×
Ad

ಕ್ಷೀರಭಾಗ್ಯ: ಏಲಕ್ಕಿ ಸುವಾಸಿತ ಹಾಲಿನ ಜೊತೆ ಸಿಗಲಿದೆ ಚಾಕೋಲೆಟ್

Update: 2017-11-01 21:25 IST

ಮೈಸೂರು,ನ.1: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕ್ಷೀರ ಭಾಗ್ಯ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ವಾರದಲ್ಲಿ 3 ದಿನ ಚಾಕೋಲೆಟ್ ಸುವಾಸಿತ ಹಾಗೂ 2 ದಿನ ಏಲಕ್ಕಿ ಸುವಾಸಿತ ಹಾಲನ್ನು ಮಕ್ಕಳಿಗೆ ನೀಡುವ ಕಾರ್ಯಕ್ರಮಕ್ಕೆ ಮೈಸೂರಿನಲ್ಲಿ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಬುಧವಾರ ವಿದ್ಯುಕ್ತವಾಗಿ ಚಾಲನೆ ನೀಡಿದರು.

ನಗರದ ಪೀಪಲ್ಸ್ ಪಾರ್ಕ್‍ನಲ್ಲಿ ಹಾಲು ವಿತರಣೆ ಮಾಡಿ ಬಳಿಕ ಮಾತನಾಡಿದ ಸಚಿವರು, ಶಾಲಾ ಮಕ್ಕಳ ಅಭಿಪ್ರಾಯ ಹಾಗೂ ಬೇಡಿಕೆಯಂತೆ ಚಾಕೋಲೆಟ್ ಮತ್ತು ಏಲಕ್ಕಿ ಸುವಾಸಿತ ಹಾಲು ನೀಡುವ ಯೋಜನೆಯನ್ನು ಪ್ರಾಯೋಗಿಕವಾಗಿ ಮೈಸೂರು ಮತ್ತು ರಾಯಚೂರಿನಲ್ಲಿ ಆರಂಭಿಸಲಾಗಿದೆ ಎಂದರು. ಮಕ್ಕಳ ಅಪೌಷ್ಠಿಕತೆ ನಿವಾರಣೆ ಮತ್ತು ಉತ್ತಮ ಬೆಳವಣಿಗೆಗೆ ಹಾಲು ನೀಡುವ ಕ್ಷೀರ ಭಾಗ್ಯ ಯೋಜನೆಯನ್ನು ನಮ್ಮ ಸರ್ಕಾರ  ಆರಂಭಿಸಿದೆ. ಮೊದಲು ವಾರದಲ್ಲಿ ಮೂರು ದಿನ ಕೊಡುತ್ತಿದ್ದೆವು. ಮಕ್ಕಳ ಕೋರಿಕೆಯಂತೆ ಐದು ದಿನಕ್ಕೆ ವಿಸ್ತರಿಸಲಾಯಿತು. ಈಗ ಸುವಾಸಿತ ಹಾಲು ಕೊಡಲು ಆರಂಭಿಸುತ್ತಿದ್ದು ಮಕ್ಕಳು ಹೆಚ್ಚು ಪ್ರೀತಿಯಿಂದ ಸ್ವೀಕರಿಸಿ, ಆರೋಗ್ಯವಂತರಾಗಬೇಕು ಎಂದರು. ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ನಿಮ್ಮ ಸ್ನೇಹಿತರು, ನೆರೆಹೊರೆಯವರು ಶಾಲೆಯಿಂದ ಹೊರಗೆ ಉಳಿದಿದ್ದರೆ ಕರೆ ತರಬೇಕು ಎಂದರು.

ಎಲ್ಲಾ ಮಕ್ಕಳಿಗೂ ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಸಿಗುವುದಿಲ್ಲ. ಇದರಿಂದ ಪೌಷ್ಠಿಕತೆ ಕೊರತೆಯಾಗಿತ್ತು.  ಇದನ್ನು ಮನಗಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದು ಕೊರತೆ ನೀಗಿಸಿದ್ದಾರೆ ಎಂದರು. 

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್, ಮೈಸೂರು ಹಾಗೂ ಚಾಮರಾಜನಗರ  ಹಾಲು ಒಕ್ಕೂಟದ ಅಧ್ಯಕ್ಷ ಕೆ.ಜಿ.ಮಹೇಶ್, ಮೇಯರ್ ರವಿಕುಮಾರ್, ನಗರ ಪಾಲಿಕೆ ಆಯುಕ್ತ ಜೆ.ಜಗದೀಶ್, ಡಿಡಿಪಿಐ ಡಾ.ಬಿ.ಎಸ್.ವರ್ಧನ್, ಶಾಸಕ ಎಂ.ಕೆ.ಸೋಮಶೇಖರ್,  ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News