ಪಿ. ಸಾಯಿನಾಥ್‌ಗೆ ಬಸವಶ್ರೀ ಪ್ರಶಸ್ತಿ ಪ್ರದಾನ

Update: 2017-10-23 14:43 GMT

ಚಿತ್ರದುರ್ಗ, ಅ.23: ನಮ್ಮ ದೇಶದಲ್ಲಿ 75%ರಷ್ಟು ಕೃಷಿಕರಿದ್ದಾರೆ. ನಾವು ಕೃಷಿಕರನ್ನು ಅವಲಂಬಿಸಿದ್ದೇವೆ ಎಂಬುದನ್ನು ನಮ್ಮ ಜನಪ್ರತಿನಿಧಿಗಳು, ಸರಕಾರಗಳು ಮರೆತಿಯುತ್ತಿವೆ ಎಂದು ಹೆಸರಾಂತ ಪತ್ರಕರ್ತ, ಗ್ರಾಮೀಣ ಅಭಿವೃದ್ಧಿ ಸಾಹಿತ್ಯ ಹರಿಕಾರ ಪಿ. ಸಾಯಿನಾಥ್ ಹೇಳಿದ್ದಾರೆ.

ಬಸವಕೇಂದ್ರ ಶ್ರೀಮುರುಘಾಮಠದಿಂದ ನೀಡುವ 2016ನೇ ಸಾಲಿನ ಶ್ರೀಮಠದ ಪ್ರತಿಷ್ಠಿತ ಱಬಸವಶ್ರ್ರೀೞ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.

ದೇಶದಲ್ಲಿ 1995ರಿಂದ 2016ರವರೆಗೆ 3.5 ಲಕ್ಷ ಜನ ರೈತರು ಸಾವನ್ನಪ್ಪಿದ್ದಾರೆ. ಇದರಲ್ಲಿ ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. 1947ರಿಂದ ಇಲ್ಲಿಯವರೆಗೆ ಕರ್ನಾಟಕದಲ್ಲಿ 40 ಸಾವಿರ ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.

ನಾವು ಇಂದು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ವ್ಯವಸ್ಥೆಯಲ್ಲಿ ಸಮಾನತೆಯನ್ನು ಸಾಧಿಸಿಲ್ಲ ಇದರ ಪರಿಣಾಮವನ್ನು ಮುಂದೆ ನಾವು ಅನುಭವಿಸಬೇಕಾಗುತ್ತದೆ. 2004ರಲ್ಲಿ ಹಲವಾರು ಸಂಸದರು ಕೋಟ್ಯಾಧಿಪತಿಗಳು. 2014ರಲ್ಲಿ ಎಷ್ಟು ಜನ ಕೋಟ್ಯಾಧಿಪತಿಗಳಿದ್ದಾರೆಂದು ನಾವು ನೋಡುತ್ತಿದ್ದೇವೆ. ಇದು ಹೇಗೆ ಸಾಧ್ಯವಾಯಿತು ಎಂದು ಅವರು ಪ್ರಶ್ನಿಸಿದರು.

ನಾನು ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ಹೋಗಿ ದಲಿತ, ಶೋಷಿತ, ದಮನಿತ, ಆದಿವಾಸಿ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಅವರ ಆರ್ಥಿಕ ಪರಿಸ್ಥಿತಿಯಿಂದ ಶೈಕ್ಷಣಿಕ ವ್ಯವಸ್ಥೆಗೆ ತೊಂದರೆ ಆಗುತ್ತಿದೆಯೇ ಎಂದು ಕೇಳಿದಾಗ ಅವರಿಂದ ಸಕಾರಾತ್ಮಕವಾಗಿ ಉತ್ತರ ಬಂದಿತು.

ಇನ್ನು ಹಲವಾರು ಜನರು ಅತ್ಯಂತ ಸುಸಜ್ಜಿತವಾದ ಶಾಲೆಗಳಲ್ಲಿ ಓದಿಸುತ್ತಿದ್ದಾರೆ. ಇಲ್ಲಿ ಬಡವರ ಮತ್ತು ಶ್ರೀಮಂತರ ಮಧ್ಯೆ ಅಂತರ ಇರುವುದನ್ನು ನೋಡುತ್ತಿದ್ದೇವೆ. ಕುಡಿಯುವ ನೀರು, ಸುಡುವ ಬೆಂಕಿ, ಸುಳಿವ ಗಾಳಿ ಎಲ್ಲವೂ ಒಂದೆ. ಆದರೆ ಇಂತಹ ತಾರತಮ್ಯ. ಕೆಲವರಿಗೆ ಹರಿದು ಹೋಗುವ ಆರ್ಥಿಕ ವ್ಯವಸ್ಥೆಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ನಾನು ಅತ್ಯಂತ ಸಂತೋಷದಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದೇನೆ. ಈ ಪ್ರಶಸ್ತಿ ಪ್ರಮುಖವಾದುದು. ನಾನು ಮೊದಲು ಪರ್ತಕರ್ತನಾಗಿ ಈ ಪ್ರಶಸ್ತಿ ಸ್ವೀಕರಿಸಿದ್ದೇನೆ. ನಾವು ಸಮಾನತೆಯ ಬಗ್ಗೆ ಮಾತನಾಡುತ್ತೇವೆ. ಅದನ್ನು ಸಾಕಾರಗೊಳಿಸಬೇಕು. ಆ ಕೆಲಸವನ್ನು ಬಸವಣ್ಣನವರು ಅಂದೇ ಮಾಡಿದ್ದರು ಎಂದು ಹೇಳಿದರು.

ಪ್ರಶಸ್ತಿ ನೀಡಿ ಮಾತನಾಡಿದ ಡಾ. ಶಿವಮೂರ್ತಿ ಮುರುಘಾ ಶರಣರು, ಅನ್ವೇಷಣೆಯು ವ್ಯಕ್ತಿಯನ್ನು ಸುಮ್ಮನೆ ಕುಳಿತುಕೊಳ್ಳಲು ಬಿಡುವುದಿಲ್ಲ. ಪ್ರಯೋಗಶೀಲತೆಗೆ ಪ್ರೇರೇಪಿಸುತ್ತ, ಆ ವ್ಯಕ್ತಿಯಿಂದ ಸಮಾಜ ಕಲ್ಯಾಣ ಕಾರ್ಯಗಳು ಜರುಗುತ್ತ ಹೋಗುತ್ತವೆ. ಬುದ್ಧ, ಬಸವಣ್ಣ, ಗಾಂಧೀಜಿ ಮುಂತಾದವರು ಅಪ್ರತಿಮ ಜ್ಞಾನವನ್ನು ಹೊಂದಿದ್ದು, ಲೋಕಕಲ್ಯಾಣ ಬಯಸಿದ್ದರು ಎಂದು ಹೇಳಿದರು.

ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ, ಸಮಾಜಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಎಚ್. ಹನುಮಂತಪ್ಪಮಾತನಾಡಿದರು. ವೇದಿಕೆಯಲ್ಲಿ ಎಸ್‌ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಕೆ.ವಿ. ಪ್ರಭಾಕರ್ ಇದ್ದರು. ಬಸವಶ್ರೀ ರೂಪಕ ಪ್ರದರ್ಶನದೊಂದಿಗೆ ಸಮಾರಂಭ ಪ್ರಾರಂಭವಾಯಿತು. ಜಮುರಾ ಕಲಾವಿದರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ಡಾ. ಈ. ಚಿತ್ರಶೇಖರ್ ಸ್ವಾಗತಿಸಿದರು. ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ ಪ್ರಶಸ್ತಿಪತ್ರ ವಾಚಿಸಿದರು. ಪ್ರೊ.ಕೆ.ಎನ್. ವಿಶ್ವನಾಥ್ ವಂದಿಸಿದರೆ, ಶೈಲಾ ಜಯಕುಮಾರ್ ನಿರೂಪಿಸಿದರು.

ಡಾ. ಪಿ. ಸಾಯಿನಾಥ್ ಅವರು ಒಬ್ಬ ಅಪ್ರತಿಮ ಪ್ರತಿಭಾಶಾಲಿ. ಅವರು ಸಾಧನೆಯಿಂದ ಪ್ರಬುದ್ಧ ವ್ಯಕ್ತಿ ಆದರು. ಪ್ರಬುದ್ಧತೆಯಿಂದ ಲೋಕಕಲ್ಯಾಣ ಮಾರ್ಗದತ್ತ ನಡೆದರು. ಇದರ ಫಲವಾಗಿ ಸಾವಿರಾರು ಪತ್ರಕರ್ತರು ಇವರಿಂದ ಮಾರ್ಗದರ್ಶನ ಪಡೆದಿದ್ದಾರೆ. ಸಾಯಿನಾಥ್ ಅವರು ದೇಶ ವಿದೇಶಗಳಲ್ಲಿ ಸಾವಿರಾರು ಉಪನ್ಯಾಸಗಳಿಂದ ಪ್ರೇರಣೆ ನೀಡುತ್ತ ಬಂದಿದ್ದಾರೆ. ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಇವರೊಬ್ಬ ಅಪ್ರತಿಮ ಸಾಧಕ ಎಂಬುದನ್ನು ನಿರೂಪಿಸಿದ್ದಾರೆ. ರೈತಪರವಾದ ಅನೇಕ ಚಿಂತನೆಗಳನ್ನು ನಡೆಸಿ, ಕೃಷಿ ಸಮುದಾಯಕ್ಕೆ ಸ್ಫೂರ್ತಿ ಆಗಿದ್ದಾರೆ. ಇವರ ಜೀವಮಾನದ ಸಾಧನೆಯನ್ನು ಕಂಡು 2016ನೇ ಸಾಲಿನ ಶ್ರೀಮಠದ ಪ್ರತಿಷ್ಠಿತ ಱಬಸವಶ್ರೀೞ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

-ಮುರುಘಾ ಶರಣರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News