ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ನಾಲ್ವರ ಬಂಧನ
ಬೆಂಗಳೂರು, ನ.15: ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಆರೋಪದ ಮೇಲೆ ನಾಲ್ವರನ್ನು ಇಲ್ಲಿನ ಕೆ.ಆರ್.ಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಉಡುಪಿಯ ರಾಘವೇಂದ್ರ(26), ದಾವಣಗೆರೆಯ ಸಾಗರ್(22), ಮೈಸೂರಿನ ಮಂಜು(32) ಮತ್ತು ಪಶ್ಚಿಮ ಬಂಗಾಳದ ಮನೋರಂಜನ್ ದಾಸ್(52) ಎಂದು ಪೊಲೀಸರು ಗುರುತಿಸಿದ್ದಾರೆ.
ಘಟನೆ ವಿವರ: ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ 17 ವರ್ಷದ ಬಾಲಕಿಯನ್ನು ಆಕೆಯ ಸ್ನೇಹಿತ ರಾಘವೇಂದ್ರ, ನ.4ರಂದು ಕರೆದೊಯ್ದು ಕಾಡುಗೋಡಿ ರೈಲ್ವೆ ನಿಲ್ದಾಣದ ಬಳಿ ಇರುವ ಲಾಡ್ಜ್ವೊಂದರಲ್ಲಿ ಇರಿಸಿದ್ದಾನೆ.
ಬಳಿಕ ಬಾಲಕಿ ನಾಪತ್ತೆಯಾದ ಬಗ್ಗೆ ಪೋಷಕರು ಕೆ.ಆರ್.ಪುರಂ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಾಗ ಬಾಲಕಿ ಲಾಡ್ಜ್ನಲ್ಲಿರುವ ಬಗ್ಗೆ ಮಾಹಿತಿ ಪಡೆದು ಆ ಲಾಡ್ಜ್ ಮೇಲೆ ದಾಳಿ ಮಾಡಿ ಬಾಲಕಿಯನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ.
ಸ್ನೇಹಿತ ರಾಘವೇಂದ್ರ ಎಂಬಾತ ನನ್ನನ್ನು ಕರೆದುಕೊಂಡು ಹೋಗಿ ಲಾಡ್ಜ್ನಲ್ಲಿರಿಸಿ ನನ್ನ ಮೇಲೆ ಅತ್ಯಾಚಾರವೆಸಗಿದನು. ನಂತರ ಆತನ ಸ್ನೇಹಿತರಾದ ಸಾಗರ್ ಮತ್ತು ಮಂಜು ಹಾಗೂ ಲಾಡ್ಜ್ ನಡೆಸುತ್ತಿರುವ ಮನೋರಂಜನ್ ದಾಸ್ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಪೊಲೀಸರ ವಿಚಾರಣೆ ವೇಳೆ ಬಾಲಕಿ ನಡೆದ ಘಟನೆಯನ್ನು ಹೇಳಿರುವುದಾಗಿ ತಿಳಿದು ಬಂದಿದೆ.
ಪ್ರಕರಣ ಸಂಬಂಧ ಬಾಲಕಿಯ ಹೇಳಿಕೆ ಮೇರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಕೆ.ಆರ್.ಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.