ಓ ಮೆಣಸೇ…!

Update: 2017-12-11 07:08 GMT

►ಚುನಾವಣೆಗೆ ಮುನ್ನ ಹುದ್ದೆಯ ಭರವಸೆ ನೀಡುವ ಸಂಪ್ರದಾಯ ಕಾಂಗ್ರೆಸ್‌ನಲ್ಲಿಲ್ಲ - ಎಚ್.ಆಂಜನೇಯ, ಸಚಿವ

ಚುನಾವಣೆಗೆ ಮುನ್ನ ಜನರಿಗೆ ಕೊಟ್ಟ ಭರವಸೆ ಈಡೇರಿಸುವ ಸಂಪ್ರದಾಯವೂ ಇಲ್ಲ.
---------------------
►  ಪ್ರಜ್ವಲ್ ರೇವಣ್ಣ ಕೂಡ ವಿಧಾನಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿ - ಎಚ್.ಡಿ.ಕುಮಾರ ಸ್ವಾಮಿ, ಮಾಜಿ ಮುಖ್ಯಮಂತ್ರಿ

 ಪ್ರಜ್ವಲ್ ಅವರ ಮಗನಿಗೂ ಒಂದು ಕೊಟ್ಟು ಬಿಡಿ.

---------------------
 ► ಮುಂದಿನ ದೀಪಾವಳಿ ಹಬ್ಬವನ್ನು ಅಯೋಧ್ಯೆಯ ರಾಮ ಮಂದಿರದಲ್ಲೇ ಆಚರಿಸಲಿದ್ದೇವೆ - ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ

 ಮುಂದಿನ ದೀಪಾವಳಿಯ ಹೊತ್ತಿಗೆ ಲೋಕಸಭೆ ಚುನಾವಣೆ ಘೋಷಣೆಯಾಗಬಹುದು ಎನ್ನುವ ಭರವಸೆಯೊಂದಿಗೆ.
---------------------
►  ಇಸ್ಲಾಮಿನ ಹೆಸರಲ್ಲಿ ಮಹಿಳೆಯರ ದೌರ್ಜನ್ಯಕ್ಕೆ ಕೊನೆ ಹಾಡಲೇಬೇಕು  - ಬಾಬಾ ರಾಮ್‌ದೇವ್, ಯೋಗಗುರು

ವೃಂದಾವನದಲ್ಲಿ ಬಿಳಿ ಸೀರೆ ಉಟ್ಟು ಭಿಕ್ಷೆ ಬೇಡುತ್ತಿರುವ ಮಹಿಳೆಯರು ಇಸ್ಲಾಮಿನ ಕೊಡುಗೆ ಎನ್ನುತ್ತೀರಾ?
---------------------
►  ಪೆಟಾದವರು ಪ್ರಾಣಿಗಳನ್ನು ಕೊಂದು ತಿನ್ನುವವರ ವಿರುದ್ಧ ಹೋರಾಟ ನಡೆಸಲಿ - ಶೋಭಾ ಕರಂದ್ಲಾಜೆ, ಸಂಸದೆ

 ಮನುಷ್ಯರನ್ನು ಕೊಂದು ತಿನ್ನುವವರ ಬಗ್ಗೆ ಯಾರು ಹೋರಾಡಬೇಕು?
---------------------
► ಜಗತ್ತಿನ ಮೂಲೆ ಮೂಲೆಗಳಲ್ಲೂ ತುಳು ಸಂಸ್ಕೃತಿಗೆ ಗೌರವವಿದೆ - ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ

 ಕರಾವಳಿಯಲ್ಲಿ ಬಿಟ್ಟು ಜಗತ್ತಿನ ಮೂಲೆಗಳಲ್ಲಿ ತುಳುವನ್ನು ಹುಡುಕಬೇಕಾಗಿದೆ, ರಾಜಕಾರಣಿಗಳ ದೆಸೆಯಿಂದ.

---------------------
► ತನ್ನ ಕೆಪಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲು ಅನೇಕರು ಮುಂದೆ ಬರುತ್ತಿದ್ದಾರೆ - ಉಪೇಂದ್ರ, ನಟ

 ತಮ್ಮ ಹೊಸ ಸಿನೆಮಾ ಎಂದು ತಪ್ಪು ತಿಳಿದುಕೊಂಡಿರಬೇಕು.

---------------------
►ಬುಲೆಟ್ ಟ್ರೈನ್ ವಿರೋಧಿಗಳು ಎತ್ತಿನಗಾಡಿಯಲ್ಲಿ ಹೋಗಲಿ - ನರೇಂದ್ರ ಮೋದಿ, ಪ್ರಧಾನಿ

ಎತ್ತುಗಳೆಲ್ಲ ಮಾಂಸಗಳಾಗಿ ಹೊರ ದೇಶಕ್ಕೆ ರಫ್ತಾಗುತ್ತಿವೆ.
---------------------
►ರಾಹುಲ್ ಗಾಂಧಿ ಕಾಂಗ್ರೆಸ್‌ನ ಡಾರ್ಲಿಂಗ್ - ಮನಮೋಹನ್ ಸಿಂಗ್, ಮಾಜಿ ಪ್ರಧಾನಿ

 ಡಾರ್ಲಿಂಗ್ ಪದ ಕೇಳಿ ಕರ್ನಾಟಕ ನಟಿಯೊಬ್ಬರು ನಾಚಿ ನೀರಾದರಂತೆ.

---------------------
 ► ನರೇಂದ್ರ ಮೋದಿಯಿಂದ ಲೋಕಪಾಲ ದುರ್ಬಲ - ಅಣ್ಣಾ ಹಝಾರೆ, ಹೋರಾಟಗಾರ

ತಮ್ಮ ಧ್ವನಿಯೇಕೆ ಇಷ್ಟು ದುರ್ಬಲಗೊಂಡಿದೆ?
---------------------
► ಸಿದ್ದರಾಮಯ್ಯ ಎಂಬ ಪಾಪದ ಪಿಂಡವನ್ನು ಎಲ್ಲಿ ಹುಟ್ಟಿದೆಯೋ ಅಲ್ಲಿಯೇ ಮುಗಿಸಬೇಕು - ಅನಂತ ಕುಮಾರ್ ಹೆಗಡೆ, ಕೇಂದ್ರ ಸಚಿವ

 ಮತದಾರರು ನಿಜವಾದ ಪಾಪಿಗಳಿಗೆ ಪಿಂಡ ಹಾಕಲು ಕಾಯುತ್ತಿದ್ದಾರೆ.

---------------------
►  ಕೆ.ಎಸ್.ಈಶ್ವರಪ್ಪ ಮುಖ್ಯಮಂತ್ರಿಯಾಗುವುದಾದರೆ ನಾನು ಬಿಜೆಪಿ ಸೇರಲು ಸಿದ್ಧ - ವರ್ತೂರು ಪ್ರಕಾಶ್, ಶಾಸಕ

ಆಗ ಯಡಿಯೂರಪ್ಪ ಬಿಜೆಪಿ ಬಿಡಬೇಕಾಗುತ್ತದೆ. 

---------------------
► ಕೆಲಸ ಮಾಡದೇ ಹಣ ಸಂಪಾದನೆ ಮಾಡಬೇಕೆಂಬ ಮನೋಭಾವ ಜಗತ್ತಿನ ದೊಡ್ಡ ಸಮಸ್ಯೆ - ಅನಂತ ಕುಮಾರ್, ಕೇಂದ್ರ ಸಚಿವ

ಕೆಲಸ ಮಾಡದೆಯೇ ತಾವು ಸಂಪಾದನೆ ಮಾಡುತ್ತಿಲ್ಲವೇ?
---------------------
ಕುವೆಂಪು, ಅಂಬೇಡ್ಕರ್ ಸೇರಿದಂತೆ ಅನೇಕ ಮಹನಿಯರು ಸಂಸ್ಕೃತ ಅಧ್ಯಯನ ಮಾಡಿಯೇ ಉನ್ನತ ಸ್ಥಾನಕ್ಕೇರಿದವರು - ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ

ಮಧ್ವರನ್ನು, ಮನುವನ್ನು ಕುವೆಂಪು, ಅಂಬೇಡ್ಕರ್ ವಿರೋಧಿಸಲು ಸಂಸ್ಕೃತದಲ್ಲಿ ಬರೆದುದನ್ನು ಓದಿರುವುದೇ ಕಾರಣವಾಗಿದೆ.

---------------------
ಬಿಜೆಪಿಯವರ ಗಾಳಕ್ಕೆ ಬಾಯಿಹಾಕುವ ಮನುಷ್ಯ ನಾನಲ್ಲ - ಪ್ರಮೋದ್ ಮಧ್ವರಾಜ್, ಸಚಿವ

 ದೊಡ್ಡ ಬಲೆಯಾದರೆ ಬೀಳುತ್ತೀರಾ?
---------------------
ಬಿಜೆಪಿಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ - ಡಿ.ಕೆ.ಶಿವಕುಮಾರ್, ಸಚಿವ

 ಕಾಂಗ್ರೆಸ್‌ನ ತಟ್ಟೆಯಲ್ಲಿ ಬಿಜೆಪಿಯೇ ಬಿದ್ದಿದೆ ಎಂಬ ಆರೋಪಗಳಿವೆ.

---------------------
ಭಾರತದ ಜೈಲುಗಳಲ್ಲಿ ನನಗೆ ಜೀವ ಭಯವಿದೆ - ವಿಜಯ ಮಲ್ಯ, ಉದ್ಯಮಿ

ಭಾರತದ ದಿವಾಳಿಯೆದ್ದ ಬ್ಯಾಂಕುಗಳನ್ನೇ ಜೈಲಾಗಿ ಪರಿವರ್ತಿಸಿ ಕೊಟ್ಟರೆ ಆದೀತೇ?
---------------------
► ಗುಜರಾತಿ ಖಾದ್ಯಗಳ ಮೇಲಿನ ಪ್ರೀತಿಯಿಂದಾಗಿ ನಾನೀಗ ಧಡಿಯನಾಗಿದ್ದೇನೆ - ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ


 ಮುಖ್ಯಮಂತ್ರಿ ಕುರ್ಚಿ ನಿಮಗೆ ಖಾದ್ಯದಂತೆ ಕಾಣುತ್ತಿರಬೇಕು.

---------------------
ಜೆಡಿಎಸ್ ಅಥವಾ ದೇವೇಗೌಡರನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

ತಾವು ಮುಗಿಸಿರುವ ರಾಮಕೃಷ್ಣ ಹೆಗಡೆಯವರ ಆತ್ಮ ಹೌದು ಎಂದಿತು.
---------------------
► 1992 ಅಯೋಧ್ಯಾ ರಾಮಮಂದಿರ ಕರಸೇವೆ ನಮ್ಮ ಪಾಲಿನ ನಿಜವಾದ ಸ್ವಾತಂತ್ರ ಹೋರಾಟವಾಗಿತ್ತು - ನಳಿನ್ ಕುಮಾರ್ ಕಟೀಲು, ಸಂಸದ

ಹಾಗಾದರೆ ಆರೆಸ್ಸೆಸ್ ಚೆಡ್ಡಿಗಳಿಗೆ ಸ್ವಾತಂತ್ರ ಹೋರಾಟಗಾರರ ಪಿಂಚಣಿ ಸಿಗುತ್ತಿರಬೇಕಲ್ಲ.
---------------------
ಬಿಜೆಪಿ ಹುಲಿ ಸವಾರಿ ಮಾಡುತ್ತಿದೆ - ರಮಾನಾಥ ರೈ, ಸಚಿವ

 ಆನೆ ಸವಾರಿಗಿಂತ ವಾಸಿ ಎನ್ನುತ್ತಿದ್ದಾರೆ.

---------------------

► ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇರುವುದರಿಂದ ಯಡಿಯೂರಪ್ಪ ಸಿಎಂ ಅಭ್ಯರ್ಥಿಯಾಗಿದ್ದಾರೆ - ಡಿ.ಕೆ.ಶಿವಕುಮಾರ್, ಸಚಿವ

ಅವರ ಕೊರತೆ ತುಂಬಿಸುವ ಆಲೋಚನೆಯೇನಾದರೂ ಇದೆಯೇ?

---------------------

► ಕರ್ನಾಟಕದ ಕರಾವಳಿ ಉಗ್ರರ ಅಡಗು ತಾಣವಾಗುತ್ತಿದೆ -  ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ

ತಮ್ಮ ಮಹಿಳಾ ಭಕ್ತರ ಪ್ರಕಾರ ಆ ಉಗ್ರರೆಲ್ಲ ತಮ್ಮ ಮಠವನ್ನೇ ತಂಗುದಾಣ ಮಾಡಿದ್ದಾರಂತೆ.
 

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...