ನಿಡುವಾಳೆ ಶ್ರೀರಾಮೇಶ್ವರ ದೇವಸ್ಥಾನಕ್ಕೆ ನಟ ಪುನೀತ್ ಭೇಟಿ

Update: 2017-12-16 13:11 GMT

ಬಣಕಲ್, ಡಿ.16:ಇಲ್ಲಿಗೆ ಸಮೀಪದ ನಿಡುವಾಳೆಯ ಶ್ರೀರಾಮೇಶ್ವರ ನೂತನ ದೇವಸ್ಥಾನಕ್ಕೆ ಖ್ಯಾತ ಚಿತ್ರನಟ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಶುಕ್ರವಾರ ಸಂಜೆ 6 ಗಂಟೆ ಸಮಯದಲ್ಲಿ ತನ್ನ ಸ್ನೇಹಿತರೊಂದಿಗೆ ನಿಡುವಾಳೆ ದೇವಸ್ಥಾನದ ಆಡಳಿತಾಧಿಕಾರಿ ಸುನೀಲ್.ಜೆ.ಗೌಡ ಅವರು ನಟ ಪುನೀತ್‍ರಾಜ್‍ಕುಮಾರ್ ಅವರಿಗೆ ಶಾಲು ಹೊದಿಸಿ ಹೂವು ಹಣ್ಣು ನೀಡಿ ಸ್ವಾಗತಿಸಿದರು.

ದೇವಸ್ಥಾನಕ್ಕೆ ಭೇಟಿ ನೀಡಿ ಮಾತನಾಡಿದ ನಟ ಪುನೀತ್ ರಾಜ್‍ಕುಮಾರ್ ಶ್ರೀರಾಮೇಶ್ವರ ದೇವಸ್ಥಾನವು ಮಲೆನಾಡ ಭಾಗದಲ್ಲಿ ದೈವಕೃಪೆ ಹಾಗೂ ಹಸಿರ ವಾತಾವರಣದಲ್ಲಿ ನೆಮ್ಮದಿಯ ತಾಣವಾಗಿದ್ದು ಭಕ್ತರಿಗೆ ಹಾಗೂ ಪ್ರವಾಸಿಗರಿಗೂ ತುಂಬಾ ವ್ಯವಸ್ಥಿತ ತಾಣವಾಗಿದೆ.ಮೊದಲ ಬಾರಿಗೆ ಮಲೆನಾಡಿನ ಈ ಭಾಗದಲ್ಲಿ ಕಲಾತ್ಮಕ ದೇವಸ್ಥಾನ ನೋಡಿದ್ದು ಖುಶಿ ತಂದಿದೆ ಎಂದರು.

ಅರ್ಚಕರಾದ ವಿಶ್ವೇಶ್ವರ ಕಾರಂತ್ ಮತ್ತು ದಿನಕರ ಭಟ್ ಅವರು ನಟ ಪುನೀತ್ ರಾಜ್‍ಕುಮಾರ್ ಅವರ ನಾಮದಲ್ಲಿ ವಿಶೇಷ ಪೂಜೆ ಸಲ್ಲಿಸಿದರು..ಅಂದು ಸಂಜೆ ವಿಲ್ಲಾ ಉರ್ವಿನ್‍ಖಾನ್ ಹೋಂ ಸ್ಟೇಯಲ್ಲಿ ತಂಗಿದ್ದರು.ನಂತರ ಶನಿವಾರ ಬೆಳಿಗ್ಗೆ ಸ್ನೇಹಿತರೊಂದಿಗೆ ಹೊರನಾಡು ಕಡೆಗೆ ತೆರಳಿದರು. ಅವರು ಯಾವ ಕಾರ್ಯಕ್ರಮಕ್ಕೆ ತೆರಳಲು ಇಲ್ಲಿಗೆ ಬಂದಿದ್ದರು ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ದೇವಸ್ಥಾನದಲ್ಲಿ ಪೂಜೆ ಸಂದರ್ಭದಲ್ಲಿ ನಟ ಪುನೀತ್‍ರಾಜ್‍ಕುಮಾರ್  ಮತ್ತು ಅವರ ಸ್ನೇಹಿತರು ಹಾಗೂ ದೇವಸ್ಥಾನದ ಕಾರ್ಯದರ್ಶಿ ನಾಗರಾಜ್ ಭಟ್,ಸಂತೋಷ್‍ ಸಾಲಿಯಾನ್, ತನಿಯ ಸಪಲ್ಯ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News