×
Ad

ಸರಕಾರಿ ಆಸ್ಪತ್ರೆಗಳಲ್ಲಿ ಶಿಸ್ತು ತರಲು ಪ್ರತ್ಯೇಕ ಆಯೋಗ ರಚನೆ

Update: 2017-11-22 20:53 IST

ಬೆಳಗಾವಿ, ನ.22: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣಕ್ಕಾಗಿನ ಮಹತ್ವದ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ(ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆ ಬುಧವಾರ ಸರ್ವಾನುಮತದಿಂದ ಅಂಗೀಕಾರ ನೀಡಿತು.

ಭೋಜನ ವಿರಾಮದ ಬಳಿಕ ಸ್ಪೀಕರ್ ಕೆ.ಬಿ.ಕೋಳಿವಾಡ ವಿಧೇಯಕ ಪರ್ಯಾಲೋಚಿಸಲು ಅವಕಾಶ ಕಲ್ಪಿಸಿದರು.

ಈ ವೇಳೆ ಆರೋಗ್ಯ ಸಚಿವ ವಿಧೇಯಕ ಮಂಡಿಸಿ ಸದನ ಅಂಗೀಕಾರ ನೀಡುವಂತೆ ಮನವಿ ಮಾಡಿದರು.

ಮಸೂದೆಯ ಬಗ್ಗೆ ಖಾಸಗಿ ವೈದ್ಯರು ಆತಂಕಪಡುವ ಅಗತ್ಯವಿಲ್ಲ. ಬಡವರು ಸೇರಿದಂತೆ ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸಲು ಮಸೂದೆ ತರಲಾಗಿದೆ. ವೈದ್ಯಕೀಯ ಸಂಸ್ಥೆಗಳ ನಿಯಂತ್ರಣಕ್ಕೆ ವಿಧೇಯಕ ತರಲಾಗಿದೆಯೇ ಹೊರತು ವೈದ್ಯರ ನಿಯಂತ್ರಣಕ್ಕೆ ಅಲ್ಲ ಎಂದು ಕೆ.ಆರ್.ರಮೇಶ್ ಕುಮಾರ್ ಸ್ಪಷ್ಟನೆ ನೀಡಿದರು.

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರಚಿಸುವ ನೋಂದಣಿ ಮತ್ತು ಕುಂದು ಕೊರತೆಗಳ ನಿವಾರಣಾ ಪ್ರಾಧಿಕಾರ ಸಮರ್ಪಕವಾಗಿ ಕಾರ್ಯ ನಿರ್ವಹಿಸಲಿದೆ. ಪ್ರತಿಯೊಬ್ಬ ರೋಗಿಗೂ ಯೋಗ್ಯ ಚಿಕಿತ್ಸೆ ನೀಡಲು ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ. ಇದಕ್ಕಾಗಿ ಯೂನಿವರ್ಸಲ್ ಹೆಲ್ತ್ ಕಾರ್ಡ್ ಯೋಜನೆ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.

ಸಮರ್ಪಕವಾಗಿ ರೋಗಿಗಳ ದಾಖಲು ಮಾಹಿತಿ ಇಡದ ವೈದ್ಯಕೀಯ ಘಟಕಗಳ ಮೇಲೆ ಕಾನೂನು ರೀತಿ ಕ್ರಮ ಜರಗಿಸುವ ತಿದ್ದುಪಡಿ ಇದಾಗಿದೆ. ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಎರಡನೆ ಹಂತದ ಆರೋಗ್ಯಕ್ಕೆ ಸಂಬಂಧಿಸಿದಂತೆ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಸಮಸ್ಯೆ ಇಲ್ಲ. ಮೂರನೆ ಹಾಗೂ ಅಂತಿಮ ಹಂತದಲ್ಲಿ ಬರುವ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ದೊರಕಿಸಿಕೊಡುವ ಉದ್ದೇಶ ರಾಜ್ಯ ಸರಕಾರದ್ದಾಗಿದೆ ಎಂದರು.

ಈ ಹಿಂದೆ ಆರೋಗ್ಯ ಕಾರ್ಯಪಡೆಗೆ ಎಲ್ಲ ಅಧಿಕಾರ ನೀಡಲಾಗಿದ್ದರೂ, ರಾಜ್ಯ ಸರಕಾರದ ಪಾತ್ರ ಇರಲಿಲ್ಲ. ಆದರೆ, ಹಣ ಮಾತ್ರ ರಾಜ್ಯ ಸರಕಾರ ಪಾವತಿ ಮಾಡಬೇಕಿತ್ತು. ಸರಕಾರದ ಪ್ರತಿನಿಧಿಯಾಗಿ ಇದನ್ನು ಬದಲಾವಣೆ ತರಲು ಹಾಗೂ ಜನರ ತೆರಿಗೆ ಹಣ ಪೋಲಾಗದಂತೆ ಕ್ರಮ ಜರಗಿಸುವ ಉದ್ದೇಶದಿಂದ ಕಾನೂನು ರೂಪಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಉದ್ದೇಶಿತ ತಿದ್ದುಪಡಿ ವಿಧೇಯಕದ ಅಂಗೀಕಾರದ ನಂತರ ನಿಯಮಗಳನ್ನು ರಚಿಸುವ ಸಂದರ್ಭದಲ್ಲಿ ವಿಪಕ್ಷಗಳ ಸದಸ್ಯರ ಸಲಹೆಯನ್ನಾಧರಿಸಿ ನಿಯಮಗಳನ್ನು ರೂಪಿಸಲಾಗುವುದು. ಖಾಸಗಿ ವೈದ್ಯಕೀಯ ಸಂಸ್ಥೆಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಆಭಯ ನೀಡಿದರು.

ಸರಕಾರಿ ಆಸ್ಪತ್ರೆಗಳಲ್ಲಿ ಶಿಸ್ತು ಕಾಪಾಡುವ ದೃಷ್ಟಿಯಿಂದ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಪ್ರತ್ಯೇಕ ಆಯೋಗ ರಚನೆ ಮಾಡಲಾಗುವುದು. ವೈದ್ಯರ ಮೇಲೆ ಹಲ್ಲೆ, ಶೋಷಣೆ, ಸುಳ್ಳು ದೂರು ನೀಡಿ ಬ್ಲ್ಯಾಕ್‍ ಮೇಲ್ ಪ್ರಕರಣಗಳಿಗೆ ಕಡಿವಾಣ ಹಾಕಲಾಗುವುದು ಎಂದು ಅವರು, ವೈದ್ಯರೆಲ್ಲರೂ ‘ಪುಣ್ಯಕೋಟಿ’ ನೆನಪು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಚಿವರು, ಶಾಸಕರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಸರಕಾರಿ ಆಸ್ಪತ್ರೆಗಳಿಗೆ ಹೋಗಬೇಕು. ಮಾತ್ರವಲ್ಲ, ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರೆ ಸರಕಾರಿ ಆಸ್ಪತ್ರೆಗಳು ಸುಧಾರಣೆ ಸಾಧ್ಯ ಎಂದ ಅವರು, ಖಾಸಗಿ ವೈದ್ಯರಿಗಷ್ಟೇ ಸರಕಾರ ನಿಯಂತ್ರಣ ಹೇರಿದೆ. ಆದರೆ, ಸರಕಾರಿ ವೈದ್ಯರಿಗೆ ಯಾವುದೇ ನಿಯಂತ್ರಣವಿಲ್ಲ ಎಂಬ ಆತಂಕ ವ್ಯಕ್ತಪಡಿಸಿದ್ದು, ಸರಕಾರಿ ವೈದ್ಯರ ನಿಯಂತ್ರಣಕ್ಕಾಗಿ ವೃಂದ ಮತ್ತು ನೇಮಕಾತಿ ನಿಯಮವಿದೆ ಎಂದು ತಿಳಿಸಿದರು.

ಚಿಕಿತ್ಸೆ ಲೋಪಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಸ್ವರೂಪದ ಆರೋಪಗಳಿದ್ದರೆ ಪರಿಶೀಲನೆ ಬಳಿಕ ತಪ್ಪು ಮಾಡಿರುವುದು ದೃಢಪಟ್ಟರೆ ದಂಡಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ನಕಲಿ ವೈದ್ಯರಿಗೆ ಕಾರಾಗೃಹ ಶಿಕ್ಷೆ ಮುಂದುವರಿಯಲಿದೆ ಎಂದ ಅವರು,  ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ತಂದಿರುವ ಈ ವಿಧೇಯಕಕ್ಕೆ ಒಪ್ಪಿಗೆ ನೀಡುವಂತೆ ಕೋರಿದರು. ಆ ಬಳಿಕ ಆಡಳಿತ ಮತ್ತು ವಿಪಕ್ಷ ಸದಸ್ಯರ ಮಧ್ಯೆ ಸುದೀರ್ಘ ಚರ್ಚೆ ಬಳಿಕ ಸ್ಪೀಕರ್ ಕೆ.ಬಿ.ಕೋಳಿವಾಡ ವಿಧೇಯಕವನ್ನು ಮತಕ್ಕೆ ಹಾಕಿದಾಗ ಮಸೂದೆಗೆ ಧ್ವನಿಮತದ ಅಂಗೀಕಾರ ದೊರೆಯಿತು.

"ಖಾಸಗಿ ವೈದ್ಯಕೀಯ ಸಂಸ್ಥೆಗಳ ದರಗಳ ಪ್ರದರ್ಶನದಲ್ಲಿ ಪಾರದರ್ಶಕತೆ, ಚಿಕಿತ್ಸೆ ವಿಧಾನಗಳಿಗೆ ಏಕರೂಪದ ಪ್ಯಾಕೇಜ್ ದರ ನಿಗದಿ, ರೋಗಿಗಳ ಚಾರ್ಟರನ್ನು ಮತ್ತು ಖಾಸಗಿ ವೈದ್ಯಕೀಯ ಸಂಸ್ಥೆಗಳ ಚಾರ್ಟರನ್ನು ನಿರ್ದಿಷ್ಟ ಪಡಿಸುವುದು. ಬಾಕಿ ಪೂರ್ವ ಸಂದಾಯಕ್ಕೆ ಒತ್ತಾಯಿಸದೆ ಮೃತ ರೋಗಿಯ ಪ್ರತಿನಿಧಿಗಳಿಗೆ ಮೃತನ ದೇಹವನ್ನು ಒಪ್ಪಿಸಬೇಕು. ನಿರ್ದಿಷ್ಟ ಪ್ರಕರಣಗಳಲ್ಲಿ ರೋಗಿಗಳಿಂದ ಅಥವಾ ರೋಗಿಗಳ ಪ್ರತಿನಿಧಿಗಳಿಂದ ಮುಂಗಡ ಹಣ ಸಂದಾಯಕ್ಕೆ ಒತ್ತಾಯ ಮಾಡುವಂತಿಲ್ಲ. ಉಲ್ಲಂಘನೆ ಸಂದರ್ಭದಲ್ಲಿ ಕಾರಾಗೃಹ ಶಿಕ್ಷೆ ಕೈಬಿಟ್ಟಿದ್ದು, ದಂಡ ಹೆಚ್ಚಿಸಲಾಗುವುದು"

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News