ಮತದಾರರ ಪಟ್ಟಿ ಪರಿಷ್ಕರಣೆ: ಮನೆ ಮನೆಗಳಿಗೆ ಖುದ್ದು ಭೇಟಿ ನೀಡಲು ಅಧಿಕಾರಿಗಳಿಗೆ ಸೂಚನೆ

Update: 2017-12-14 17:28 GMT

ಮಡಿಕೇರಿ, ಡಿ.14: ಅರ್ಹ ಮತದಾರರ ನೋಂದಣಿಯನ್ನು ಚುರುಕುಗೊಳಿಸಲು ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳು ತಮಗೆ ವಹಿಸಿದ ಮತಗಟ್ಟೆಗಳ ಮತದಾರರ ಪಟ್ಟಿಯ ಒಟ್ಟು ಮನೆಗಳ ಶೇ.25ರಷ್ಟು ಮತದಾರರ ಮನೆಗಳಿಗೆ ಖುದ್ದು ಭೇಟಿ ನೀಡಿ ಎಲ್ಲಾ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಬಗ್ಗೆ ಪರಿಶೀಲಿಸಿ ಮುಂದಿನ ಪ್ರಕ್ರಿಯೆಗಳನ್ನು ಸಮರ್ಪಕವಾಗಿ ನಿಭಾಯಿಸಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2018ರ ಮತದಾರರ ಪಟ್ಟಿಯ ಪರಿಷ್ಕರಣೆ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2018 ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಮತದಾರರ ಪಟ್ಟಿ ತಯಾರಿಸುವುದು. ಬೂತ್ ಮಟ್ಟದ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪರಿಶೀಲಿಸುವುದು. ಮತದಾರರ ಪಟ್ಟಿಯಲ್ಲಿ ಮೃತ, ಸ್ಥಳಾಂತರ ಮತ್ತು ಪುನರಾವರ್ತನೆಯಾಗಿರುವ ಮತದಾರರನ್ನು ಕೈಬಿಡಲು ಕ್ರಮವಹಿಸುವುದು. ಮತದಾರರಿಗೆ ಶೇ.100ರಷ್ಟು ಮತದಾರರ ಗುರುತು ಚೀಟಿ ವಿತರಣೆ ಮಾಡಿರುವ ಬಗ್ಗೆ ಪರಿಶೀಲಿಸುವುದು. ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳು ಮತದಾರರ ಪಟ್ಟಿಯ ಬಗ್ಗೆ ಬೂತ್ ಮಟ್ಟದ ಅಧಿಕಾರಿಗಳಿಂದ ವರದಿಯನ್ನು ಪಡೆಯುವ ಕಾರ್ಯ ಆಗಬೇಕು ಎಂದರು. ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು ಅವರ ವ್ಯಾಪ್ತಿಗೆ ಒಳಪಡುವ ಮತಗಟ್ಟೆಗಳ ಮತದಾರರ ಪಟ್ಟಿಯಲ್ಲಿ ಒಟ್ಟು ಮನೆಗಳ ಶೇ.10ರಷ್ಟು ಮತದಾರರ ಮನೆಗಳಿಗೆ ಭೇಟಿ ನೀಡಿ ಬೂತ್ ಲೆವಲ್ ಅಧಿಕಾರಿಗಳು ಮನೆ ಮನೆಗಳಿಗೆ ತೆರಳಿ ಪರಿಶೀಲನೆ ಮಾಡಿರುತ್ತಾರೆಯೇ ಎಂದು ಪರಿಶೀಲಿಸುವುದು. ಮನೆಯ ಎಲ್ಲಾ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಬಗ್ಗೆ ಪರಿಶೀಲನೆ ಮಾಡಬೇಕಿದೆ ಎಂದು ಅವರು ಹೇಳಿದರು. ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು ತಮಗೆ ವಹಿಸಿರುವ ಮತಗಟ್ಟೆಗಳಿಗೆ ಖುದ್ದು ತೆರಳಿ ಮತಗಟ್ಟೆಯ ಬಗ್ಗೆ ನೀಡಲಾಗುವ ಅನುಬಂಧ-2ರ ಚೆಕ್‌ಲಿಸ್ಟ್‌ನಲ್ಲಿ ಮಾಹಿತಿಯನ್ನು ತಯಾರಿಸಿ ತಾಲೂಕು ಕಚೇರಿಗೆ ಸಲ್ಲಿಸುವುದು. ವಿದ್ಯುಚ್ಛಕ್ತಿ ಸೌಲಭ್ಯ, ಕುಡಿಯುವ ನೀರು, ರ್ಯಾಂಪ್ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ/ಮಳೆ ಬಂದಲ್ಲಿ ಮೇಲು ಛಾವಣಿಯಿಂದ ಮಳೆ ಒಳನುಗ್ಗುವ ಬಗ್ಗೆ ಪರಿಶೀಲಿಸಿ ವರದಿ ನೀಡುವುದು. ಹಿಂದಿನ ಚುನಾವಣೆಗಳಲ್ಲಿ ಶಾಂತಿಯುತ ಮತದಾನಕ್ಕೆ ಭಂಗ ತರುವಂತಹ ಘಟನೆಗಳು ಮತಗಟ್ಟೆಯಲ್ಲಿ ಸಂಭವಿಸಿದ್ದರೆ ಮಾಹಿತಿ ಸಂಗ್ರಹಿಸಿ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿ ದಿನ ಸ್ವೀಕರಿಸಿದ ನಮೂನೆ-6, 7, 8, 8ಎರ ವಿವರವನ್ನು ಇಆರ್‌ಎಂಎಸ್ ನಲ್ಲಿ ದಾಖಲಿಸುವುದು ಹಾಗೂ 1300 ಕ್ಕಿಂತ ಹೆಚ್ಚು ಮತದಾರರು ಇರುವ ಮತಗಟ್ಟೆಗಳಲ್ಲಿ ವಿಶೇಷ ಗಮನಹರಿಸಿ ಮೃತ, ಸ್ಥಳಾಂತರ ಮತ್ತು ಪುನರವರ್ತನೆಯಾಗಿರುವ ಮತದಾರರನ್ನು ಕೈ ಬಿಡಲು ಕ್ರಮವಹಿಸಬೇಕಿದೆ ಎಂದರು. ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ತಹಶೀಲ್ದಾರ ಕುಸುಮಾ, ಮಹೇಶ್, ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News