ಅಪಮಾನ ಮತ್ತು ಸಾವುಗಳಿಂದ ಕೈದಿಗಳಿಗೆ ಬೇಕಿದೆ ಬಿಡುಗಡೆ

Update: 2017-11-03 18:32 GMT

ಭಾರತದ ಜೈಲುಗಳ ಪರಿಸ್ಥಿತಿಗಳ ಬಗ್ಗೆ ಅತ್ಯಂತ ಪ್ರಗತಿಪರ ನ್ಯಾಯಾದೇಶವೊಂದನ್ನು ಭಾರತದ ಸುಪ್ರೀಂ ಕೋರ್ಟು 2017ರ ಸೆಪ್ಟ್ಟಂಬರ್ 15ರಂದು ನೀಡಿದೆ. ಆ ಆದೇಶವು ಜೈಲುವಾಸದಲ್ಲಿರುವಾಗ ಅಸಹಜ ಮರಣಕ್ಕೆ ಗುರಿಯಾದ ಕೈದಿಗಳ ಕುಟುಂಬದವರನ್ನು ಗುರುತಿಸಿ ಅವರಿಗೆ ಪರಿಹಾರವನ್ನು ನೀಡಬೇಕೆಂದು ಸರಕಾರಗಳಿಗೆ ಸೂಚಿಸಿದೆ. ಜೈಲುಗಳಲ್ಲಿ ಸಂಭವಿಸುತ್ತಿರುವ ಸಾವುಗಳ ಸಮಸ್ಯೆಯ ತೀವ್ರತೆಯನ್ನು ಮತ್ತು ಅದರ ಬಗ್ಗೆ ಸರಕಾರದ ಯಾಂತ್ರಿಕ ಧೋರಣೆಯನ್ನು ಗುರುತಿಸಿರುವ ಸುಪ್ರೀಂ ಕೋರ್ಟು ಎಲ್ಲಾ ರಾಜ್ಯಗಳ ಉಚ್ಚ ನ್ಯಾಯಾಲಯಗಳು ಇಂತಹ ಪ್ರಕರಣಗಳ ಬಗ್ಗೆ ಸ್ವಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ದಾಖಲಿಸಬೇಕೆಂದು ಮನವಿ ಮಾಡಿದೆ.

ಕೈದಿಗಳ ಹಕ್ಕುಗಳ ಬಗ್ಗೆ ಕ್ರಿಯಾಶೀಲರಾಗಿರುವ ಕಾರ್ಯಕರ್ತರಿಂದ ಮತ್ತು ಜೈಲು ಸುಧಾರಣವಾದಿಗಳಿಂದ ಅಪಾರ ಮೆಚ್ಚುಗೆ ಪಡೆದುಕೊಂಡಿರುವ ಈ ಆದೇಶವು ಜೈಲುಗಳಲ್ಲಿ ಅಸಹಜ ಸಾವುಗಳನ್ನು ತಡೆಯುವ ಕ್ರಮಗಳ ಬಗ್ಗೆ, ಆಪ್ತರನ್ನು ಭೇಟಿಯಾಗುವ ಹಕ್ಕುಗಳ ಬಗ್ಗೆ, ಕಾನೂನು ಮತ್ತು ಆರೋಗ್ಯ ಸೇವೆ, ಮಾದರಿ ಜೈಲು ನಡವಳಿ ಸಂಹಿತೆ (ಮ್ಯನುಯಲ್)ಯ ಅನುಷ್ಠಾನ, ಕೈದಿಗಳ ಕುರಿತು ಜೈಲು ಸಿಬ್ಬಂದಿಯ ಸಂವೇದನೆಯನ್ನು ಹೆಚ್ಚಿಸುವ ಬಗ್ಗೆ ಮತ್ತು ಮುಕ್ತ ಜೈಲುಗಳ ಬಗ್ಗೆ ಸಹ ಶಿಫಾರಸುಗಳನ್ನು ಮಾಡಿದೆ.

ಆದೇಶದ ಅತಿಮುಖ್ಯ ಭಿನ್ನತೆ ಏನೆಂದರೆ ಅದು ಜೈಲಿನಲ್ಲಿ ಸಂಭವಿಸುವ ಸಾವುಗಳನ್ನು ಕೇವಲ ಜೈಲು ಆಡಳಿತದ ವೈಫಲ್ಯವೆಂದು ಪರಿಗಣಿಸುವ ಧೋರಣೆಯನ್ನು ಸಾರಾಸಗಟಾಗಿ ತಿರಸ್ಕರಿಸುತ್ತದೆ. ಬದಲಿಗೆ ಅಂತಹ ಧೋರಣೆಯು ಕೈದಿಗಳ ಸುಧಾರಣೆ ಮತ್ತು ಪುನರ್ವಸತಿಗಳ ಬಗ್ಗೆ ಇರುವ ನಕಾರಾತ್ಮಕ ಮನಸ್ಥಿತಿಯ ಪ್ರತಿಫಲನವೆಂದು ಪರಿಗಣಿಸುತ್ತದೆ. ಇದಕ್ಕೆ ತದ್ವಿರುದ್ಧವಾಗಿ ನಮ್ಮ ಕ್ರಿಮಿನಲ್ ನ್ಯಾಯವ್ಯವಸ್ಥೆಯು ಪ್ರತೀಕಾರ ಮತ್ತು ಶಿಕ್ಷಾ ಅಂಜಿಕೆಯ (ಡಿಟರೆನ್ಸ್) ತಾತ್ವಿಕತೆಯನ್ನು ಅನುಸರಿಸುತ್ತಾ ಬಂದಿದೆ. ಇದರ ಪರಿಣಾಮವಾಗಿಯೇ ಬಂಧನದಲ್ಲಿರುವ ಕೈದಿಗಳ ಚಿತ್ರಹಿಂಸೆಗಳು ಮತ್ತು ಸಾವುಗಳು ನಿರಂತರವಾಗಿ ಸಂಭವಿಸುತ್ತಲೇ ಇವೆ. ಏಕೆಂದರೆ ಕೈದಿಗಳನ್ನು ಶಿಕ್ಷಾ ಯೋಗ್ಯ ವ್ಯಕ್ತಿಗಳನ್ನಾಗಿ ಮಾತ್ರ ಪರಿಗಣಿಸುತ್ತಾ ಬರಲಾಗಿದೆ. ಈ ಆದೇಶವು ಕೈದಿಗಳ ಪರಿಸ್ಥಿತಿಗಳ ಬಗ್ಗೆ ಮತ್ತೊಮ್ಮೆ ಚರ್ಚೆಯನ್ನು ಹುಟ್ಟುಹಾಕಿರುವುದು ನಿಜವಾದರೂ, ಜೈಲು ಸುಧಾರಣೆಯವ ಬಗ್ಗೆ ಸುಪ್ರೀಂ ಕೋರ್ಟು ಈ ಹಿಂದೆ ನೀಡಿದ ಬಹುಪಾಲು ನಿರ್ದೇಶನಗಳು ದುರದೃಷ್ಟವಶಾತ್, ಕೇಳುವವರಿಲ್ಲದೆ ಬಿದ್ದಿವೆ.

ಆರೋಪಿಯೋರ್ವ ತಾನು ಎಸಗಿದ ಅಪರಾಧಕ್ಕೆ ನಿಗದಿಯಾಗಿರುವ ಶಿಕ್ಷೆಯ ಅರ್ಧದಷ್ಟನ್ನು ಈಗಾಗಲೇ ಅನುಭವಿಸಿದ್ದ ಪಕ್ಷದಲ್ಲಿ ಅಂಥವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡತಕ್ಕದ್ದೆಂದು ಸುಪ್ರೀಂ ಕೋರ್ಟು 2015ರ ಎಪ್ರಿಲ್‌ನಲ್ಲಿ ಆದೇಶಿಸಿತ್ತು. ಆದರೆ ಅದನ್ನು ಜಾರಿಗೆ ತರದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟು 2017ರ ಅಕ್ಟೋಬರ್‌ನಲ್ಲಿ ಆದೇಶವೊಂದನ್ನು ನೀಡಿ ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ಮಧ್ಯಪ್ರದೇಶಗಳಿಗೆ ಜಾರಿ ವರದಿಯನ್ನು ನೀಡಲು ಅಂತಿಮ ಗಡುವನ್ನು ವಿಧಿಸಿದೆ. ಅಪರಾಧಿಯೆಂದರೆ ಯಾರು? ಸಾಮಾನ್ಯವಾಗಿ ಆಯಾ ಅಪರಾಧಕ್ಕೆ ಸಂಬಂಧಿಸಿದ ಕಾನೂನನ್ನು ಉಲ್ಲಂಘಿಸಿದವರನ್ನು ಅಪರಾಧಿಗಳೆಂದು ಗುರುತಿಸಲಾಗುತ್ತದೆ. ಆದರೆ ಅಪರಾಧದ ಪರಿಧಿಗಳು ಮತ್ತು ನಿರ್ವಚನಗಳು ಅಷ್ಟೊಂದು ಕಟ್ಟುನಿಟ್ಟಾಗಿ ಕಾನೂನುಬದ್ಧವಾಗಿಯೇ ಇರುವುದಿಲ್ಲವೆಂಬ ಅಭಿಪ್ರಾಯ ಈಗ ಸರ್ವಸಮ್ಮತಗೊಳ್ಳುತ್ತಿದೆ.

ಕ್ರಿಮಿನಲ್ ಅಪರಾಧಗಳ ವ್ಯಾಪ್ತಿಯನ್ನು ನಿರ್ವಚನ ಮಾಡುವಾಗ ವರ್ಗ, ಅಧಿಕಾರ ಹಾಗೂ ಸಮಾಜವನ್ನು ಆಳುತ್ತಿರುವವರು ಹೇರುವ ಸಾಮಾಜಿಕ ನಂಬಿಕೆಗಳ ಪ್ರಭಾವವನ್ನು ಅಲ್ಲಗೆಳೆಯಲು ಖಂಡಿತಾ ಸಾಧ್ಯವಿಲ್ಲ. ಹೀಗಾಗಿಯೇ ಕೈದಿಗಳ ಸಂಖ್ಯೆಯಲ್ಲಿ ಸಮಾಜದ ವಂಚಿತ ಸಮುದಾಯಗಳವರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಆಶ್ಚರ್ಯವೇನಲ್ಲ. ‘ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ’ (ರಾಷ್ಟ್ರೀಯ ಅಪರಾಧಗಳ ದಾಖಲೆ ಸಂಸ್ಥೆ- ಎನ್‌ಸಿಆರ್‌ಬಿ) ದ ಅಂಕಿಅಂಶಗಳು ಹೇಳುವಂತೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅತಂತ್ರವಾಗಿರುವ ಸಮುದಾಯಗಳ ಜನರು ಈ ವ್ಯವಸ್ಥೆಯಲ್ಲಿ ಹೆಚ್ಚಿನ ಅನ್ಯಾಯಕ್ಕೆ ಗುರಿಯಾಗುತ್ತಾರೆ. ಜೈಲುಗಳಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮುಸ್ಲಿಮರ ಜನಸಂಖ್ಯೆಯ ಅನುಪಾತವು ದೇಶದ ಜನಸಂಖ್ಯೆಯಲ್ಲಿ ಆ ಸಮುದಾಯಗಳ ಅನುಪಾತಕ್ಕಿಂತ ಸಾಕಷ್ಟು ಹೆಚ್ಚಿಗಿದೆ.

ದೇಶದ ನ್ಯಾಯದಾನ ವ್ಯವಸ್ಥೆಯಲ್ಲಿ ನ್ಯಾಯಪಡೆದುಕೊಳ್ಳಲು ಬೇಕಾದ ಆರ್ಥಿಕ ಮತ್ತು ಸಾಮಾಜಿಕ ಬಂಡವಾಳವು ಈ ಸಮುದಾಯಗಳಿಗೆ ಇಲ್ಲದಿರುವುದೂ ಸಹ ಈ ಅಸಂಗತಕ್ಕೆ ಮತ್ತೊಂದು ಕಾರಣವಾಗಿದೆ. ಈ ರೀತಿ ಕೈದಿಗಳ ಬಗ್ಗೆ ಮತ್ತು ಅವರ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಗಳ ಬಗ್ಗೆ ಇರುವ ಅಂತರ್ಗತ ಪೂರ್ವಗ್ರಹಗಳು ಜೈಲಿನೊಳಗೆಯೂ ಮುಂದುವರಿದಿರುತ್ತದೆ. ಬಂಧನದಲ್ಲಿದ್ದಾಗ ಸಂಭವಿಸುವ ಚಿತ್ರಹಿಂಸೆ ಮತ್ತು ಸಾವುಗಳು ಹಾಗೂ ಅದರೊಡನೆ ಕೈದಿಗಳ ಮೂಲಭೂತ ಹಕ್ಕುಗಳು ಮತ್ತು ಘನತೆಯ ನಿರಾಕರಣೆಗಳು ಈ ಪೂರ್ವಗ್ರಹದ ಅಭಿವ್ಯಕ್ತಿಗಳೇ ಆಗಿವೆ. ಕೈದಿಗಳ ಸುಧಾರಣೆ ಮತ್ತು ಪುನರ್ವಸತಿಯ ಆದರ್ಶಗಳಿಲ್ಲದ ಪರಿಸ್ಥಿತಿಯಲ್ಲಿ ಜೈಲುಗಳು ಅಮಾನವೀಯಗೊಳಿಸುವ ವ್ಯವಸ್ಥೆಯಾಗಿಬಿಡುತ್ತವೆ.

ಸಾಕಷ್ಟು ಬಾರಿ ಒಂದು ಜೈಲು ಶಿಕ್ಷೆಯು ಒಬ್ಬ ವ್ಯಕ್ತಿಯು ತನ್ನ ಕುಟುಂಬ ಮತ್ತು ಸಮುದಾಯಗಳಿಂದ ಪಡೆದುಕೊಳ್ಳುತ್ತಿದ್ದ ಸಾಂಪ್ರದಾಯಿಕ ಬೆಂಬಲಗಳನ್ನು ಕಡಿತಗೊಳಿಸುತ್ತವೆ. ಈ ಹಿನ್ನೆಲೆಯಲ್ಲಿ ಇಂಥಾ ವ್ಯವಸ್ಥೆಯಿಂದ ಹೊರಬರುವ ವ್ಯಕ್ತಿಯ ಪರಿಸ್ಥಿತಿ ಏನಾಗಬಹುದೆಂಬುದನ್ನು ಸಮಾಜ ಗಂಭೀರವಾಗಿ ಪರಿಗಣಿಸಬೇಕು. ಒಂದು ಪುನರ್ವಸತಿ ಪ್ರಕ್ರಿಯೆಯಿಂದ ಅವರು ಏನನ್ನು ನಿರೀಕ್ಷಿಸಬಹುದು? ಸದ್ಯಕ್ಕೆ ಪೆರೋಲ್‌ಗಳು ಮತ್ತು ಪ್ರೊಬೇಷನ್ (ಸನ್ನಡತೆಯ ಆಧಾರದ ಮೇಲೆ ಉಸ್ತುವಾರಿಯಡಿ ತಾತ್ಕಾಲಿಕ ಬಿಡುಗಡೆ)ಗಳ ಕಾನೂನುಬದ್ಧ ಅವಕಾಶಗಳಿವೆ. ಆದರೆ ಅವುಗಳೂ ಸಹ ಸಾಕಷ್ಟು ಬಳಕೆಯಲ್ಲಿಲ್ಲ. ಇವನ್ನು ಹೊರತುಪಡಿಸಿದಲ್ಲಿ ಪುನರ್ವಸತಿಯ ಪ್ರಶ್ನೆ ಆದ್ಯತೆಯಲ್ಲೇ ಇಲ್ಲ. ಸ್ಕಾನ್ಡಿನೇವಿಯನ್ ದೇಶಗಳು (ನಾರ್ವೆ, ಸ್ವೀಡನ್ ಇತ್ಯಾದಿ ದೇಶಗಳು) ಜೈಲು ಸುಧಾರಣೆಯಲ್ಲಿ ಜಗತ್ತೇ ಅಚ್ಚರಿಪಡುವಂಥ ದಿಕ್ಸೂಚಿ ಮಾದರಿಗಳನ್ನು ಅನುಸರಿಸುತ್ತಿವೆ. ನಾವು ಸಾಧ್ಯವಾಗಬಲ್ಲ ಬದಲಾವಣೆಗಳನ್ನು ತರಲು ಅಷ್ಟು ದೂರವೂ ಹೋಗಬೇಕಿಲ್ಲ.

ವಾಸ್ತವವಾಗಿ ಈ ವಿಷಯದಲ್ಲಿ ಅತ್ಯಂತ ಪರಿಣಾಮಕಾರಿ ಕ್ರಮಗಳನ್ನು ಅತ್ಯಂತ ಸಣ್ಣ ದ್ವೀಪರಾಷ್ಟ್ರವಾದ ಡೊಮಿನಿಕನ್ ಗಣರಾಜ್ಯವು ಜಾರಿಗೆ ತಂದಿದೆ. ಹಾಗೂ ಅದರ ಪರಿಣಾಮವಾಗಿ ಆ ರಾಷ್ಟ್ರದಲ್ಲಿ ಅಪರಾಧಿಗಳು ಅಪರಾಧಗಳಿಗೆ ಮರಳುವ ಪ್ರಮಾಣ ತೀವ್ರಗತಿಯಲ್ಲಿ ಕಡಿಮೆಯಾಗಿದೆ. ಆ ದೇಶವು ಕೆಲವು ಸಾಂಸ್ಥಿಕ ಬದಲಾವಣೆಗಳನ್ನು ಜಾರಿಗೆ ತಂದಿದೆ. ಜೈಲು ನಿರ್ವಹಣೆಯಲ್ಲಿ ಪೊಲೀಸ್ ಮತ್ತು ಸೇನೆಯ ನಿಯುಕ್ತಿಯ ಬದಲಿಗೆ ನಾಗರಿಕ ಸೇವಾ ಸಿಬ್ಬಂದಿಯನ್ನು ನೇಮಿಸಿಕೊಂಡಿದೆ. ಆ ಮೂಲಕ ಪರಿವರ್ತನಾ ಸಂಸ್ಥೆಗಳ ಜೊತೆಗಿನ ಪೊಲೀಸ್ ಮತ್ತು ಸೇನೆಯ ಸಂಬಂಧವನ್ನು ಕಡಿದುಹಾಕಿದೆ. ಸೆರೆಮನೆಯಲ್ಲಿ ಕೋಣೆಯೊಳಗೆ ಇರಬೇಕಾದ ಅವಧಿಯನ್ನು ದೊಡ್ಡಮಟ್ಟದಲ್ಲಿ ಕಡಿತಗೊಳಿಸಿದೆ. ಮತ್ತು ಪ್ರತಿಯೊಬ್ಬ ಕೈದಿಯೂ ಕಡ್ಡಾಯವಾಗಿ ಅಕ್ಷರಸ್ಥರಾಗಲೇಬೇಕಾದ ಕ್ರಮಗಳನ್ನು ಜಾರಿ ಮಾಡಿದೆ.

ಇಂತಹ ಕ್ರಮಗಳು ಪರಿಣಾಮಕಾರಿಯಾಗಿದ್ದು ಭಾರತದಂಥ ಸಂದರ್ಭದಲ್ಲೂ ಸುಲಭವಾಗಿ ಜಾರಿಮಾಡಬಹುದು. ಸುಪ್ರೀಂ ಕೋರ್ಟಿನ ಆದೇಶವು ಜೈಲು ಸಿಬ್ಬಂದಿಯ ಮತ್ತು ನಾಗರಿಕ ಸಮಾಜದ ಸಂವೇದನಾಶೀಲತೆಯು ಹೆಚ್ಚುವುದನ್ನು, ಜೈಲಿನೊಳಗೆ ಆಪ್ತಸಮಾಲೋಚಕರನ್ನು, ಸರಕಾರೇತರ ಸಂಸ್ಥೆಗಳ ನಿಯೋಜನೆಯನ್ನೂ ನಿರೀಕ್ಷಿಸುತ್ತದೆ. ಇವರುಗಳು ಪುನರ್ವಸತಿ ಪ್ರಕ್ರಿಯೆಯ ಪ್ರಧಾನ ಪ್ರಭಾರಿಗಳಾಗಿದ್ದು ನಾಗರಿಕ ಸಮಾಜದೊಳಗೆ ಕೈದಿಗಳ ಮರುಪ್ರವೇಶವನ್ನು ಸುಲಭಗೊಳಿಸುತ್ತಾರೆ. ಅಷ್ಟುಮಾತ್ರವಲ್ಲದೆ. ಸುಪ್ರೀಂ ಕೋರ್ಟಿನ ನಿರ್ದೇಶನದ ಅನುಸಾರವಾಗಿ ದಿಲ್ಲಿ, ಮುಂಬೈ, ಮದ್ರಾಸ್ ಮತ್ತು ಜಮ್ಮು-ಕಾಶ್ಮೀರ ಹಾಗೂ ಇನ್ನಿತರ ಉಚ್ಚ ನ್ಯಾಯಾಲಯಗಳು ಜೈಲುಗಳಲ್ಲಿ ಅಸಹಜ ಮರಣಕ್ಕೆ ತುತ್ತಾದ ಕೈದಿಗಳ ಕುಟುಂಬಗಳಿಗೆ ಪರಿಹಾರವನ್ನು ಒದಗಿಸುವತ್ತ ಸ್ವಪ್ರೇರಿತ ನ್ಯಾಯಿಕ ಕ್ರಮಗಳನ್ನು ಪ್ರಾರಂಭಿಸಿವೆ.

ಆದರೂ ಎಲ್ಲಿಯ ತನಕ ಇಂತಹ ಕ್ರಮಗಳು ನಮ್ಮ ದಂಡನಾರ್ಹ ಅಪರಾಧಗಳ ನ್ಯಾಯ ವ್ಯವಸ್ಥೆಯೊಳಗೆ ಅಂತರ್ಗತವಾಗದೆ ಕೇವಲ ನ್ಯಾಯಾಲಯಗಳ ಶಕ್ತಿ ಮತ್ತು ಪ್ರಭುತ್ವಗಳ ಪ್ರತಿಸ್ಪಂದನೆಯನ್ನು ಮಾತ್ರ ಆಧರಿಸಿರುತ್ತದೋ ಅಲ್ಲಿಯವರೆಗೆ ಈ ಕ್ರಮಗಳು ಅಸ್ಥಿರವಾಗಿಯೇ ಇರುತ್ತವೆ. ಹೀಗಾಗಿ ಜೈಲು ಸುಧಾರಣೆಯ ಬಗೆಗಿನ ಚರ್ಚೆಗಳು ಆ ಸುಧಾರಣೆಗಳ ಪ್ರಧಾನ ಪಾತ್ರಧಾರಿಗಳಾಗಿರುವ ಕೈದಿಗಳನ್ನು ಒಳಗೊಳ್ಳುವ ಅಗತ್ಯವಿದೆ. ಅಂತಿಮವಾಗಿ ಜೈಲು ಸುಧಾರಣೆಯ ಉದ್ದೇಶಗಳು ಬಂಧನದೊಳಗೆ ಹಿಂಸೆಯನ್ನು ನಿಯಂತ್ರಿಸುವ ಸೀಮಿತ ಉದ್ದೇಶಗಳಾಚೆ ಬೆಳೆಯಬೇಕು. ಸಮಾಜದ ಕೆಲವು ವರ್ಗಗಳ ಮೇಲೆ ವಿಧಿಸಲಾದ ಶಿಕ್ಷೆಯನ್ನು ಸಾಂಸ್ಥೀಕರಿಸುವಲ್ಲಿ ಜೈಲುಗಳು ವಹಿಸುತ್ತಿರುವ ಪ್ರಧಾನ ಪಾತ್ರವನ್ನು ಅದು ಗುರುತಿಸಬೇಕು ಮತ್ತು ಸುಧಾರಣೆಯ ಪ್ರಕ್ರಿಯೆಯಲ್ಲಿ ಈ ಪ್ರಜ್ಞೆಯು ಅಂತರ್ಗತವಾಗಿರಬೇಕು. ಇದರೊಡನೆ ಮುಕ್ತ ಜೈಲುಗಳ ಪರಿಕಲ್ಪನೆಯ ಬಗ್ಗೆ ಹೆಚ್ಚಿನ ಅಧ್ಯಯನಕ್ಕೆ ಶಿಫಾರಸು ಮಾಡುವ ಮೂಲಕ ಸರ್ವೋಚ್ಚ ನ್ಯಾಯಾಲಯವು ಜೈಲುಗಳ ಬಗ್ಗೆ ಈವರೆಗೆ ಇದ್ದ ಸಂಪ್ರದಾಯಿಕ ತಿಳವಳಿಕೆಗಿಂತ ಪೂರ್ತಿಭಿನ್ನವಾದ ಪರಿಕಲ್ಪನೆಯ ಚರ್ಚೆಗೆ ದಾರಿಮಾಡಿಕೊಟ್ಟಿದೆ.

ಇಂತಹ ಸಂದರ್ಭದಲ್ಲಿ ಜೈಲು ಸುಧಾರಣೆಗಳ ಬಗೆಗಿನ ಚಳವಳಿಗಳನ್ನು ಕೈದಿಗಳನ್ನು ಶಿಕ್ಷಾ ಮುಕ್ತರನ್ನಾಗಿಸುವ ನಡೆಗಳೆಂದು ತಿಳಿಯುವುದು ತುಂಬಾ ತಪ್ಪು. ಬದಲಿಗೆ ಅದು ಕೈದಿಗಳನ್ನು ಅಪಮಾನ, ತಾರತಮ್ಯ ಮತ್ತು ಸಾವುಗಳಿಂದ ಮುಕ್ತರನ್ನಾಗಿಸುವ ನಡೆಯಾಗಿದೆ.

ಕೃಪೆ: Economic and Political Weekly

Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News