ಟಿಪ್ಪು ಜಯಂತಿ ಆಚರಣೆ ತಡೆಗೆ ಹೈಕೋರ್ಟ್ ನಕಾರ
Update: 2017-11-07 14:01 IST
ಬೆಂಗಳೂರು, ನ.7: ಟಿಪ್ಪು ಜಯಂತಿ ಆಚರಣೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ನ ವಿಭಾಗೀಯ ಪೀಠ ಇಂದು ತಿರಸ್ಕರಿಸಿದೆ.
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹೆಚ್.ಜಿ ರಮೇಶ್ ನೇತೃತ್ವದ ವಿಭಾಗೀಯ ಟಿಪ್ಪು ಜಯಂತಿಯ ಆಚರಣೆಗೆ ತಡೆ ನೀಡಲು ನಿರಾಕರಿಸಿದೆ.
ಟಿಪ್ಪು ಜಯಂತಿ ಕಾನೂನು ಬಾಹಿರವಲ್ಲ. ಈ ಕಾರಣದಿಂದ ತಡೆ ನೀಡಲು ಸಾಧ್ಯವಿಲ್ಲ ಕಾನೂನುಸಮ್ಮತ ಕಾರ್ಯಕ್ರಮದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ನ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.
ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಸಂಬಂಧಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅ.24 ರಂದು ಹೊರಡಿಸಿರುವ ಸುತ್ತೋಲೆಯನ್ನು ರದ್ದುಗೊಳಿಸುವಂತೆ ಕೋರಿ ಕೊಡಗು ಮೂಲದ ಕೆ.ಪಿ. ಮಂಜುನಾಥ್ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.