ಯುವ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ಅಗತ್ಯ: ಮುರಳೀಧರ್

Update: 2017-11-13 18:09 GMT

ಶಿವಮೊಗ್ಗ, ನ.13: ಎಸೆಸೆಲ್ಸಿ ನಂತರ ವಿವಿಧ ವಿಷಯಗಳಲ್ಲಿ ಉನ್ನತ ಪದವಿ ಪಡೆದಿರುವ ಯುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಉದ್ಯೋಗ ಪಡೆದುಕೊಳ್ಳಲು ಅನುಕೂಲವಾಗುವ ವೃತ್ತಿಯಾಧಾರಿತ ಕೌಶಲ್ಯ ತರಬೇತಿಗಳನ್ನು ಪಡೆದುಕೊಳ್ಳುವುದು ಅಗತ್ಯವಿದೆ ಎಂದು ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

ನಗರದ ಜೆಎನ್‌ಎನ್‌ಸಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ‘ವೃತ್ತಿ ಕೌಶಲ್ಯ-ಉನ್ನತಿಯ ಸಾಧ್ಯತೆ’ ಎಂಬ ವಿಷಯದ ಕುರಿತು ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ವಿಷಯದಲ್ಲಿ ನೈಪುಣ್ಯತೆ ಇದ್ದರೆ ಸರಳವಾಗಿ ಉದ್ಯೋಗ ಪಡೆಯಲು ಮತ್ತು ಸ್ವುದ್ಯೋಗ ಆರಂಭಿಸಲು ಸಾಧ್ಯವಾಗಲಿದೆ ಎಂದರು.

ಸ್ವತಂತ್ರ ಉದ್ಯೋಗ ಆರಂಭಿಸುವ ಯುವಕರಿಗೆ ಯೋಜನಾ ವರದಿ ತಯಾರಿಕೆ, ಯಂತ್ರಗಳು, ಕಚ್ಚಾವಸ್ತುಗಳು, ಮಾರುಕಟ್ಟೆ ಸೌಲಭ್ಯ ಮುಂತಾದ ಸೌಲಭ್ಯಗಳ ಕುರಿತು ಮಾಹಿತಿಯನ್ನು ನಿಗಮದ ವತಿಯಿಂದ ನೀಡಲಾಗುತ್ತಿದೆ. ಆಸಕ್ತ ಯುವಕರು ಎಲ್ಲ ರೀತಿಯ ಉದ್ಯೋಗಾವಕಾಶಗಳು ಮತ್ತು ಸರಕಾರದ ಸೌಲಭ್ಯಗಳ ಕುರಿತು ಮಾಹಿತಿ ಪಡೆಯಲು ನಲ್ಲಿ ಮಾಹಿತಿಯನ್ನು ಸಲ್ಲಿಸಿ ನೋಂದಾಯಿಸಿಕೊಂಡು, ಎರಡು ದಿನಗಳ ಅವಧಿಯಲ್ಲಿ ಉಚಿತವಾಗಿ ಸೂಕ್ತ ಸಲಹೆ, ಮಾರ್ಗದರ್ಶನ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.

ಕಳೆದ ಕೆಲವು ತಿಂಗಳ ಅವಧಿಯಲ್ಲಿ ರಾಜ್ಯದ ಸುಮಾರು 12 ಜಿಲ್ಲೆಗಳಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಲಾಗಿದ್ದು, ತುಮಕೂರು, ಬೆಂಗಳೂರು, ರಾಮನಗರ ಸೇರಿದಂತೆ ಆಯ್ದ 5 ಜಿಲ್ಲೆಗಳಲ್ಲಿ ಡಿಸೆಂಬರ್ ಮಾಸಾಂತ್ಯದೊಳಗಾಗಿ ಉದ್ಯೋಗಮೇಳಗಳನ್ನು ಆಯೋಜಿಸಲಾಗುವುದು. ಉದ್ಯೋಗಮೇಳದಲ್ಲಿ ಭಾಗವಹಿಸಿದ ಶೇ.25ರಿಂದ 30ರಷ್ಟು ಯುವಕರಿಗೆ ಉದ್ಯೋಗಾವಕಾಶ ದೊರೆತಿದೆ ಮಾತ್ರವಲ್ಲ ಸ್ವಯಂ ಉದ್ಯೋಗ ಆರಂಭಿಸಲು ಹಾಗೂ ತರಬೇತಿ ಪಡೆಯಲು ಉತ್ಸುಕರಾಗಿದ್ದಾರೆ ಎಂದು ತಿಳಿಸಿದರು.

ಈ ಕಾರ್ಯಾಗಾರದಲ್ಲಿ ಕೌಶಲ್ಯ ಮಾಹಿತಿ, ಉದ್ಯೋಗ ಮೇಳ, ಸಂವಹನ ಕೌಶಲ್ಯ ಮಾರ್ಗದರ್ಶನ, ತರಬೇತಿ ಕಾರ್ಯಕ್ರಮ, ವೃತ್ತಿ ಮಾರ್ಗದರ್ಶನ, ಮಾಹಿತಿ ಕಾರ್ಯಾಗಾರ, ಸ್ವಯಂ ಉದ್ಯೋಗಾವಕಾಶ, ವಿದೇಶಗಳಲ್ಲಿನ ಉದ್ಯೋಗಾವಕಾಶ ಹಾಗೂ ಉದ್ಯಮಶೀಲತೆಗೆ ಪೂರಕವಾದ ವಿಷಯಗಳನ್ನು ತಜ್ಞರು ಆಗಮಿಸಿ ಮಾಹಿತಿ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಹೆಚ್.ಆರ್.ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಎನ್‌ಇಎಸ್‌ನ ಅಧ್ಯಕ್ಷ ಎ.ಎಸ್.ವಿಶ್ವನಾಥ್, ಉಪಾಧ್ಯಕ್ಷ ಅಶ್ವಥ್ ನಾರಾಯಣ ಶೆಟ್ಟಿ, ಕಾರ್ಯದರ್ಶಿ ಎಸ್.ಎನ್.ನಾಗರಾಜ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಡಾ.ಅಜಿತ್ ಧಂತಿ, ಡಾ.ಮಂಜುನಾಥ್ ಪಿ., ಮಲ್ಲೇಶ್‌ಕುಮಾರ್ ಕೆ.ಎಸ್., ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News