ಮಹಾದಾಯಿ ಬಗ್ಗೆ ಮೋದಿ ತಲೆಕೆಡಿಸಿಕೊಂಡಿಲ್ಲ: ಚಂಪಾ
ಬೆಂಗಳೂರು, ಡಿ.15: ಮಹಾದಾಯಿ ಕಳಸಾ ಬಂಡೂರಿ ಸಮಸ್ಯೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮನಸ್ಸು ಮಾಡಿದರೆ, ಹತ್ತೇ ನಿಮಿಷಯಗಳಲ್ಲಿ ಬಗೆಹರಿಸಿಕೊಳ್ಳಬಹುದು. ಆದರೆ, ಅವರು ಇದುವರೆಗೂ ತಲೆಕೆಡಿಸಿಕೊಂಡಿಲ್ಲ ಎಂದು ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ(ಚಂಪಾ) ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ನಗರದ ಪುರಭವನದಲ್ಲಿ ಜನಸಾಮಾನ್ಯರ ವೇದಿಕೆ ಕರ್ನಾಟಕ ಹಾಗೂ ಮಹಾದಾಯಿ ಹೋರಾಟ ಸಮಿತಿ ಜಂಟಿಯಾಗಿ ಆಯೋಜಿಸಿದ್ದ, 'ರಾಜ್ಯದ ನೆಲ,ಜಲ, ಭಾಷೆಯ ರಕ್ಷಣೆ ಹಾಗೂ ಪ್ರಾದೇಶಿಕ ಅಸಮಾನತೆ' ಕುರಿತ ನಿರ್ಣಾಯಕ ಸಭೆ ಬಳಿಕ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಮಹಾದಾಯಿ ಕಳಸಾ ಬಂಡೂರಿ ವಿಚಾರದಲ್ಲಿ ಮಹಾರಾಷ್ಟ್ರ, ಗೋವಾ, ಕರ್ನಾಟಕ ಸೇರಿ ಮೂರು ರಾಜ್ಯಗಳ ಸರಕಾರಗಳ ಜೊತೆ ಕೇಂದ್ರ ಸರಕಾರವು ಮಾತುಕತೆ ನಡೆಸಿ, ಸಮರ್ಪಕ ಪರಿಹಾರ ನೀಡಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಚ್ಚುವರಿ ಆಸಕ್ತಿ ವಹಿಸಬೇಕಾಗಿದೆ ಎಂದು ಚಂಪಾ ನುಡಿದರು.
ಉತ್ತರ ಕರ್ನಾಟಕ ಹಲವಾರು ಜ್ವಲಂತ ಸಮಸ್ಯೆಗಳಿಂದ ಬಳಲುತ್ತಿದೆ. ಇದರಲ್ಲಿ ಕಳಸಾ ಬಂಡೂರಿ ಸಮಸ್ಯೆ ಬಹಳ ಪ್ರಮುಖವಾದದ್ದು. ಹಲವಾರು ದಶಕಗಳಿಂದ ಈ ಬಗ್ಗೆ ರಾಜಕಾರಣಿಗಳು ದಿವ್ಯ ನಿರ್ಲಕ್ಷ ತೋರಿಸುತ್ತಾ ಬಂದಿದ್ದಾರೆ. ಬರೀ ಭರವಸೆಗಳನ್ನು ನೀಡುತ್ತಿರುವ ರಾಜಕಾರಣಿಗಳು ಈ ಸಮಸ್ಯೆಯ ಪರಿಹಾರಕ್ಕೆ ಯಾವುದೇ ಕಾಳಜಿಯನ್ನು ತೋರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನ ಸಾಮಾನ್ಯರ ವೇದಿಕೆಯ ರಾಜ್ಯಾಧ್ಯಕ್ಷ ಡಾ.ಅಯ್ಯಪ್ಪ ಮಾತನಾಡಿ, ಯಾವುದೇ ರಾಜಕೀಯ ಪಕ್ಷಗಳಿಂದ ರೈತರ ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯವಿಲ್ಲ ಕಾಂಗ್ರೆಸ್ ಬಿಜೆಪಿ, ಪಕ್ಷಗಳು ಲೂಟಿಗಿಳಿದಿವೆ. ಹೀಗಾಗಿಯೇ, 2018ರ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೆ ಪರ್ಯಾಯವಾಗಿ 224 ಕ್ಷೇತ್ರಗಳಲ್ಲಿ 'ಕರ್ನಾಟಕ ಜನಸಾಮಾನ್ಯರ ಪಕ್ಷ'ದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಹೇಳಿದರು.
ಜನಪರ ವ್ಯಕ್ತಿಗಳಿಂದ ಯಾವುದೇ ಪ್ರಾದೇಶಿಕ ಪಕ್ಷ ಚಳವಳಿಯಿಂದ ಉದ್ಭವವಾಗಿ, ದುಡಿಯುವ ವರ್ಗಗಳ ಕೈಗೆ ಅಧಿಕಾರ ಸಿಗಬೇಕು. ಕರ್ನಾಟಕದಲ್ಲಿ ಈಗಿರುವ ರಾಜಕೀಯ ಪಕ್ಷಗಳಿಗೆ ಪರ್ಯಾಯವಾಗಿ ರೈತಪರವಾದ ಸರಕಾರ ಅಧಿಕಾರಕ್ಕೆ ಬರಬೇಕೆಂಬ ನಿಟ್ಟಿನಲ್ಲಿ 80ರ ದಶಕದ ಹೋರಾಟದ ಮಾದರಿಯಲ್ಲಿ ಪರ್ಯಾಯ ಪ್ರಾದೇಶಿಕ ಪಕ್ಷ ಬೇಕಿದೆ. ಅದಕ್ಕೆ ಈ ರಾಜಕೀಯ ಪಕ್ಷದ ಅವಶ್ಯಕತೆ ಇದೆ ಎಂದು ಅಯ್ಯಪ್ಪ ತಿಳಿಸಿದರು.
ಇದಕ್ಕೂ ಮೊದಲು ನಿರ್ಣಾಯಕ ಸಭೆಯಲ್ಲಿ ಮಾತನಾಡಿದ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಡಾ.ಸಿದ್ದರಾಮಯ ಸ್ವಾಮೀಜಿ, ಉತ್ತರ ಕರ್ನಾಟಕ ಅಭಿವೃದ್ದಿಗೆ ಸರಕಾರ ತಾರತಮ್ಯ ಮಾಡಿದ ಕಾರಣ ಪ್ರತ್ಯೇಕ ರಾಜ್ಯದ ಕೂಗು ಆ ಭಾಗದ ಜನರಲ್ಲಿ ಸಹಜವಾಗಿ ಮೂಡಿದೆ ಎಂದರು.
ಯಾವುದೇ ಪಕ್ಷದ ಸರಕಾರ ರಾಜ್ಯದಲ್ಲಿ ಆಡಳಿತ ನಡೆಸಲಿ, ಆದರೆ ದಕ್ಷಿಣ ಕರ್ನಾಟಕ ಅಭಿವೃದ್ದಿಗೆ ನೀಡುವ ಒತ್ತನ್ನು ಉತ್ತರ ಕರ್ನಾಟಕಕ್ಕೆ ನೀಡಿಲ್ಲ. ಇಂದಿಗೂ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಈ ಭಾಗ ತೀರ ಹಿಂದುಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ್ ಕುಲಕರ್ಣಿ, ಜೆಡಿಯು ಮುಖಂಡ ನಾಡೇಗೌಡ ಸೇರಿ ಪ್ರಮುಖರಿದ್ದರು.
ಸರಕಾರಕ್ಕೆ ಜನವರಿ 15ರವರೆಗೆ ಗಡುವು:
ಕೇಂದ್ರ ಮತ್ತು ರಾಜ್ಯ ಸರಕಾರ ಮಹಾದಾಯಿ ಸಮಸ್ಯೆಗೆ 2018 ಜನವರಿ 15ರವರೆಗೆ ಗಡುವು ನೀಡುತ್ತಿದ್ದೇವೆ. ಅಷ್ಟರೊಳಗೆ ಸಮರ್ಪಕ ಪರಿಹಾರ ನೀಡದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಕರ್ನಾಟಕ ಜನಸಾಮಾನ್ಯರ ಪಕ್ಷ ಅಸ್ತಿತ್ವಕ್ಕೆ ಬರಲಿದ್ದು, 224 ವಿಧಾನಸಭಾ ಕ್ಷೇತ್ರಗಳಲ್ಲೂ ಈ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.
-ಪ್ರೊ. ಚಂಪಾ, ಹಿರಿಯ ಚಿಂತಕ