ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ : ಮಠಾಧೀಶರ ಹೇಳಿಕೆಗೆ ಹೊರಟ್ಟಿ ಖಂಡನೆ
ಬೆಂಗಳೂರು, ಡಿ.17: ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡುವುದನ್ನು ವಿರೋಧಿಸಿ ಕೆಲ ಮಠಾಧೀಶರು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬೆದರಿಕೆಯೊಡ್ಡುವ ರೀತಿಯಲ್ಲಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆಕ್ಷೇಪಿಸಿದ್ದಾರೆ.
ಪ್ರತ್ಯೇಕ ಧರ್ಮ ಮಾನ್ಯತೆ ಸಂಬಂಧ ಅಲ್ಪಸಂಖ್ಯಾತರ ಆಯೋಗಕ್ಕೆ ನೀಡಿರುವ ಅರ್ಜಿಯಲ್ಲಿ ಪಂಚ ಪೀಠಾದೀಶರ ಅರ್ಜಿಯೂ ಸೇರಿದೆ. ದಾಖಲೆಗಳ ಆಧಾರದಲ್ಲಿ ಯಾವುದು ಸೂಕ್ತವೋ ಅದಕ್ಕೆ ಮನ್ನಣೆ ದೊರೆಯಲಿದೆ. ಬಸವನಬಾಗೇವಾಡಿಯ ಶಿವ ಪ್ರಕಾಶ ಸ್ವಾಮೀಜಿ ಲಿಂಗಾಯತರು ತಮ್ಮ ಪತ್ನಿಯರ ಕುಂಕುಮ ತಾಳಿ ತೆಗೆಯಲಿ ಎಂದು ಹೇಳಿರುವುದು ಯಾವ ಸಂಸ್ಕೃತಿಯ ಪ್ರತೀಕ ಎಂದು ಪ್ರಶ್ನಿಸಿರುವ ಹೊರಟ್ಟಿ, ನೈತಿಕತೆಗೆ ಧಕ್ಕೆ ತರುವಂತಹ ಹೇಳಿಕೆ ಸ್ವಾಮೀಜಿಗಳಿಗೆ ಶೋಭೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೀರಶೈವ-ಲಿಂಗಾಯಿತ ಒಂದೇ ಎಂಬುದನ್ನು ಪಂಚಪೀಠಾದೀಶರು ದಾಖಲೆಗಳ ಮೂಲಕ ಸಾಬೀತುಪಡಿಸಲಿ. ಇಲ್ಲವಾದಲ್ಲಿ ಲಿಂಗಾಯಿತ ಧರ್ಮಕ್ಕೆ ಅಲ್ಪಸಂಖ್ಯಾತ ಧರ್ಮದ ಸೌಲಭ್ಯ ಕೊಡಿಸಲಿ. ಅದು ಬಿಟ್ಟು ಇಲ್ಲ ಸಲ್ಲದ ಆರೋಪ-ಆಕ್ಷೇಪ ಮಾಡಿ, ಅನ್ಯಾಯವೆಸಗುವ ಪ್ರಯತ್ನ ನಿಲ್ಲಿಸಬೇಕೆಂದು ಬಸವರಾಜ ಹೊರಟ್ಟಿ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.