×
Ad

ಕನಕದಾಸರ ಕೀರ್ತನೆಯ ಸಂದೇಶಗಳನ್ನು ನಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ವಿನಯ್ ಕುಲಕರ್ಣಿ

Update: 2017-11-06 18:56 IST

ಧಾರವಾಡ, ನ.6: ಸಮಾನತೆಯ ತತ್ವಗಳನ್ನು ಕೀರ್ತನೆಗಳ ಮೂಲಕ ಸಾರಿದವರು ದಾಸಶ್ರೇಷ್ಠ ಕನಕದಾಸರು. ಅವರ ಕೀರ್ತನೆಯ ಸಂದೇಶಗಳನ್ನು ನಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕನಕದಾಸರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ್‌ ಕುಲಕರ್ಣಿ ತಿಳಿಸಿದ್ದಾರೆ.

ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ನಡೆದ ಕನಕದಾಸ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಕನಕದಾಸರು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಕನಕದಾಸರ ವಿಚಾರದ ಮೌಲ್ಯಗಳನ್ನು ಅಳವಡಿಸಿಕೊಂಡಲ್ಲಿ ಪ್ರತಿಫಲ ಸಿಕ್ಕೇ ಸಿಗುತ್ತದೆ. ಕನಕದಾಸರ ಕೀರ್ತನೆಗಳು ಮತ್ತು ಬಸವಣ್ಣನವರ ವಚನಗಳು ಭಾವನಾತ್ಮಕ ವಿಚಾರಧಾರೆಗಳು ಒಂದೇಯಾಗಿುತ್ತವೆ ಎಂದು ತಿಳಿಸಿದರು.

ಕೀರ್ತನೆಗಳು ಎಂದರೆ ಸ್ತುತಿಸು(ದೇವರನ್ನು ನಮಿಸು, ಪೂಜಿಸು) ಎಂದರ್ಥ. ಸಮಾಜದಲ್ಲಿ ಶೋಷಿತರ ಏಳಿಗೆಗಾಗಿ 300 ಕೀರ್ತನೆಗಳನ್ನು ರಚಿಸಿದರು ಹಾಗೂ 42 ಸಂಧಿಗಳನ್ನು ಮತ್ತು 108 ಪದ್ಯಗಳನ್ನು ರಚಿಸಿದವರು ದಾಸಶ್ರೇಷ್ಠ ಕನಕದಾಸರು ಎಂದು ಸವದತ್ತಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ವೈ.ಎಂ.ಯಾಕೊಳ್ಳಿ ‘ಕನಕದಾಸರ ಜೀವನ ಹಾಗೂ ಚಿಂತನೆ’ ಉಪನ್ಯಾಸದಲ್ಲಿ ತಿಳಿಸಿದರು.

ಕನಕದಾಸರು ಅಂದಿನ ಸಾಂಪ್ರದಾಯಿಕ ದಿನಗಳಲ್ಲಿ ಕೆಳವರ್ಗದವರ ಮೇಲೆ ಆಗುವ ಅನ್ಯಾಯಗಳನ್ನು ಮೇಲ್ವರ್ಗದವರ ಸಂಪ್ರದಾಯ ನಡೆಗಳನ್ನು ತಮ್ಮ ಕೀರ್ತನೆಗಳ ಮೂಲಕ ಖಂಡಿಸಿದರು. ಕೆಳವರ್ಗದಲ್ಲಿ ಹುಟ್ಟಿದ ಬಗ್ಗೆ ಯಾವತ್ತೂ ಕೀಳರಿಮೆ ಇಟ್ಟುಕೊಳ್ಳಬಾರದು ಎಂದು ಕನಕದಾಸರು ಬೋಧಿಸಿದರು ಎಂದರು.

ರಾಗಿ ಮತ್ತು ಭತ್ತ ಸೇವಿಸುವ ಆಹಾರವಾಗಿದ್ದರು, ರಾಗಿಯನ್ನು ಬಡವರ ಊಟ ಮತ್ತು ಭತ್ತ ಶ್ರೀಮಂತ್ರರ ಊಟವಾಗಿತ್ತು. ಅದರಲ್ಲಿರುವ ಸತ್ಯಗಳೇನೆನ್ನುವುದನ್ನು ತಿಳಿಸಿಕೊಟ್ಟವರು ಕನಕದಾಸರು. 530 ವರ್ಷಗಳ ಹಿಂದೆ ರಾಜರಾಗಿದ್ದರೂ ತಳ ಸಮುದಾಯದ ಧ್ವನಿ ಎತ್ತಿದ ಶಕ್ತಿವಂತ ದಾರ್ಶನಿಕರಾಗಿದ್ದರು. ಅವರೊಬ್ಬ ಕ್ರಾಂತಿಕಾರಕ ಕೀರ್ತನೆಗಳನ್ನು ರಚಿಸಿ ಇಡೀ ಸಮಾಜಕ್ಕೆ ಬದುಕಿನ ಚಿಂತನೆ ತೋರಿಸಿಕೊಟ್ಟಿದ್ದಾರೆ ಎಂದು ಉಪನ್ಯಾಸಕರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಅರವಿಂದ ಬೆಲ್ಲದ ವಹಿಸಿದ್ದರು. ದಾಸಶ್ರೇಷ್ಠ ಕನಕದಾಸರ ಕುರಿತು ಶಾಲಾ ಮಕ್ಕಳಿಗಾಗಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಸುಧಾ ಮಠಪತಿ, ಅಶೋಕ ಮಾದರ, ಪ್ರೇಮಾ ಮುರಗೋಡ, ಸತೀಶ ಜಿ, ಪೂಜಾ ಪಾಟೀಲ ಅವರಿಗೆ ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ಸಚಿವರು ವಿತರಿಸಿದರು. ಮನಸೂರಿನ ಶ್ರೀ ರೇವಣಸಿದ್ಧೇಶ್ವರ ಮಹಾಮಠದ ಶ್ರೀ ಬಸವದೇವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಪೋಲಿಸ್ ಆಯುಕ್ತ ಎಂ.ಎನ್.ನಾಗರಾಜ, ಜಿ.ಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಸದಾನಂದ ಡಂಗನವರ, ಕುರುಬ ಸಮಾಜದ ಅಧ್ಯಕ್ಷೆ ಯಲ್ಲಮ್ಮ ನಾಯ್ಕರ, ಅಪರ ಜಿಲ್ಲಾಧಿಕಾರಿ ಇಬ್ರಾಹೀಂ ಮೈಗೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News