ಪತಿಯನ್ನು ಕೊಲೆ ಮಾಡಿಸಿ ತಲೆಮರೆಸಿಕೊಂಡಿದ್ದ ಪತ್ನಿ ಬಂಧನ

Update: 2017-11-20 17:15 GMT

ಮೈಸೂರು, ನ.20: ತನ್ನ ಪತಿಯನ್ನು ತನ್ನ ಪ್ರಿಯಕರನ ಜತೆ ಸೇರಿಕೊಂಡು ದಿಂಬಿನಿಂದ ಮುಖವನ್ನು ಅದುಮಿ ಕೊಲೆ ಮಾಡಿದ್ದ ಆತನ ಪತ್ನಿ ರಾಧಾಳನ್ನು ಪೊಲೀಸರು ಬಂಧಿಸಿದ್ದಾರೆ.

ಖಾಸಗಿ ಶಾಲೆ ಮುಖ್ಯಸ್ಥ ಕೃಷ್ಣ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆತನ ಪತ್ನಿ ರಾಧಳನ್ನು ಮೈಸೂರಿನ ಒಂದನೇ ಹೆಚ್ಚುವರಿ ನ್ಯಾಯಾಲಯ ಮೂರುದಿನಗಳ ಕಾಲ ಸಿಸಿಬಿ ಪೊಲೀಸರ ಕಸ್ಟಡಿಗೆ ನೀಡಿದೆ.

ಮೈಸೂರಿನ ಖಾಸಗಿ ಶಾಲೆ ಮುಖ್ಯಸ್ಥ ಕೃಷ್ಣ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷ್ಣ ಅವರ ಪತ್ನಿ ರಾಧಳನ್ನು ರವಿವಾರ ಕುವೆಂಪುನಗರ ಪೊಲೀಸರು ಹಾಗೂ ಸಿಸಿಬಿ ಪೊಲೀಸರು  ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು.

ಬಳಿಕ ಮೃತ ಕೃಷ್ಣ ಸಮಾಧಿ ಮಹಜರು ನಡೆಸಿದ್ದರು. ಖಾಸಗಿ ಶಾಲೆಯತ್ತ ಕರೆದೊಯ್ದು ಅಲ್ಲಿಯೂ ಮಹಜರು ನಡೆಸಿದ್ದ ಪೊಲೀಸರು ಸೋಮವಾರ ಮೈಸೂರಿನ ಒಂದನೇ ಹೆಚ್ಚುವರಿ ನ್ಯಾಯಾಲಯದ ಮುಂದೆ ರಾಧಾಳನ್ನು ಹಾಜರುಪಡಿಸಿದ್ದರು.

ಆರೋಪಿ ರಾಧಾಳನ್ನು ನವೆಂಬರ್ 22ರವರೆಗೆ ಸಿಸಿಬಿ ಪೊಲೀಸ್ ಕಸ್ಟಡಿಗೆ ಕೋರ್ಟ್ ನೀಡಿದೆ. ಇತ್ತೀಚೆಗೆ ಖಾಸಗಿ ಶಾಲೆ ಮುಖ್ಯಸ್ಥ ಕೃಷ್ಣ ಮೃತಪಟ್ಟಿದ್ದರು. ಮೊದಲು ಹೃದಯಘಾತದಿಂದ ಸಾವನ್ನಪ್ಪಿದಾರೆ ಎಂದು ಹೇಳಿ ಅಂತ್ಯಕ್ರಿಯೆ ಮಾಡಲಾಗಿತ್ತು. ಆದರೆ ಕೆಲ ದಿನಗಳ ನಂತರ ಕೃಷ್ಣ ಅವರಿಗೆ ಅವರ ಪತ್ನಿ ರಾಧಾಳೇ ಯಮರೂಪಿಯಾಗಿದ್ದ  ಸ್ಟೋರಿ ಬಹಿರಂಗವಾಗಿತ್ತು. ರಾಧಾ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ಪ್ರಿಯಕರನಿಗೆ ಸುಪಾರಿ ಕೊಟ್ಟು ಗಂಡನನ್ನ ಹತ್ಯೆ ಮಾಡಿಸಿದ್ದಳು. ಈ ಕುರಿತು  ಆಕೆಯ ಪ್ರಿಯಕರ ಬಾರೊಂದರಲ್ಲಿ ಕುಡಿದು ವಿಷಯ ಬಾಯ್ಬಿಟ್ಟಿದ್ದ. ಬಾರ್ ನಲ್ಲೇ ಇದ್ದ ಕೃಷ್ಣ ಅವರ ಸಂಬಂಧಿಕರು ಈ ವಿಚಾರ ಕೇಳಿಸಿಕೊಂಡು ಮನೆಯಲ್ಲಿ ವಿಚಾರಣೆ ನಡೆಸಿದಾಗ ಆತನ ಪತ್ನಿಯೇ ಕೊಲೆ ಮಾಡಿಸಿದ್ದ  ಪ್ರಕರಣ ಬಹಿರಂಗವಾಗಿತ್ತು. ಇದಾದ ನಂತರ ರಾಧಾ ತಲೆಮರಿಸಿಕೊಂಡಿದ್ದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News