ಮದುವೆಗೆ ಕುಮಾರಸ್ವಾಮಿ ಆಗಮಿಸುವಂತೆ ಧರಣಿ ಸತ್ಯಾಗ್ರಹಕ್ಕೆ ಕುಳಿತ ವರ!
Update: 2017-11-29 21:59 IST
ಮಂಡ್ಯ, ನ.29: ತನ್ನ ಮದುವೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಗಮಿಸುವಂತೆ ಆಗ್ರಹಿಸಿ ಅಭಿಮಾನಿಯೊಬ್ಬ ತನ್ನ ಮನೆ ಎದುರು ಉಪವಾಸ ಸತ್ಯಾಗ್ರಹ ನಡೆಸಿದ ಪ್ರಕರಣ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರಿನಲ್ಲಿ ಜರಗಿದೆ.
ಗ್ರಾಮದ ರವಿ ಅವರ ವಿವಾಹ ಮಹೋತ್ಸವ ಡಿ.1 ರಂದು ನಡೆಯಲಿದ್ದು, ಅದಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕರೆಸುವಂತೆ ಜೆಡಿಎಸ್ ಮುಖಂಡರಿಗೆ ಮನವಿ ಮಾಡಿದ್ದರು. ಆದರೆ, ಮುಖಂಡರಿಂದ ಕುಮಾರಸ್ವಾಮಿ ಮದುವೆಗೆ ಬರುವ ಸ್ಪಷ್ಟ ಭರವಸೆ ಸಿಗಲಿಲ್ಲವೆನ್ನಲಾಗಿದ್ದು, ಇದರಿಂದ ಬೇಸರಗೊಂಡ ರವಿ ಬುಧವಾರ ಮನೆ ಎದುರು ಸತ್ಯಾಗ್ರಹ ಕುಳಿತುಬಿಟ್ಟಿದ್ದಾರೆ.
ಜೆಡಿಎಸ್ ಮುಖಂಡರಿಂದ ದೂರವಾಣಿ ಮೂಲಕ ವಿಷಯ ತಿಳಿದ ಎಚ್.ಡಿ.ಕುಮಾರಸ್ವಾಮಿ, ಮದುವೆಗೆ ಬರುವ ಭರವಸೆ ನೀಡಿದ ನಂತರ, ರವಿ ತನ್ನ ಧರಣಿ ಸತ್ಯಾಗ್ರಹ ಕೈಬಿಟ್ಟಿದ್ದಾರೆ.