವ ಹಾಗೂ ಮಾಧ್ಯಮ ಪ್ರಶಸ್ತಿ-2017 ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೇ ನಮ್ಮ ತಂದೆ, ಶಾಸಕ ಶಾಮನೂರು ಶಿವಶಂಕರಪ್ಪ ಅವರು ಪತ್ರಕರ್ತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸ್ಕಾಲರ್ಶಿಪ್ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಪತ್ರಕರ್ತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಕ್ರಮಕೈಗೊಳ್ಳಲಾಗುವುದು ಎಂದ ಅವರು, ಬೆಂಗಳೂರು ಹಾಗೂ ಮೈಸೂರಿನಲ್ಲಿರುವ ಪ್ರೆಸ್ಕ್ಲಬ್ಗಳಂತೆ ಇಲ್ಲಿಯೂ ಸುಸಜ್ಜಿತ ಸ್ವಂತ ಪ್ರೆಸ್ಕ್ಲಬ್ ನಿರ್ಮಿಸಲು ಸಂಪೂರ್ಣ ಬೆಂಬಲ ನೀಡಲಾಗುವುದೆಂದರು.
ಪತ್ರಕರ್ತರು ಯಾವುದೇ ಆಸೆ, ಆಮಿಷಯಕ್ಕೆ ಒಳಗಾಗದೇ ನಿಷ್ಪಕ್ಷಪಾತವಾಗಿ ವರದಿ ನೀಡಬೇಕು. ವರದಿಗಾರರ ಕೂಟದ ಮುಖ್ಯಸ್ಥರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಾಗಬೇಕು. ಹಳೆಯ ಪತ್ರಕರ್ತರನ್ನು ಗುರುತಿಸಿ ಗೌರವಿಸುವ ಕಾರ್ಯವಾಗಬೇಕೆಂದರು.
ದಶಮಾನೋತ್ಸವ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ್, ಪತ್ರಕರ್ತರು ನಿಜವಾದ ಅಂಶವನ್ನು ಪರಿಶೀಲಿಸಿ ಅದು ಸರಿ ಅಥವಾ ತಪ್ಪಿದ್ದರೂ ಬರೆಯುವ ಮನೋಭಾವ ರೂಢಿಸಿಕೊಳ್ಳಬೇಕು. ಸಮಾಜದ ಲೋಪದೋಷಗಳನ್ನು ಬರವಣೆಗೆಯ ಮೂಲಕ ತಿದ್ದುವ ಕಾರ್ಯವಾಗಬೇಕೆಂದರು.
ಕುವೆಂಪು ವಿವಿಯ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ.ಡಿ.ಎಸ್. ಪೂರ್ಣಾನಂದ ವಿಶೇಷ ಉಪನ್ಯಾಸ ನೀಡುತ್ತಾ, ವರ್ಷದಿಂದ ವರ್ಷಕ್ಕೆ ವಿದೇಶಗಳಲ್ಲಿ ಮುದ್ರಣ ಮಾದ್ಯಮಗಳು ಅವನತಿ ಅಂಚಿನತ್ತಾ ಸಾಗಿವೆ. ಆದರೆ, ಭಾರತದಲ್ಲಿ ಇದು ವ್ಯತಿರಿಕ್ತವಾಗಿದ್ದು ವರ್ಷದಿಂದ ವರ್ಷಕ್ಕೆ ಮುದ್ರಣ ಮಾದ್ಯಮಗಳು ಹೆಚ್ಚಾಗುತ್ತಿರುವ ಜೊತೆಗೆ ಓದುಗರ ಸಂಖ್ಯೆಯೂ ಹೆಚ್ಚಾಗುತ್ತಿರುವುದು ಸಂತಸದ ವಿಚಾರ ಎಂದ ಅವರು, ಭಾರತದಲ್ಲಿ ಮುಂದಿನ 20-30 ವರ್ಷಗಳವರೆಗೂ ಮುದ್ರಣ ಮಾದ್ಯಮ ಬೆಳೆಯಲಿದೆ ಎಂದು ಅವರು ತಿಳಿಸಿದರು.
ಎಲ್ಲಿಯವರೆಗೆ ಮಾದ್ಯಮಗಳು ಚಂದಾದಾರರನ್ನು ಅವಲಂಬಿಸಿರುತ್ತವೋ ಅಲ್ಲಿಯವರೆಗೆ ಪತ್ರಿಕಾ ಸ್ವಾತಂತ್ರ ಸಿಗುವುದಿಲ್ಲ. ಸಾಮಾಜಿಕ ಜಾಲತಾಣಗಳು ಅತ್ಯಂತ ವೇಗವಾಗಿ ಅಭಿವೃದ್ಧಿಯಾಗುತ್ತಿದ್ದು, ಘಟನೆ ನಡೆದ ಕ್ಷಣಾರ್ಧದಲ್ಲಿ ಮಾಹಿತಿ ಹರಡುತ್ತವೆ. ಇವುಗಳ ಮಧ್ಯೆ ವಿದ್ಯುನ್ಮಾನ, ಮುದ್ರಣ ಮಾಧ್ಯಮಗಳು ಹಳೆಯ ಸುದ್ದಿಗಳನ್ನು ಬಿತ್ತರಿಸುವಂತಾಗಿದೆ ಎಂದು ಅವರು ವಿವರಿಸಿದರು.
ಪತ್ರಕರ್ತನಿಗೆ ತನ್ನ ತಪ್ಪುಗಳನ್ನು ಅರಿಯುವ, ತಿದ್ದಿಕೊಳ್ಳುವ ಹಾಗೂ ಆತನ ಮಿತಿ ತಿಳಿದಿರಬೇಕು. ಆದರೆ, ಇಂದು ಪತ್ರಕರ್ತರದ್ದು ಒತ್ತಡದ ಜೀವನವಾಗಿದೆ. ಸದಾ ಉದ್ಯೋಗದಲ್ಲಿ ಅಭದ್ರತೆ, ಕೆಲಸಕ್ಕೆ ತಕ್ಕ ಸೂಕ್ತ ವೇತನ ದೊರೆಯದಿರುವುದು ಸೇರಿದಂತೆ ಅನೇಕ ಗೊಂದಲಗಳ ನಡುವೆ ಬದುಕುವಂತಾಗಿರುವುದು ವಿಪರ್ಯಾಸ ಎಂದರು.
ಇದೇ ಸಂದರ್ಭದಲ್ಲಿ ಪತ್ರಕರ್ತರಾದ ರವಿ ಆರುಂಡಿ, ಪ್ರಕಾಶ್ ಕುಗ್ವೆ, ಸಿ. ವರದಾರಾಜ್, ತೇಜಸ್ವಿನಿ ಪ್ರಕಾಶ್ ಹಾಗೂ ರಾಮ್ಪ್ರಸಾದ್ ಗಾಂಧಿ ಅವರಿಗೆ ಮಾದ್ಯಮ ಪ್ರಶಸ್ತಿ ನೀಡಲಾಯಿತು.
ಬಸವರಾಜ್ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಬಿ.ಪಿ. ಹರೀಶ್, ರೈತ ಮುಖಂಡ ತೇಜಸ್ವಿ ಪಟೇಲ್, ರೇಷ್ಮೆ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಡಿ. ಬಸವರಾಜ್ ಮತ್ತಿತರರಿದ್ದರು. ಬಿ.ಬಿ. ಮಲ್ಲೇಶ್ ಪ್ರಾಸ್ಥಾವಿಕ ಮಾತನಾಡಿದರು. ಸದಾನಂದ ಹೆಗಡೆ ಸ್ವಾಗತಿಸಿದರು. ದೇವಿಕಾ ನಿರೂಪಿಸಿದರು.