ಮರು ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ: ಮಹೇಶ್ ಒಡೆಯರ್
ಕಡೂರು, ಡಿ.15: ಕಳೆದ 10 ವರ್ಷಗಳಿಂದ 14ನೇ ವಾರ್ಡಿನ ಕಾಂಗ್ರೆಸ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಎಂ. ರೇಣುಕಾರಾಧ್ಯ ಅಕಾಲಿಕ ನಿಧನದಿಂದಾಗಿ ತೆರವಾದ ಸ್ಥಾನಕ್ಕೆ ಡಿ.17ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಕುಮಾರ್ ಗೆಲುವು ಖಚಿತವಾಗಿದೆ ಎಂದು ಜಿಪಂ ಸದಸ್ಯ ಮಹೇಶ್ ಒಡೆಯರ್ ತಿಳಿಸಿದರು.
ಅವರು 14ನೆ ವಾರ್ಡಿನ ಪಕ್ಷದ ಅಭ್ಯರ್ಥಿ ಪರ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡು ನಂತರ ಮಾಧ್ಯಮದರೊಂದಿಗೆ ಮಾತನಾಡಿದರು. ಈ ವಾರ್ಡಿನಲ್ಲಿ ಜಾತ್ಯಾತೀತವಾಗಿ ಎಲ್ಲಾ ಜನಾಂಗದವರ ಮತಗಳಿದ್ದು, ಅಭಿವೃದ್ಧಿ ಕಾರ್ಯಗಳು ವಾರ್ಡಿನಲ್ಲಿ ನಡೆದಿದೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತಾ ಬಂದಿದೆ. ಪಕ್ಷದ ಎಲ್ಲಾ ಮುಖಂಡರುಗಳ ಒಮ್ಮತದಿಂದ ಮತಯಾಚನೆ ನಡೆಸಲಾಗುತ್ತಿದೆ. ಬ್ಲಾಕ್ ಕಾಂಗ್ರೆಸ್, ಯುವ ಕಾಂಗ್ರೆಸ್ ಸಕ್ರೀಯವಾಗಿ ಒಗ್ಗಟ್ಟಿನಿಂದ ಹೋರಾಟ ಮಾಡಲಾಗುತ್ತಿದೆ ಎಂದರು.
ಬಿಜೆಪಿ ಪಕ್ಷದವರು ಎಂದಿಗೂ ಶೋಷಿತರ ಪರವಾಗಿಲ್ಲ. ಚುನಾವಣೆ ಬಂದಾಗ ಶೋಷಿತರು ನೆನಪಿಗೆ ಬರುತ್ತಾರೆ. ಕಾಂಗ್ರೆಸ್ ಪಕ್ಷ ಮಾತ್ರ ಶೋಷಿತ ಪರವಾಗಿ ನಿಲ್ಲುತ್ತದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಶೋಷಿತರ ಪರವಾಗಿ ಮಾಡಿರುತ್ತಾರೆ. ಕಾಂಗ್ರೆಸ್ ಪಕ್ಷ ಮಾತ್ರ ಶೋಷಿತರ ಧ್ವನಿಯಾಗಿ ನಿಲ್ಲುತ್ತದೆ. ಸಣ್ಣ ಸಣ್ಣ ಸಮುದಾಯಗಳಿಗೆ ಬದುಕನ್ನು ಕಟ್ಟಿಕೊಟ್ಟಿರುವ ಸರ್ಕಾರ ಕಾಂಗ್ರೆಸ್ನದ್ದಾಗಿದೆ. ಬಿ.ಜೆ.ಪಿ. ಯವರಿಗೆ ದಲಿತರ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಸ್. ಆನಂದ್ ಮಾತನಾಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ 14ನೇ ವಾಡಿಗೆ ಹೋದಾಗ ಮತದಾರರು ಉತ್ತಮ ಸ್ಪಂಧಿಸುತ್ತಿದ್ದಾರೆ. ವಾರ್ಡಿನಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಸಿಮೆಂಟ್ ರಸ್ತೆಗಳು, ಚರಂಡಿ ಕಾಮಗಾರಿಗಳು ಉತ್ತಮ ರೀತಿಯಲ್ಲಿ ನಡೆದಿವೆ. ಪುರಸಭೆಗೆ ಇನ್ನೂ ಒಂದು ವರ್ಷ ಅವಧಿ ಇದ್ದು, ಆಡಳಿತ ಕಾಂಗ್ರೆಸ್ನವರದ್ದಾಗಿದ್ದು, ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಲು ಕಾಂಗ್ರೆಸ್ಗೆ ಬೆಂಬಲಿಸಲು ಮತದಾರರೇ ತೀರ್ಮಾನಿಸಿರುತ್ತಾರೆಂದು ತಿಳಿಸಿದರು.
ಶಿಕ್ಷಕರ ಪದವೀಧರರ ಕ್ಷೇತ್ರದ ನೊಂದಣಿಗೆ ಡಿ.21 ರಂದು ಕೊನೆಯ ದಿನವಾಗಿದೆ. ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬೇಕಿದೆ. ಗೆದ್ದು ಹೋಗಿರುವ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿಗರ ಕೊಡುಗೆ ಶೂನ್ಯ. ಚುನಾವಣೆ ಸಮಯದಲ್ಲಿ ಬಂದು ಗೆದ್ದ ನಂತರ ಎಂದಿಗೂ ಈ ಕಡೆ ತಿರುಗಿ ನೋಡಿರುವ ಉದಾಹರಣೆಗಳಿಲ್ಲ. ಪದವೀಧರರು ಬಿ.ಜೆ.ಪಿ. ಯನ್ನು ಬೆಂಬಲಿಸದೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ಪಿ.ದಿನೇಶ್ಗೆ ಬೆಂಬಲಿಸಬೇಕಿದೆ. ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ದಿನೇಶ್ ಗೆಲುವು ಖಚಿತವಾಗಿದೆ ಎಂದರು.
ಈ ಸಂದರ್ಭದಲ್ಲಿ ಶರತ್ ಕೃಷ್ಣಮೂರ್ತಿ, ಮೋಹನ್, ರಂಗನಾಥ್, ಕಲೀಮುಲ್ಲಾ, ಎನ್.ಬಷೀರ್ಸಾಬ್ ಉಪಸ್ಥಿತರಿದ್ದರು.