ದೇಶ ಮತ್ತು ಪಕ್ಷವನ್ನು ಕಟ್ಟಿ ಬೆಳೆಸಿ : ಟಿ.ಪಿ.ರಮೇಶ್ ಕರೆ

Update: 2017-11-19 17:20 GMT

ಮಡಿಕೇರಿ,ನ.19:ರಾಷ್ಟ್ರಕ್ಕೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಮತ್ತು ಕಾಂಗ್ರೆಸ್ ನೀಡಿದ ಕೊಡುಗೆಯನ್ನು ಅರ್ಥೈಸಿಕೊಂಡು, ಕಾರ್ಯಕರ್ತರ ಪಡೆಯನ್ನು ಕಟ್ಟಿ ಕಾರ್ಯನಿರ್ವಹಿಸುವ ಮೂಲಕ ದೇಶ ಹಾಗೂ ಪಕ್ಷದ ಯಶಸ್ಸಿಗಾಗಿ ಚಿಂತನೆ ನಡೆಸಬೇಕೆಂದು ರಾಜ್ಯ ರೇಷ್ಮೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಟಿ.ಪಿ.ರಮೇಶ್ ಕರೆ ನೀಡಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಆಯೋಜಿತ ‘ಮಾಜಿ ಪ್ರಧಾನಿ ಇಂದಿರಾಗಾಂಧಿಯವರ 100ನೇ ಜನ್ಮಶತಾಬ್ದಿ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಈ ದೇಶಕ್ಕೆ ನೀಡಿರುವ ಮಹತ್ವದ ಕೊಡುಗೆಗಳನ್ನು ಅರಿಯದೆ ಮುಂದೆ ಸಾಗುತ್ತಿರುವುದರಿಂದಲೇ ಪಕ್ಷ ಸೋಲನ್ನು ಕಾಣಬೇಕಾಯಿತೆಂದು ಅಭಿಪ್ರಾಯಪಟ್ಟರು. 

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನಿರ್ದೇಶನದಂತೆ ಪ್ರತಿ ಬ್ಲಾಕ್ ಮತ್ತು ವಲಯ ಮಟ್ಟದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಅವರು ಈ ರಾಷ್ಟ್ರಕ್ಕೆ ನೀಡಿದ ಕೊಡುಗೆಯನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕಾಗಿದೆ. ಮನೆ ಮನೆಗೆ ಕಾಂಗ್ರೆಸ್‍ನ ಅಭಿವೃದ್ಧಿಯ ಚಿಂತನೆಗಳನ್ನು ಮುಟ್ಟಿಸುವ ಸಂದರ್ಭ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರೊಂದಿಗೆ ಇಂದಿರಾ ಗಾಂಧಿಯವರ ಸಂದೇಶಗಳನ್ನು ಮುಟ್ಟಿಸುವ ಕಾರ್ಯ ನಡೆಯಬೇಕೆಂದು ಹೇಳಿದರು.

 ಇಂದಿರಾಗಾಂಧಿ ಅವರು 1966 ರಿಂದ 1984 ರ ವರೆಗೆ ಒಟ್ಟು 18 ವರ್ಷಗಳ ಕಾಲ ಪ್ರಧಾನ ಮತ್ರಿಗಳಾಗಿ ಕಾರ್ಯನಿರ್ವಹಿಸಿದ ಸಂದರ್ಭ ಬಡವರ್ಗದ ಏಳಿಗೆಗಾಗಿ ಜಾರಿಗೆ ತಂದ ಹತ್ತು ಹಲ ಕಾರ್ಯಕ್ರಮಗಳು, ಬ್ಯಾಂಕ್‍ಗಳ ರಾಷ್ಟ್ರೀಕರಣ, ಉಳುವವನಿಗೆ ಭೂಮಿ ಮೊದಲಾದ ಅತ್ಯಂತ ಜನಪರವಾದ ಕಾರ್ಯಕ್ರಮಗಳ ಮೂಲಕ ರಾಷ್ಟ್ರಕ್ಕೆ ನೀಡಿದ ಕೊಡುಗೆÀ ಬಿಜೆಪಿಗೆ ತಿಳಿದಿಲ್ಲವೆಂದು ಟೀಕಿಸಿದರು. ಇಂದಿರಾಗಾಂಧಿಯವರ  ಚಿಂತನೆ, ತತ್ತ್ವಾದರ್ಶಗಳ ಮೂಲಕ ಕಾಂಗ್ರೆಸ್ ಪಕ್ಷವನ್ನು ಜಾಗೃತಗೊಳಿಸಿ ಮುನ್ನಡೆಯಬೇಕಾಗಿದೆಯೆಂದು ಟಿ.ಪಿ.ರಮೇಶ್ ತಿಳಿಸಿದರು.

 ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷರಾದ ಚಿಲ್ಲವಂಡ ಕಾವೇರಪ್ಪ ಮಾತನಾಡಿ, ಮಾಜಿ ಪ್ರಧಾನಿ ಇಂದಿರಾಗಾಂಧಿಯವರನ್ನು ಯುವಪೀಳಿಗೆಗೆ ಪರಿಚಯಿಸುವ ಕಾರ್ಯವನ್ನು ಪಕ್ಷದಲ್ಲಿ ರೂಪಿಸುವುದು ಅತ್ಯವಶ್ಯವೆಂದರು. ನಮ್ಮೊಳಗಿನ ಯಾವುದೇ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಿ ಕಾರ್ಯನಿರ್ವಹಿಸುವ ಮೂಲಕ ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‍ನ್ನು ಗೆಲ್ಲಿಸುವ ಮೂಲಕ ಸೋನಿಯಾಗಾಂಧಿ ಮತ್ತು ಸಿದ್ದರಾಮಯ್ಯನವರ ಕೈ ಬಲಪಡಿಸುವ ಕೆಲಸ ನಡೆಯಬೇಕೆಂದು ಹೇಳಿದರು.

 ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಉಪಾಧ್ಯಕ್ಷ ಪಿ.ಸಿ.ಹಸೈನಾರ್ ಮಾತನಾಡಿ, ಕೊಡಗಿನ ಎರಡೂ ವಿಧಾನ ಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಕಳೆದುಕೊಳ್ಳುವ ಮೂಲಕ ನಾವು ಬೀದಿಯಲ್ಲಿ ನಡೆಯುತ್ತಿದ್ದೇವೆ ಎಂದು ಅಭಿಪ್ರಾಯಪಟ್ಟರು. ಇದೀಗ ನಾವೆಲ್ಲ ಒಂದಾಗಿ ಸಂಘಟಿತರಾಗಿ ಪಕ್ಷವನ್ನು ಬಲಪಡಿಸುವುದು ಅನಿವಾರ್ಯವಾಗಿದೆ ಎಂದರು. ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಕಾರ್ಯವೈಖರಿಯನ್ನು ಇಡೀ ವಿಶ್ವವೇ ಅರಿತಿದ್ದು, ಇಂತಹ ಧೀಮಂತ ಮಹಿಳೆ ಸಿದ್ದಾಪುರಕ್ಕೆ 1975ರ ಸುಮಾರಿಗೆ ಬಂದಿದ್ದರು ಎಂದು ಸ್ಮರಿಸಿಕೊಂಡರು.

ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾದ ಜಿ.ಆರ್.ಪುಷ್ಪಲತಾ ಮಾತನಾಡಿ, ಭಾರತದ ಪ್ರಥಮ ಮಹಿಳಾ ಪ್ರಧಾನಿಯಾದ ಇಂದಿರಾಗಾಂಧಿಯವರು ಸತತ ನಾಲ್ಕು ಬಾರಿ ಪ್ರಧಾನಿ ಹುದ್ದೆಯನ್ನು ಅಲಂಕರಿಸಿ, ದಿಟ್ಟ ನಿರ್ಧಾರಗಳ ಮೂಲಕ ಜನಪರವಾಗಿ ಕಾರ್ಯನಿರ್ವಹಿಸಿದ್ದರು. ಇವರು ಮಹಿಳೆಯರಿಗೆ ದಾರಿದೀೀಪವಾಗಿದ್ದಾರೆ ಎಂದರು.

ಜಿಲ್ಲಾ ಕಾಂಗ್ರೆಸ್‍ನ ಹಿರಿಯ ಸದಸ್ಯರಾದ ಎಂ.ಇ. ಹನೀಫ್ ಮಾತನಾಡಿ, ಇಂದಿರಾಗಾಂಧಿಯವರು ತಮ್ಮ ಅಧಿಕಾರದ ಅವಧಿಯಲ್ಲಿ ಬ್ಯಾಂಕ್‍ಗಳ ರಾಷ್ಟ್ರೀಕರಣ, ಗರೀಭಿ ಹಠಾವೋ, ಇಪ್ಪತ್ತು ಅಂಶಗಳ ಕಾರ್ಯಕ್ರಮಗಳನ್ನು ನೀಡುವ ಮೂಲಕ ಬಡಜನರ ನೆರವಿಗೆ ಬಂದವರು. ಈ ಹಿನ್ನೆಲೆಯಲ್ಲಿ ಇಂದಿರಾಗಾಂಧಿಯವರನ್ನು  ಪರಿಚಯಿಸುವ ದೊಡ್ಡ ಮಟ್ಟದ ಸಮಾವೇಶ ನಡೆಯಬೇಕಾಗಿದೆ ಎಂದರು.

ಮಹಾತ್ಮಾಗಾಂಧೀಜಿಯನ್ನು ಹತ್ಯೆಗೈದ ಗೋಡ್ಸೆ ದೇಗುಲ ಕಟ್ಟುವ ಪರಿಸ್ಥಿತಿಯನ್ನು ಮತ್ತು ಆತನ ಚಿಂತನೆಯ ಹಾದಿಯಲ್ಲಿ ನಡೆಯುವವರು ಪ್ರಸ್ತುತ ಇದ್ದಾರೆ. ಅಂತಹವರಿಗೆ ಕೇವಲ ಅಧಿಕಾರ ಮಾತ್ರ ಬೇಕಾಗಿದೆÉ, ಕಾಂಗ್ರೆಸ್ ಪಕ್ಷಕ್ಕೆ ದೇಶ ಮುಖ್ಯವಾಗಿದೆಯೆಂದು ಹೇಳಿದರು. 
ಜಿ.ಪಂ ಮಾಜಿ ಸದಸ್ಯೆ ಬೊಳ್ಳಮ್ಮ ನಾಣಯ್ಯ ಮಾತನಾಡಿ, ಕಾಂಗ್ರೆಸ್ಸಿಗರು ಮನೆ ಮನೆಗೆ ತೆರಳಿ ಕಾಂಗ್ರೆಸ್ ಸರಕಾರದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಮೂಲಕ ಮುಂದಿನ ಚನಾವಣೆಯಲ್ಲಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಬೇಕೆಂದರು.

ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಮುಖರಾದ ಮನು ಮೇದಪ್ಪ ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಐದರ್ಶಿ ವಿ.ಪಿ. ಸುರೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರೆ, ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಯು. ಅಬ್ದುಲ್ ರಝಾಕ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News