ಎಚ್‍ಐವಿ/ಏಡ್ಸ್ ಬಗ್ಗೆ ಜಾಗೃತಿ ಅಗತ್ಯ : ಡಾ.ಶಿವಕುಮಾರ್ ಅಭಿಪ್ರಾಯ

Update: 2017-12-13 18:16 GMT

ಮಡಿಕೇರಿ,ಡಿ.13:ಆರೋಗ್ಯಯುತ ಬದುಕು ನಡೆಸುವಂತಾಗಲು ಎಚ್.ಐ.ವಿಯಂತಹ ಸೋಂಕಿನ ಬಗ್ಗೆ ಪ್ರತಿಯೊಬ್ಬರಲ್ಲಿಯೂ ತಿಳುವಳಿಕೆ ಅಗತ್ಯ. ಈ ನಿಟ್ಟಿನಲ್ಲಿ ಎಚ್.ಐ.ವಿ./ಏಡ್ಸ್ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವಂತಾಗಬೇಕು. ಎಚ್.ಐ.ವಿ ವೈರಸ್ ನಾಲ್ಕು ಹಂತಗಳಿಂದ ಬರುತ್ತದೆ. ಅಸುರಕ್ಷತೆ ಲೈಂಗಿಕತೆಯಿಂದ, ಎಚ್.ಐ.ವಿ ಸೋಂಕಿತ ವ್ಯಕ್ತಿ ರಕ್ತದಾನ ಮಾಡುವುದರಿಂದ, ಎಚ್.ಐ.ವಿ ಸೋಂಕಿತ ವ್ಯಕ್ತಿಗೆ ಬಳಸಿದ ಸಿರಂಜ್ ಬಳಕೆ ಮಾಡುವುದರಿಂದ ಏಡ್ಸ್/ಎಚ್.ಐ.ವಿ. ಬರುತ್ತದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿಗಳಾದ ಡಾ. ಶಿವಕುಮಾರ್ ಅವರು ತಿಳಿಸಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಲಯನ್ಸ್ ಮತ್ತು ಲಯನೆಸ್ ಸಂಸ್ಥೆ, ರೋಟರಿ ಮಿಸ್ಟಿಹಿಲ್ಸ್, ಓಡಿಪಿ-ಸ್ನೇಹಾಶ್ರಯ ಸಮಿತಿ ಹಾಗೂ ಸರ್ವೋದಯ ಎಚ್‍ಐವಿ ಬಾಧಿತರ ಸಂಪರ್ಕ ಜಾಲ, ಆಶೋದಯ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಬುಧವಾರ ನಡೆದ ವಿಶ್ವ ಏಡ್ಸ್ ನಿಯಂತ್ರಣಾ ದಿನಾಚರಣೆಯ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ಅಕ್ವೇರಡ್ ಇಮ್ಯೂನೊ ಡಿಫೆನ್ಸಿ ಸಿಂಡ್ರೋಮ್ ಮಾನವನ ಆರೋಗ್ಯವನ್ನು ಕುಂದಿಸುತ್ತದೆ. ಇದಕ್ಕೆ ಔಷಧಿ ಇಲ್ಲ ಹಾಗಾಗಿ ಲೈಗಿಂಕ ಸಂಪರ್ಕ ಮಾಡುವವರು ಕಾಂಡೋಮ್ ಬಳಸಿ. ಎಚ್.ಐ.ವಿ ಸೋಂಕಿತ ವ್ಯಕ್ತಿಯನ್ನು ಆ್ಯಂಟಿ ಬಯೋಟಿಕ್ ಔಷಧಿಯಿಂದ ಹೆಚ್ಚು ಕಾಲ ಬದುಕಿಸಬಹುದು. ಆದರೆ ರೋಗದಿಂದ ಗುಣಮುಖರಾಗುವುದಿಲ್ಲ. ಇವರಿಗೆ ಪೌಷ್ಠಿಕ ಆಹಾರ ಬಹಳ ಮುಖ್ಯ ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಎ.ಸಿ.ಶಿವಕುಮಾರ್ ತಿಳಿಸಿದರು.

15 ರಿಂದ 45 ವಯೋಮಾನದ ಯುವಕರಲ್ಲಿ ಏಡ್ಸ್/ಎಚ್.ಐ.ವಿ. ಬಾರದ ಹಾಗೆ ನೋಡಿಕೊಳ್ಳಬೇಕು. ನಮ್ಮ ಜೊತೆ ಕೈ ಜೋಡಿಸಿ ಹಾಗೆಯೇ ನಾವು ಪ್ರಾಥಮಿಕ ಕೇಂದ್ರದಲ್ಲಿ ಪ್ರತಿ ಶನಿವಾರ ಆರೋಗ್ಯ ಸುರಕ್ಷತೆ ಬಗ್ಗೆ ಕಾರ್ಯಕ್ರಮ ನಡೆಸುತ್ತೇವೆ ಎಂದರು.

ಲಯನ್ಸ್ ಕ್ಲಬ್ ಅಧ್ಯಕ್ಷರಾದ ಕನ್ನಂಡ ಬೊಳ್ಳಪ್ಪ ಮಾತನಾಡಿ ಪ್ರಪಂಚದ ಎಲ್ಲಾ ಮಾನವರು ಒಂದಲ್ಲ ಒಂದು ರೋಗದಲ್ಲಿ ಬಳಲುತ್ತಿದ್ದಾರೆ. ಆದರೆ ಏಡ್ಸ್ ಮಾನವ ಪ್ರಪಂಚಕ್ಕೆ ಮಾರಕವಾಗಿದ್ದು, ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು. 

ರೋಗಬಾಧಿತ ವ್ಯಕ್ತಿಗಳು ರೋಗ ಹರಡದಂತೆ ನೋಡಿಕೊಳ್ಳಬೇಕು. ಹುಟ್ಟಿದವನು ಸಾಯಲೇಬೇಕು. ಅದರೆ ಅಮೂಲ್ಯವಾದ ಜೀವನವನ್ನು ರಕ್ಷಣೆ ಮಾಡಿಕೊಳ್ಳಿ ಎಂದು ಬೊಳ್ಳಪ್ಪ ಅವರು ಹೇಳಿದರು.

ಜಿಲ್ಲಾ ಕುಟುಂಬ ಕಲ್ಯಾಣಧಿಕಾರಿ ಡಾ.ಎನ್.ಆನಂದ ಮಾತನಾಡಿ ಏಡ್ಸ್/ಎಚ್.ಐ.ವಿ ಸುಧಾರಣೆಯಾಗಬೇಕಾದರೆ ರೋಗದ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು. ವಿದ್ಯಾರ್ಥಿಗಳು ದೇಶದ ಮುಂದಿನ ಪ್ರಜೆಗಳು. ವಿದ್ಯಾರ್ಥಿ ಜೀವನದಲ್ಲಿ ಆಸೆಗಳು ಜಾಸ್ತಿ ಇರುತ್ತದೆ ಅದನ್ನು ತಡೆದುಕೊಳ್ಳಬೇಕು ಎಂದು ತಿಳಿಸಿದರು.

ಓಡಿಪಿ-ಸ್ನೇಹಾಶ್ರಯ ಸಮಿತಿಯ ಕಾರ್ಯಾಧ್ಯಕ್ಷರಾದ ಕೆ.ಟಿ.ಬೇಬಿ ಮ್ಯಾಥ್ಯು ಮಾತನಾಡಿ ತಾಯಿಯಿಂದ ನವಜಾತ ಶಿಶುವಿಗೆ ಏಡ್ಸ್ ಹರಡದಂತೆ ಎಚ್ಚರವಹಿಸಬೇಕು. ಹಾಗೆಯೇ ಎಚ್‍ಐವಿ ಬಗ್ಗೆ ಪ್ರತಿಯೊಬ್ಬರು ಅರಿತುಕೊಳ್ಳಬೇಕು ಹೇಳಿದರು. 

ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ನೀಲೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಎಂ.ಶಿವಕುಮಾರ್, ಸಮುದಾಯ ಆರೋಗ್ಯ ಮುಖ್ಯಸ್ಥರಾದ ಡಾ.ರಾಮಚಂದ್ರ ಕಾಮತ್, ಜಿಲ್ಲಾ ಕಾರ್ಯಕ್ರಮ ಸಹಾಯಕರು ಹಾಗೂ ಏಡ್ಸ್ ನಿಯಂತ್ರಣ ಘಟಕದ ಕಮಲ, ಜಿಲ್ಲಾ ಮೇಲ್ವಿಚಾರಕರಾದ ಸುನೀತ ಮುತ್ತಣ್ಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಮ್ತಾಜ್, ಲಯನ್ಸ್ ಕ್ಲಬ್‍ನ ಅಧ್ಯಕ್ಷರಾದ ಕನ್ನಂಡ ಕವಿತಾ ಬೊಳ್ಳಪ್ಪ, ವಕೀಲರ ಸಂಘದ ಅಧ್ಯಕ್ಷರಾದ ಸಿ.ಟಿ.ಜೋಸೆಫ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಬಿ.ಎಸ್.ಜಯಪ್ಪ, ವಿದ್ಯಾರ್ಥಿಗಳು ಹಾಜರಿದ್ದರು.

ಜಾಥಾಕ್ಕೆ ಚಾಲನೆ

ಸಭಾ ಕಾರ್ಯಕ್ರಮಕ್ಕೂ ಮೊದಲು ವಿಶ್ವ ಏಡ್ಸ್ ದಿನದ ಕುರಿತು ಜಾಥಾಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಆರ್.ಕೆ.ಜಿ.ಎಂ.ಎಂ.ಮಹಾಸ್ವಾಮೀಜಿ ಚಾಲನೆ ನೀಡಿದರು.   

ಈ ಸಂದರ್ಭ ವಕೀಲರ ಸಂಘದ ಅಧ್ಯಕ್ಷರಾದ ಸಿ.ಟಿ.ಜೋಸೆಫ್, ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ.ಶಿವಕುಮಾರ್,  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಎಂ.ಶಿವಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಎನ್.ಆನಂದ್, ಸಮುದಾಯ ಆರೋಗ್ಯ ಮುಖ್ಯಸ್ಥರಾದ ಡಾ.ರಾಮಚಂದ್ರ ಕಾಮತ್,  ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಬಿ.ಎಸ್.ಜಯಪ್ಪ ಮತ್ತಿತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.  

ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ನರ್ಸಿಂಗ್ ವಿದ್ಯಾರ್ಥಿಗಳು, ಸರ್ಕಾರಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿಗಳು,  ಓಡಿಪಿ ಸ್ವ ಸಹಾಯ ಸಂಘದ ಪ್ರತಿನಿಧಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಜಾಥಾದಲ್ಲಿ ಪಾಲ್ಗೊಂಡು ಎಚ್‍ಐವಿ /ಏಡ್ಸ್ ನಿಯಂತ್ರಣದ ಬಗ್ಗೆ ಘೋಷ ವಾಕ್ಯಗಳನ್ನು ಹೇಳಿದರು.

ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಿಂದ ಜಾಥ ಹೊರಟು ನಗರದ ಇಂದಿರಾ ಗಾಂಧಿ ವೃತ್ತ, ಅಜ್ಜಮಾಡ ಬಿ.ದೇವಯ್ಯ ವೃತ್ತ, ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದ ಮಾರ್ಗವಾಗಿ ಕಾವೇರಿ ಕಲಾಕ್ಷೇತ್ರದವರೆಗೆ ಜಾಥಾ ಸಾಗಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News