ಮಡಿಕೇರಿಯಲ್ಲಿ ಕರಾಳ ದಿನ, ವಿಜಯೋತ್ಸವ: ಸಮಯಪ್ರಜ್ಞೆ ಮೆರೆದ ಪೊಲೀಸರು

Update: 2017-12-06 16:27 GMT

ಮಡಿಕೇರಿ, ಡಿ.6: ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ 25 ವರ್ಷಗಳು ತುಂಬಿದ ದಿನವಾದ ಬುಧವಾರ ಸಂಘಪರಿವಾರ ವಿಜಯೋತ್ಸವ ಆಚರಿಸಿದರೆ, ಇದಕ್ಕೆ ಪ್ರತಿಯಾಗಿ ಎಸ್‌ಡಿಪಿಐ ಕಪ್ಪು ಬಾವುಟದೊಂದಿಗೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಿಲ್ಲಾ ಕೇಂದ್ರದಲ್ಲಿ ನಡೆಯಿತು.

ಇಂದು ಬೆಳಗ್ಗೆಯೇ ನಗರದ ಕಾಲೆೇಜು ರಸ್ತೆಯ ಪೇಟೆ ರಾಮಮಂದಿರದ ಮುಂಭಾಗ ಸಂಘಪರಿವಾರದ ಪ್ರಮುಖರು ಹಾಗೂ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಕಾರ್ಯಕರ್ತರು ಬಿಗಿ ಪೊಲೀಸ್ ಬಂದೋಬಸ್ತ್ ನಡುವೆಯೇ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮೆರವಣಿಗೆ ನಡೆಸುವ ಪ್ರಯತ್ನ ನಡೆಸಿದರಾದರೂ ಪೊಲೀಸರು ಅದಕ್ಕೆ ಅವಕಾಶವನ್ನು ನೀಡಲಿಲ್ಲ.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತೆಯಂಡ ರವಿ ಕುಶಾಲಪ್ಪ, ಬಜರಂಗದಳದ ಜಿಲ್ಲಾ ಸಂಚಾಲಕ ಅಜಿತ್‌ಕುಮಾರ್, ಸಹಸಂಚಾಲಕ ಚೇತನ್, ಹಿಂದೂ ಜಾಗರಣಾ ವೇದಿಕೆಯ ಸಂಚಾಲಕ ಕುಕ್ಕೇರ ಅಜಿತ್, ಬಿಜೆಪಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಧನಂಜಯ, ನಗರಾಧ್ಯಕ್ಷ ಮಹೇಶ್ ಜೈನಿ, ಬಿ.ಕೆ. ಜಗದೀಶ್, ಅರಣ್ ಶೆಟ್ಟಿ, ಕಾಳಚಂಡ ಅಪ್ಪಣ್ಣ, ಬಜರಂಗದಳದ ಬಿ.ಎಂ. ರಾಜೇಶ್, ವಿಹಿಂಪ ಪ್ರಮುಖರಾದ ಕರವಂಡ ಕುಶಾಲಪ್ಪಮತ್ತಿತರ ಪ್ರಮುಖರು ಈ ಸಂದರ್ಭ ಇದ್ದರು.

ಎಸ್‌ಡಿಪಿಐ ಪ್ರತಿಭಟನೆ: ನಗರದ ಕಾಲೆೇಜು ರಸ್ತೆಯ ಪೇಟೆ ರಾಮಮಂದಿರದ ಬಳಿ ಸಂಘಪರಿವಾರ ಸಂಭ್ರಮಾಚರಣೆ ನಡೆಸುವ ಸಂದರ್ಭದಲ್ಲೆ ಇಂದಿರಾಗಾಂಧಿ ವೃತ್ತದ ಬಳಿ ಎಸ್‌ಡಿಪಿಐ ಕಾರ್ಯಕರ್ತರು ಕಪ್ಪುಧ್ವಜದೊಂದಿಗೆ ಆಗಮಿಸಿ ಕರಾಳ ದಿನಾಚರಣೆಯ ಪ್ರತಿಪಾದನೆ ಮಾಡಿದರು.

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮಿನ್ ಮೊಹಿಸಿನ್, ಕಾರ್ಯದರ್ಶಿ ಅಬ್ದುಲ್ ಅಡ್ಕಾರ್, ನಗರಸಭಾ ಸದಸ್ಯ ಮನ್ಸೂರ್ ಸೇರಿದಂತೆ ಕಾರ್ಯಕರ್ತರು ಕಪ್ಪುಬಾವುಟ ಮತ್ತು ಎಸ್‌ಡಿಪಿಐ ಧ್ವಜ ಹಿಡಿದು ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಸಂಘಪರಿವಾರಕ್ಕೆ ಸಂಭ್ರಮಾಚರಣೆ ಮಾಡಲು ಅವಕಾಶ ನೀಡಿರುವುದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮಿನ್ ಮೊಹಿಸಿನ್ ಮಾತನಾಡಿ, ಸಂಭ್ರಮಾಚರಣೆ ಮಾಡಿದವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿವಾದ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿರುವಾಗಲೇ ಸಂಘಪರಿವಾರ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ ಎಂದು ಆರೋಪಿಸಿದರು. ಸಂಭ್ರಮಾಚರಣೆ ಅಥವಾ ಮೆರವಣಿಗೆ ನಡೆಸಿದರೆ ನಾವೂ ಮೆರವಣಿಗೆ ನಡೆಸುವುದಾಗಿ ಎಸ್‌ಡಿಪಿಐ ಕಾರ್ಯಕರ್ತರು ಪಟ್ಟು ಹಿಡಿದರು. ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲು ಅವಕಾಶ ನೀಡಿದ ಪೊಲೀಸರ ಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಮುನ್ನುಗ್ಗಲು ಯತ್ನ: ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತಾದರೂ ಉಭಯ ಕಡೆಯ ಗುಂಪು ಒಂದು ಹಂತದಲ್ಲಿ ಮುನ್ನುಗಲು ಯತ್ನಿಸಿತು. ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿತು.

ಈ ಸಂದರ್ಭ ಸಮಯ ಪ್ರಜ್ಞೆ ಮೆರೆದ ಪೊಲೀಸರು ಎರಡೂ ಕಡೆಯವರನ್ನು ಹರಸಾಹಸದಿಂದ ಸಮಾಧಾನಪಡಿಸಿ, ಪರಿಸ್ಥಿತಿ ತಿಳಿಗೊಳ್ಳುವಂತೆ ಮಾಡಿದರು. ಡಿವೈಎಸ್ಪಿ ಸುಂದರರಾಜ್ ಹಾಗೂ ವೃತ್ತ ನಿರೀಕ್ಷಕ ಐ.ಪಿ. ಮೇದಪ್ಪ ನೇತೃತ್ವದಲ್ಲಿ ಪೇಟೆ ರಾಮಮಂದಿರ, ಇಂದಿರಾಗಾಂಧಿ ವೃತ್ತ ಸೇರಿದಂತೆ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News