ಕಾರ್ಮಿಕ ಕಾನೂನು ಉಲ್ಲಂಘನೆ ಕಾಯ್ದೆಯಡಿ ದೂರು: ಎಚ್ಚರಿಕೆ

Update: 2017-11-13 18:25 GMT

ಮಡಿಕೇರಿ, ನ.13: ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತಾ ಸಿಬ್ಬಂದಿಗೆ ಸರಕಾರ ನಿಗದಿ ಮಾಡಿರುವ ಕನಿಷ್ಠ ವೇತನವನ್ನು ನೀಡದೆ ಗುತ್ತಿಗೆದಾರರು ವಂಚಿಸುತ್ತಿದ್ದಾರೆ ಎಂದು ಆರೋಪಿಸಿರುವ ಸಿಐಟಿಯು ಸಂಯೋಜಿತ ಕೊಡಗು ಜಿಲ್ಲಾ ಸರಕಾರಿ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ ಸಂಘ, ಕಾರ್ಮಿಕ ಕಾನೂನು ಉಲ್ಲಂಘನೆಯ ಆರೋಪದಡಿ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದೆ.

ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಪಿ.ಆರ್.ಭರತ್, ಮುಂದಿನ 10 ದಿನಗಳ ಒಳಗೆ ಕಡಿತಗೊಳಿಸಿರುವ ವೇತನವನ್ನು ಭರ್ತಿ ಮಾಡಿ, ಸ್ವಚ್ಛತಾ ಸಿಬ್ಬಂದಿಗೆ ನೀಡದಿದ್ದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಸಿಬ್ಬಂದಿಗಳ ಸಮೂಹವನ್ನು ಎರಡು ಭಾಗವಾಗಿ ವಿಭಾಗಿಸಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಒಟ್ಟು 33 ಸಿಬ್ಬಂದಿಯಲ್ಲಿ 10 ಮಂದಿಯನ್ನು ಸಫಾಯಿ ಕರ್ಮಚಾರಿಗಳಾಗಿಯೂ, ಉಳಿದ 23 ಮಂದಿಯನ್ನು ಆಸ್ಪತ್ರೆಯ ಉಳಿದ ವಿಭಾಗಗಳಲ್ಲಿ ಕಾರ್ಯನಿರ್ವಹಿಸಲು ನಿಯೋಜಿಸಲಾಗಿದೆ. 10 ಕರ್ಮಚಾರಿಗಳಿಗೆ ಮಾಸಿಕ ವೇತನ 10 ಸಾವಿರ ರೂ. ಹಾಗೂ 23 ಸಿಬ್ಬಂದಿಗೆ ತಲಾ 9 ಸಾವಿರ ರೂ.ನಂತೆ ವೇತನ ನೀಡುವುದಾಗಿ ಗುತ್ತಿಗೆದಾರರು ಭರವಸೆ ನೀಡಿದ್ದರು. ಆದರೆ, ಪ್ರಸ್ತುತ ತಿಂಗಳು ವೇತನ ನೀಡುವ ಸಂದರ್ಭ ಕರ್ಮಚಾರಿಗಳಿಗೆ ಕನಿಷ್ಠ ವೇತನ 10 ಸಾವಿರ ರೂ. ನೀಡಿದ್ದು, ಉಳಿದ 23 ಸಿಬ್ಬಂದಿಗಳಿಗೆ ಕೇವಲ 7 ಸಾವಿರ ರೂ.ಗಳಂತೆ ವೇತನ ಪಾವತಿಸಲಾಗಿದೆ ಎಂದು ಆರೋಪಿಸಿದರು.

ವೇತನ ಕಡಿತ, ರಜೆ ಕಡಿತ ಮತ್ತು ಕೆಲಸ ಕೊಡಿಸಿದಕ್ಕಾಗಿ ಮುಂಗಡ ಹಣ ಪಡೆಯುವ ಮೂಲಕ ಗುತ್ತಿಗೆದಾರರು ಬಡವರ್ಗದ ಸಿಬ್ಬಂದಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಗುತ್ತಿಗೆದಾರರು ಮುಂದಿನ 10 ದಿನಗಳ ಒಳಗಾಗಿ ನ್ಯೂನತೆಯನ್ನು ಸರಿಪಡಿಸದಿದ್ದಲ್ಲಿ ಕಾರ್ಮಿಕ ಕಾಯ್ದೆಯಡಿ ದೂರು ದಾಖಲಿಸುವುದಾಗಿ ಭರತ್ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕಾರ್ಯದರ್ಶಿ ಎಚ್.ಕೆ. ಜಾನಕಿ, ಉಪಾಧ್ಯಕ್ಷೆ ಎಚ್.ಪಿ. ಕಾಳಮ್ಮ, ಉಪಕಾರ್ಯದರ್ಶಿ ಎಸ್.ಎಸ್. ಧನಲಕ್ಷ್ಮೆ, ಪ್ರಮುಖರಾದ ಅನಿತಾ ಹಾಗೂ ರೇಖಾ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News