×
Ad

ಮಕ್ಕಳಲ್ಲಿ ಶೈಕ್ಷಣಿಕ ಅರಿವಿನ ಜತೆ ವಿಜ್ಞಾನದ ಅರಿವು ನೀಡುವುದು ಮುಖ್ಯ: ಸಚಿವ ತನ್ವೀರ್ ಸೇಠ್

Update: 2017-11-29 22:59 IST

ಮೈಸೂರು, ನ.29: ಮಕ್ಕಳಲ್ಲಿ ಶೈಕ್ಷಣಿಕ ಅರಿವಿನ ಜತೆಗೆ ವಿಜ್ಞಾನದ ಅರಿವು ನೀಡುವುದು ಮುಖ್ಯ. ಇದಕ್ಕಾಗಿ ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಗಣಿತ ಮತ್ತು ವಿಜ್ಞಾನ ಬೋಧನೆಗೆ ಹೆಚ್ಚು ಒತ್ತು ನೀಡಿ ಪಠ್ಯ ಕ್ರಮ ರೂಪಿಸಬೇಕಾದ ಅಗತ್ಯ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅಭಿಪ್ರಾಯಪಟ್ಟಿದ್ದಾರೆ.

ಹೊಸದಿಲ್ಲಿ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ಕರ್ನಾಟಕದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೇಂದ್ರ ಸಮಿತಿ ಹಾಗೂ ಜಿಲ್ಲಾ ಸಮಿತಿ ಸಂಯುಕ್ತಾಶ್ರಯದಲ್ಲಿ ನಗರದ ಮಾನಸಗಂಗೋತ್ರಿ ಸೆನೆಟ್ ಭವನದಲ್ಲಿ ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ, ತಂತ್ರಜ್ಞಾನ ಮತ್ತು ನವೀನ ಅನ್ವಯಗಳ ಬಳಕೆ ವಿಷಯ ಕುರಿತು ಆಯೋಜಿಸಿರುವ ಮೂರು ದಿನಗಳ ರಾಜ್ಯ ಮಟ್ಟದ 25ನೆ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ- 2017 ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮೊದಲ ದಿನ ಬುಧವಾರ ವಸ್ತು ಪ್ರದರ್ಶನ ಹಾಗೂ ತಾಂತ್ರಿಕ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯ ಅರಿವು ಮೂಡಿಸುವ ಸಲುವಾಗಿ ಸರ್ಕಾರ ಈಗಾಗಲೇ ಯುಬಿ ಬ್ರೆವರಿಸ್ ಸಂಸ್ಥೆಯ ಸಹಯೋಗದಲ್ಲಿ ನಂಜನಗೂಡು, ವರುಣ ಮತ್ತು ತಿ.ನರಸೀಪುರದಲ್ಲಿ ವಿಜ್ಞಾನ ಕೇಂದ್ರಗಳನ್ನು ತೆರೆದಿದೆ. ಗದಗ್ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಖಾಸಗಿ ಸಂಸ್ಥೆಯೊಂದರ ಸಹಯೋಗದಲ್ಲಿ ಕೇಂದ್ರ ಸ್ಥಾಪನೆಗೆ ಪ್ರಯತ್ನ ನಡೆದಿದೆ ಎಂದು ಅವರು ವಿವರಿಸಿದರು.

ಆವಿಷ್ಕಾರದಲ್ಲಿ ತೊಡಗಲು ಹೊಸ ಆಲೋಚನೆಗಳಿರಬೇಕು. ಯಾವುದೇ ವಿಜ್ಞಾನದ ಫಲಿತಾಂಶವನ್ನು ಮರುಪರಿಶೀಲನೆಗೊಳಿಸುವುದರಿಂದ ನೂತನ ಸಂಶೋಧನೆಗೆ ದಾರಿಯಾಗುತ್ತದೆ. ಈ ಬಗ್ಗೆ ವಿದ್ಯಾರ್ಥಿಗಳು ಪ್ರಯತ್ನ ಮಾಡಬೇಕು.ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ, ಸರ್ ಎಂ.ವಿಶ್ವೇಶ್ವರಯ್ಯ ಮುಂತಾದ ವಿಜ್ಞಾನಿಗಳು ಈ ಮಕ್ಕಳ ಮಧ್ಯೆ ಮತ್ತೆ ಹುಟ್ಟಿ ಬರುವಂತಾಗಬೇಕು ಎಂದು ಆಶಿಸಿದರು.

ಇದಕ್ಕೂ ಮುಂಚೆ ಸಮಾವೇಶಕ್ಕೆ ಚಾಲನೆ ನೀಡಿದ ವಿಧಾನ ಪರಿಷತ್ ಸದಸ್ಯ, ಕರ್ನಾಟಕ ರಾಜ್ಯ ವಿಜ್ಞಾ ಪರಿಷತ್ತು ಅಧ್ಯಕ್ಷ ಎಸ್.ವಿ.ಸಂಕನೂರ ಮಾತನಾಡಿ, ಈ ಸಮಾವೇಶದ ಉದ್ದೇಶವೇ ಮಕ್ಕಳಲ್ಲಿ ವೈಜ್ಞಾನಿಕ, ಸಂಶೋಧನಾತ್ಮಕ ಮನೋಭಾವವನ್ನು ಬೆಳೆಸುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೂಢನಂಬಿಕೆ ನಿರ್ಮೂಲನೆಗೆ ಪ್ರಯತ್ನಿಸಿದ್ದರೂ ಯಶಸ್ವಿಯಾಗಿಲ್ಲ. ನಮ್ಮ ಪರಿಷತ್ತು ಕೂಡ 35 ವರ್ಷಗಳಿಂದ ಮೌಢ್ಯದ ವಿರುದ್ಧ ಜಾಗೃತಿ ಮೂಡಿಸುತ್ತಿದ್ದರೂ ಅದು ಸಂಪೂರ್ಣವಾಗಿ ಹೋಗಿಲ್ಲ. ಪದವೀಧರರು, ಸಂಶೋಧಕರೂ ಕೂಡ ವೈಜ್ಞಾನಿಕವಾಗಿ ಚಿಂತಿಸುವುದನ್ನು ಕಲಿತಿಲ್ಲ ಎಂದು ವಿಷಾದಿಸಿದರು.

ಈ ವೇಳೆ ಸಮಾವೇಶದ ರಾಜ್ಯ ಸಂಯೋಜಕ ಎಚ್.ಜಿ.ಹುದ್ದಾರ್, ಶಾಸಕ ಜಿ.ಟಿ.ದೇವೇಗೌಡ, ಶಾಸಕ ವಾಸು ಮಾತನಾಡಿದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯಿಮಾ ಸುಲ್ತಾನ್ ನಝೀರ್ ಅಹ್ಮದ್, ಜಿಲ್ಲಾಧಿಕಾರಿ ಡಿ.ರಂದೀಪ್, ನಗರದ ವಿದ್ಯಾವರ್ಧಕ ಪ್ರೌಢಶಾಲೆಯ ವಿದ್ಯಾರ್ಥಿಯಾಗಿರುವ ಯುವ ವಿಜ್ಞಾನಿ ಪವನ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ವೆಂಕಟರಾಮು, ಪದವಿ ಪೂರ್ವ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕಿ ವಿ.ಆರ್.ಶ್ಯಾಮಲ, ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕಿ ಮಂಜುಳ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಆಪ್ತಸಹಾಯಕಿ ಶೋಭ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಉಪಾಧ್ಯಕ್ಷರಾದ ಹುಲಿಕಲ್ ನಟರಾಜ್, ಎಸ್.ಎಂ.ಗುರುನಂಜಯ್ಯ, ಗೌರವ ಕಾರ್ಯದರ್ಶಿ ಗಿರೀಶ್ ಕಡ್ಲೆವಾಡ, ಖಜಾಂಚಿ ನರೇಂದ್ರ ಕಡನೂರು, ಪರಿಷತ್ತಿನ ರಾಜ್ಯ ಸಮಿತಿ ಸದಸ್ಯರಾದ ಶ್ರೀಮತಿ ಹರಿಪ್ರಸಾದ್ ದಾನಿ ಬಾಬುರಾವ್, ಪರಿಷತ್ತಿನ ಅಧ್ಯಕ್ಷ ಎನ್.ಎಂ.ಶಿವಪ್ರಕಾಶ್, ಜಿಲ್ಲಾ ಸಮಿತಿ ಕಾರ್ಯದರ್ಶಿ ಹಾಗೂ ಸಮಾವೇಶದ ಸ್ಥಳೀಯ ಸಂಯೋಜಕ ಜಿ.ಬಿ.ಸಂತೋಷ್ ಕುಮಾರ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

34 ಶೈಕ್ಷಣಿಕ ಜಿಲ್ಲೆಗಳ ವಿವಿಧ ಶಾಲಾಕಾಲೇಜುಗಳಿಂದ ಸುಮಾರು 1200 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಭಾರತ ವಿಜ್ಞಾನ ಕ್ಷೇತ್ರದಲ್ಲಿ ಅಮೆರಿಕ ಸಾಲಿನಲ್ಲಿ ನಿಲ್ಲಲಿ
 ಶಾಲಾಕಾಲೇಜುಗಳಲ್ಲಿ ವಿಜ್ಞಾನ ಅಧ್ಯಯನಕ್ಕೆ ಶಾಲಾಕಾಲೇಜುಗಳಲ್ಲಿ ಪ್ರಥಮ ಆದ್ಯತೆ ನೀಡಬೇಕು. ಭಾರತವು ವಿಜ್ಞಾನ ರಂಗದಲ್ಲಿ 68ನೇ ಸ್ಥಾನದಲ್ಲಿದ್ದು, ಅದು ಈ ಸಾಲಿನಲ್ಲಿ ಮೊದಲನೇ ಸ್ಥಾನದಲ್ಲಿರುವ ಅಮೆರಿಕ ಸೇರಿದಂತೆ ಚೀನಾ, ಜಪಾನ್ ಇತ್ಯಾದಿ ದೇಶಗಳ ಪಟ್ಟಿಗೆ ಸೇರಬೇಕು. 
ಮೂಢನಂಬಿಕೆ ದೂರ ಮಾಡಿ ವಿಜ್ಞಾನವನ್ನು ಶೇ.100 ಅಳವಡಿಸಿಕೊಂಡರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಪಠ್ಯ ಕ್ರಮದಲ್ಲಿ ಶಿಕ್ಷಣದ ಜೊತೆಗೆ ವಿಜ್ಞಾನ ಕಲಿಸುವುದು ಅಗತ್ಯ. 
-ಜಿ.ಟಿ.ದೇವೇಗೌಡ
ಶಾಸಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News