ಎಳೆಮಕ್ಕಳನ್ನು ಬೀದಿಪಾಲು ಮಾಡುತ್ತಿರುವ ಪೋಷಕರು: ಡಾ. ಮುರುಘಾಶ್ರೀ ವಿಷಾದ
ಚಿತ್ರದುರ್ಗ, ಡಿ.5: ಸಂಸಾರದಲ್ಲಿ ಸಂತಾನ ವೃಕ್ಷವಾಗಬೇಕು. ಎಷ್ಟೋ ಜನ ಮಕ್ಕಳನ್ನು ಅರಸಿಕೊಂಡು ಹೋಗುತ್ತಾರೆ. ಆದರೆ ಕೆಲ ಪೋಷಕರು ಎಳೆಮಕ್ಕಳನ್ನು ಬೀದಿಪಾಲು ಮಾಡುತ್ತಿರುವುದು ವಿಷಾದನೀಯ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಬಸವಕೇಂದ್ರ ಮುರುಘಾಮಠದಲ್ಲಿ ಎಸ್ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್ ಚಿತ್ರದುರ್ಗ ಇವರ ಸಹಯೋಗದಲ್ಲಿ ನಡೆದ 27ನೇ ವರ್ಷದ ಹನ್ನೆರಡನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಶ್ರೀಗಳು ಮಾತನಾಡಿದರು.
ಶ್ರೀಮಠದ ಮೂಲಕ ಕಳೆದ 27 ವರ್ಷಗಳಿಂದ ಬಡವರ ಪರವಾಗಿರುವ, ಸೈದ್ಧಾಂತಿಕವಾಗಿರುವ ಕಲ್ಯಾಣ ಮಹೋತ್ಸವನ್ನು ಮಾಡುತ್ತಾ ಬರಲಾಗುತ್ತಿದೆ. ಸಂಸಾರ ಎನ್ನುವುದು ಒಂದು ವೃಕ್ಷ. ಅದನ್ನು ವಂಶವೃಕ್ಷ ಎನ್ನುತ್ತಾರೆ. ನಿಸರ್ಗದಲ್ಲಿ ಬಗೆ ಬಗೆಯ ವೃಕ್ಷಗಳಿದ್ದು, ಕೆಲವು ವೃಕ್ಷಗಳು ಫಲ ಕೊಟ್ಟರೆ ಕೆಲವು ಮುಳ್ಳನ್ನು ನೀಡುತ್ತವೆ. ಕೆಲವೊಂದು ಫಲ ಕೊಡದ ವೃಕ್ಷಗಳೂ ಇವೆ. ಕೆಲವು ವಿಷ ಕೊಡುವ ವೃಕ್ಷ ಇವೆ. ಹಾಗೆಯೇ ಸಂಸಾರ ವೃಕ್ಷವೂ ಕೂಡ. ನಾವು ಫಲ ನೀಡುವ ವೃಕ್ಷಗಳಾಗಬೇಕು ಎಂದು ಹೇಳಿದರು.
ಕೆಲವರು ಮಕ್ಕಳನ್ನು ಹಾದಿ-ಬೀದಿಯಲ್ಲಿ ಬಿಟ್ಟು ಹೋಗುತ್ತಾರೆ. ಅಂಥ ಎಷ್ಟೋ ಮಕ್ಕಳನ್ನು ಶ್ರೀಮಠವು ಇಂದು ಪೋಷಿಸುತ್ತಿದೆ. ಶ್ರೀಮಠದಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲಾಗುತ್ತಿದೆ. ಸಂತಾನಕ್ಕಾಗಿ ಸಂತಾನವಲ್ಲ. ಸತ್ಸಂತಾನ ಬೇಕು. ರಾಷ್ಟ್ರವನ್ನು ಉದ್ಧರಿಸುವ, ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳುವ ಸಂತಾನ ಬೇಕು ಎಂದರು.
ಎಲ್ಲ ವರ್ಗದವರಲ್ಲಿ ಬಡವರಿದ್ದಾರೆ. ಕೆಲವರು ಮಾತ್ರ ಶ್ರೀಮಂತರಿದ್ದಾರೆ. ಬಸವಣ್ಣ, ಅಂಬೇಡ್ಕರ್, ಗಾಂಧೀಜಿ, ಬುದ್ಧ, ಏಸು ಮೊದಲಾದವರು ಬಡತನದಲ್ಲಿ ಬಂದು ಲೋಕೋದ್ಧಾರ ಮಾಡಿದ್ದಾರೆ. ನಾನು ಬಡತನದಲ್ಲಿ ಬಂದವನು. ಶ್ರೀಮಂತ ಕುಟುಂಬದಲ್ಲಿ ಬಂದಿದ್ದರೆ ಇಂತಹ ಸಾಮೂಹಿಕ ಸರಳ ವಿವಾಹವನ್ನು ನೆರವೇರಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೂ ಅದನ್ನು ಮೆಟ್ಟಿ ನಿಂತು ಸಮಾಜೋದ್ಧಾರದ ಕೆಲಸಕ್ಕೆ ನಿರಂತರವಾಗಿ ಶ್ರಮಿಸುತ್ತಿದ್ದೇನೆ ಎಂದರು.
ಮುಖ್ಯಅತಿಥಿ ಬೆಂಗಳೂರಿನ ಕಾರ್ಮಿಕ ಘಟಕ (ಮಹಿಳಾ ವಿಭಾಗ)ದ ರಾಜ್ಯಾಧ್ಯಕ್ಷೆ ಎಲ್.ಉಮಾದೇವಿ ಮಾತನಾಡಿ, ಇದೊಂದು ಐತಿಹಾಸಿಕ ಸಂದರ್ಭ. ಸಾವಿರಾರು ಬಡಕುಟುಂಬಗಳು ಇದರ ಪ್ರಯೋಜನ ಪಡೆದುಕೊಂಡಿವೆ. ಅದೆಷ್ಟೋ ಸಂಸಾರಗಳು ಉತ್ತಮ ಬದುಕನ್ನು ನಡೆಸುತ್ತಿವೆ. ಮದುವೆಗೆ ಮಾಡುವ ಖರ್ಚನ್ನು ತಮ್ಮ ಯಾವುದಾದರೂ ದುಡಿಮೆಗೆ ಇಟ್ಟುಕೊಂಡರೆ ಅವರ ಬದುಕು ಹಸನಾಗುತ್ತದೆ. ಕಳೆದ 27ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಸರಕಾರದಿಂದ ಉದಾರವಾದ ಸಹಕಾರ ಸಿಗುವಂತಾಗಬೇಕು. ರಾಜ್ಯ ಅಥವಾ ರಾಷ್ಟ್ರದಲ್ಲಿ ಇಲ್ಲಿಯವರೆಗೆ ನಿರಂತರವಾಗಿ ಪ್ರತಿತಿಂಗಳು ನಡೆಸಿಕೊಂಡು ಬಂದಿರುವ ಉದಾಹರಣೆ ಸಿಗುವುದಿಲ್ಲ ಎಂದರು.
ಮತ್ತೋರ್ವ ಅತಿಥಿ ಚಿತ್ರದುರ್ಗ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮಹೇಶ್ ಮಾತನಾಡಿ, ಶ್ರೀಮಠವು ಅತ್ಯಂತ ಹಳೆಯ ಪರಂಪರೆ ಹೊಂದಿರುವ ಮಠ. ಶ್ರೀಗಳ ಇಂತಹ ಕಾರ್ಯಗಳನ್ನು ಸರಕಾರ ಗುರುತಿಸಬೇಕು. ವಿವಾಹ ಅನ್ನುವುದು ಮಾನಸಿಕವಾಗಿ ಸಿದ್ಧರಾಗುವುದು. ವಿವಾಹ ಮತ್ತು ಸಂಬಂಧಗಳಿಗೆ ಅವಿನಾಭಾವ ಸಂಬಂಧ ಇದೆ. ವಿವಾಹವು ಸಂಬಂಧ ವೃದ್ಧಿಗೊಳಿಸುತ್ತದೆ. ವಿವಾಹ ಸಾಮಾಜಿಕ ಮತ್ತು ಮಾನಸಿಕ ಬಂಧ. ಮೌಢ್ಯರಹಿತವಾದ ಬದುಕಿಗೆ ಮುನ್ನುಡಿ ಬರೆಯಬೇಕಿದೆ. ಬದಲಾವಣೆಗಳನ್ನು ತರಬೇಕಾದರೆ ಸಾಕ್ಷರರಾಗಬೇಕು ಎಂದರು.
ಈ ಸಂದರ್ಭದಲ್ಲಿ 17 ಜೋಡಿ ನವ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಾರ್ಯಕ್ರಮ ದಾಸೋಹಿಗಳಾದ ಚಂದ್ರಕಲಾ, ಜಿ.ಎಸ್. ದೊರೆ, ದಾಕ್ಷಾಯಿಣಿ, ಬಿ.ಜಿ. ವೃಷಭೇಂದ್ರಪ್ಪ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಜಗಳೂರಿನ ಬಿ. ಪುಷ್ಪಾ ಅವರನ್ನು ಸನ್ಮಾನಿಸಲಾಯಿತು. ಪೈಲ್ವಾನ್ ತಿಪ್ಪೇಸ್ವಾಮಿ, ಕೆಇಬಿ ಷಣ್ಮುಖಪ್ಪ, ಬಸವರಾಜ ಕಟ್ಟಿ, ಎನ್.ತಿಪ್ಪಣ್ಣ, ಮಲ್ಲಿಕಾರ್ಜುನಯ್ಯ, ಎ.ಜೆ. ಪರಮಶಿವಯ್ಯ, ಎಂ.ಜಿ. ದೊರೆಸ್ವಾಮಿ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಜಮುರಾ ಕಲಾವಿದರಿಂದ ವಚನ ಪ್ರಾರ್ಥನೆ, ಜ್ಞಾನಮೂರ್ತಿ ಸ್ವಾಗತಿಸಿದರು. ಪ್ರದೀಪ್ಕುಮಾರ್ ನಿರೂಪಿಸಿದರು.