ಎರಡು ತಿಂಗಳ ಬಳಿಕ ಚುನಾವಣೆಯ ಭವಿಷ್ಯ: ಶಿವಾನಂದ ಸ್ವಾಮೀಜಿ
ಹಾಸನ, ಅ.22: ಇನ್ನು ಎರಡು ತಿಂಗಳ ಬಳಿಕ ರಾಜ್ಯದ ಮುಂದಿನ ಚುನಾವಣೆಯ ಭವಿಷ್ಯವನ್ನು ಸ್ಪಷ್ಟವಾಗಿ ಹೇಳುತ್ತೇನೆ ಎಂದು ಅರಸೀಕೆರೆ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಿಳಿಸಿದ್ದಾರೆ.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ರವಿವಾರ ನಡೆದ ಹೊಯ್ಸಳ ಮಹೋತ್ಸವದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತ್ಯ ಯಾವಾಗಲು ಕಹಿಯಾ ಗಿರುತ್ತದೆ. ಈಗ ನಿಜ ಹೇಳಿದರೇ ಪಕ್ಷದಲ್ಲಿ ಒಬ್ಬರಿಗೆ ಖುಷಿ, ಇನ್ನೊಬ್ಬರಿಗೆ ನೋವು ಆಗಬಹುದು. ಇನ್ನು ಎರಡು ತಿಂಗಳು ಕಳೆಯಲಿ ಸ್ಪಷ್ಟವಾಗಿ ರಾಜ್ಯದ ಮುಂದಿನ ಚುನಾವಣೆಯ ಭವಿಷ್ಯ ತಿಳಿಸುತ್ತೇನೆ ಎಂದ ಅವರು, ತಾನು ಭವಿಷ್ಯ ರೂಪಿಸಿದ್ದೇನೆಯೇ ಹೊರತು, ಭವಿಷ್ಯವನ್ನು ನಾನು ಹೇಳಿಲ್ಲ. ರಾಜಕಾರಣಿಗಳು ಈಗಿನ ತಮ್ಮ ನಡವಳಿಕೆಯನ್ನು ಸರಿಪಡಿಸಿಕೊಳ್ಳಿ ಎಂದಿದ್ದೇನೆ ಎಂದರು.
ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗುತ್ತಾರ ಎಂಬ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ದೇಶದಲ್ಲಿ ಎರಡು ಅದ್ಭುತ ಶಕ್ತಿಗಳು ನಾಶವಾಗುತ್ತವೆ ಎಂದು ಭವಿಷ್ಯ ನುಡಿದರು.
ಈ ವೇಳೆ ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ರವಿನಾಕಲಗೂಡು ಮತ್ತಿತರರು ಉಪಸ್ಥಿತರಿದ್ದರು.