ಮಾನವೀಯತೆಯಿಂದ ವರ್ತಿಸಲು ಅಧಿಕಾರಿಗಳಿ ಸಚಿವ ರೋಷನ್ ಬೇಗ್ ಸೂಚನೆ
ಚಿಕ್ಕಮಗಳೂರು, ಡಿ.21:ಒತ್ತುವರಿ ಜಮೀನನ್ನು ತೆರವುಗೊಳಿಸುವ ಸಂಬಂಧ ಕಾಫಿ ಅಡಿಕೆ ಮುಂತಾದ ಫಸಲು ಭರಿತ ತೋಟಗಳನ್ನು ಕಡಿದು ನಾಶ ಮಾಡಿರುವ ಅರಣ್ಯ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಗುರುವಾರ ಇಲ್ಲಿನ ಜಿ.ಪಂ. ಕೆಡಿಪಿ ಸಭೆಯಲ್ಲಿ ತೀವ್ರ ಅಸಮಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮಾನವೀಯತೆಯಿಂದ ವರ್ತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಸಚಿವ ರೋಷನ್ಬೇಗ್ ಅಧ್ಯಕ್ಷತೆಯಲ್ಲಿ ನಡೆದ ಕೆ.ಡಿ.ಪಿ. ಸಭೆಯಲ್ಲಿ ಅರಣ್ಯ ಇಲಾಖೆಯ ಕಾರ್ಯವೈಖರಿ ಬಗ್ಗೆ ಆಕ್ರೋಶ ಹಾಗೂ ಅಸಮಧಾನಕ್ಕೆ ಕಾರಣವಾಯಿತು. ಎಂಎಲ್ಸಿ ಡಾ. ಮೋಟಮ್ಮ ಹಾಗೂ ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ಕಾಡು ಪ್ರಾಣಿಗಳು ರೈತರ ಬೆಳೆ ನಾಶ ಮಾಡುತ್ತಿದ್ದು, ಅರಣ್ಯ ಇಲಾಖೆ ಯವರು ಪ್ರಾಣಿಗಳ ರಕ್ಷಣೆ ಮಾಡುತ್ತಿದ್ದಾರೆ ವಿನಹ ಜನರ ರಕ್ಷಣೆಗೆ ಏನು ಮಾಡುತ್ತಿಲ್ಲ ಎಂದರು.
ರೈತರೊಬ್ಬರ ಒತ್ತುವರಿ ತೆರವುಗೊಳಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಸಂಜೆ ಹೊತ್ತು ಕತ್ತಲಲ್ಲಿ ಹೋಗಿ ಕಾರ್ಯಾಚರಣೆ ಮಾಡಿದ್ದಾರೆ. ಅಮಾನವೀಯವಾಗಿ ನಡೆದುಕೊಂಡಿದ್ದಾರೆಂದು ಜಿಪಂ ಸದಸ್ಯ ಶಾಮಣ್ಣ ಹಾಗೂ ಮೋಟಮ್ಮ ತಿಳಿಸಿದಾಗಿ ಇದು ಖಂಡನೀಯ ಎಂದು ಸಚಿವರು ತಿಳಿಸಿದರು.
ಮಸಗಲಿಯ 102.35 ಎಕರೆ ಜಾಗದಲ್ಲಿರುವವರಿಗೆ ಯಾವುದೆ ಸಮಸ್ಯೆ ಇಲ್ಲ ಹಾಗೂ ಇವರು ಗಳನ್ನು ತೆರವು ಗೊಳಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಶ್ರೀರಂಗಯ್ಯ ತಿಳಿಸಿ, ಸುಪ್ರಿಂಕೋರ್ಟ್ ಸೂಚನೆಯಂತೆ ಅನಿವಾರ್ಯವಾಗಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಬಗರ್ಹುಕುಂ ಫಾರಂ 50-53ರಲ್ಲಿ 1998-99 ರಲ್ಲಿ ಅರ್ಜಿ ಸಲ್ಲಿಸಿದವರಿಗೆ ಸಾಗುವಳಿ ಚೀಟಿ ನೀಡದೇ ಅಲ್ಲಿನ ತಹಶೀಲ್ದಾರ್ ಮತ್ತು ಸರ್ವೆ ಅಧಿಕಾರಿಗಳು ಬೇಡದ ಕಾರಣಗಳನ್ನು ನೀಡುತ್ತಿದ್ದಾರೆಂದು ಶೃಂಗೇರಿ ಶಾಸಕ ಡಿ.ಎನ್.ಜೀವರಾಜ್ ನೇರ ಆರೋಪ ಮಾಡಿದರು. ಬಲ, ಸಾಮಥ್ರ್ಯ ಇರುವವರಿಗೆ ಯಾವುದೇ ಸಮಸ್ಯೆ ಇಲ್ಲದೇ ಸಾಗುವಳಿ ಚೀಟಿನೀಡಲಾಗುತ್ತಿದೆ. ಆದರೆ ದಲಿತರು ಹಾಗೂ ಬಡವರಿಗೆ ಸಾಗುವಳಿ ಚೀಟಿ ನೀಡಲು ಸಮಿತಿ ಒಪ್ಪಿಗೆ ನೀಡಿದರೂ ತಹಶೀಲ್ದಾರ್ ಹಾಗೂ ಸರ್ವೆ ಅಧಿಕಾರಿಗಳು ಬೇಡದ ಷರಾ ಬರೆದು ಸಾಗುವಳಿ ಚೀಟಿ ನೀಡುವುದನ್ನು ತಪ್ಪಿಸುತ್ತಿದ್ದಾರೆಂದು ಆರೋಪಿಸಿದರು.
2040 ಅರ್ಜಿಗಳಲ್ಲಿ ಕೇವಲ 800 ಅರ್ಜಿಗಳು ಮಾತ್ರ ವಿಲೇ ವಾರಿಯಾಗಿದೆ. ಅರ್ಜಿಗಳ ಕಡತ ದಲ್ಲಿಸರ್ವೆಅಧಿಕಾರಿಗಳು ಸಂಬಂಧಿಸಿದ ಭೂಮಿ ಅರಣ್ಯ ಇಲಾಖೆಗೆ ಸೇರಿದೆ ಎಂದು ಷರಾ ಬರೆಯುತ್ತಿದ್ದಾರೆ. ಫಾರಂ 50-53 ಅರ್ಜಿಗಳು ಅರಣ್ಯ ಇಲಾಖೆಗೆ ಕಳುಹಿಸುವುದೂ ಸ್ಮಶಾನಕ್ಕೆ ಕಳುಹಿಸುವುದೂ ಒಂದೇ. ಈ ರೀತಿ ಕಡತಗಳಲ್ಲಿ ಅರಣ್ಯ ಇಲಾಖೆಗೆ ಸೇರಿದೆ ಎಂದು ಬರೆಯಲು ಸರ್ವೆ ಅಧಿಕಾರಿಗಳಿಗೆ ಅಧಿಕಾರ ಇದೆಯೇ ಎಂದು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರು.
ಇಲ್ಲಿನ ಅಧಿಕಾರಿಗಳು ಯಾವ ವ್ಯಾಪಾರಿ ಮನೋ ಭಾವದಿಂದ ಈ ರೀತಿ ಮಾಡುತ್ತಿದ್ದಾರೆ. ಕಡತದಲ್ಲಿ ಹಣ ಕೊಡುವವರಿಗೆ ಒಂದು ರೀತಿ ಹಾಗೂ ಕೊಡದವರಿಗೆ ಇನ್ನೊಂದು ರೀತಿ ಬರೆಯುತ್ತಾರೆ. ಇವರುಗಳು ದುಡ್ಡಿಗೆ ಹಾಗೂ ವ್ಯಾಪಾರಕ್ಕೆ ಇದ್ದಾರೆ. ಶಾಸಕರ ಮಾತಿಗೆ ಬೆಲೆ ಇಲ್ಲ ಎಂದರು.
ಜಿಲ್ಲಾಧಿಕಾರಿ ಶ್ರೀರಂಗಯ್ಯ ಮಾತನಾಡಿ, ಸರ್ವೆ ಸ್ಕೆಚ್ ಮಾಡುವುದನ್ನು ಬಿಟ್ಟು ಅರಣ್ಯ ಇಲಾಖೆಗೆ ಸೇರಿದೆ ಎಂದೆಲ್ಲಾ ಬರೆಯಲು ಸರ್ವೆ ಅಧಿಕಾರಿಗಳಿಗೆ ಅಧಿಕಾರವಿಲ್ಲ. ಸಂಬಂಧಿಸಿದ ಸರ್ವೆಯರ್ಗೆ ನೋಟೀಸ್ ನೀಡಿಕ್ರಮತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಕೊಪ್ಪ ತಹಶೀಲ್ದಾರ್ರವರಿಗೆ ಸೂಚನೆ ನೀಡಿ, ಸ್ಥಿರೀಕರಣವಾದ ಅರ್ಜಿಗಳ ಮೇಲೆ ಸಾಗುವಳಿ ಚೀಟಿ ನೀಡಬೇಕು ಎಂದರು.
ಮೂಡಿಗೆರೆ ಶಾಸಕ ಬಿ.ಬಿ.ನಿಂಗಯ್ಯ ಹಾಗೂ ಮೋಟಮ್ಮ ಮಾತನಾಡಿ, ಮೂಡಿಗೆರೆ ತಾಲ್ಲೂಕಿನಲ್ಲಿ ಸುಮಾರು 2000 ಅರ್ಜಿಗಳು ಇದ್ದು ಕಂದಾಯ ಹಾಗೂ ಸರ್ವೆ ಇಲಾಖೆಗಳ ನಡುವೆ ಹೊಂದಾಣಿಕೆ ಇಲ್ಲದಿರುವುದರಿಂದ ಸಮಸ್ಯೆ ಗಳು ಉದ್ಭವವಾಗುತ್ತಿದೆ. ಅದಕ್ಕಾಗಿ ಕಂದಾಯ ಹಾಗೂ ಸರ್ವೆ ಅಧಿಕಾರಿ ಗಳ ವಿಶೇಷ ಸಭೆ ಕರೆಯಲು ಮುಂದಾಗಬೇಕೆಂದು ಮನವಿ ಮಾಡಿದರು.
ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಬಣಕಲ್ ಶಾಮಣ್ಣ ಮಾತನಾಡಿ,ಮೂಡಿಗೆರೆಯಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ತೋಟಗಾರಿಕಾ ಕಾಲೇಜಿನವರು ಜಾಗ ಬಿಟ್ಟುಕೊಡುವ ವಿಚಾರದಲ್ಲಿ ಕೂಡಲೇ ಕ್ರಮ ತೆಗೆದುಕೊಳ್ಳಲು ಮನವಿ ಮಾಡಿದಾಗ ಜಿಲ್ಲಾಧಿಕಾರಿ ಶ್ರೀರಂಗಯ್ಯ ಪ್ರತಿಕ್ರಿಯಿಸಿ ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಕಾಲೇಜು ಡೀನ್ನೊಂದಿಗೂ ಮಾತನಾಡಿದ್ದೇನೆ. ಸರ್ವೆ ಮಾಡಿಸಲಾಗಿದೆ. ಕಾಲೇಜು ವತಿಯಿಂದ ಹೆಚ್ಚುವರಿ 9 ಎಕರೆ ಜಾಗ ಒತ್ತುವರಿಯಾಗಿದೆ. ಅಂಬೇಡ್ಕರ್ ಭವನಕ್ಕೆ ಕೇಳಲಾಗುತ್ತಿರುವ ಜಾಗ ಕಾಲೇಜಿಗೆ ಮಂಜೂರಾಗಿರುವುದರಿಂದ ಆ ಭಾಗದ ಜನಪ್ರತಿನಿಧಿಗಳು ಮತ್ತಿತರೆ ಸಭೆ ಕರೆದು ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಲಾಗುವುದೆಂದರು.
ಶಾಸಕ ಜೀವರಾಜ್ ಮಾತನಾಡಿ, ಹವಾಮಾನ ಆಧಾರಿತ ಬೆಳೆ ವಿಮೆಯಡಿ ಜಿಲ್ಲೆಯ ರೈತರಿಗೆ ತಪ್ಪು ಮಾಹಿತಿನೀೀಡಲಾಗಿದೆ. ಬೆಳೆ ವಿಮೆ ಮಾಡಿಸಿದವರಿಗೆ ಅನುಕೂಲವಾಗಿದೆ. 6 ಕೋಟಿ ರೂ ಪ್ರೀಮಿಯಂ ಪಾವತಿಸಿದ್ದು 49 ಕೋಟಿ ಪರಿಹಾರ ಮಂಜೂರಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಎ.ಪಿ.ಎಲ್ ಪಡಿತರ ಚೀಟಿ ಲಭಿಸಲು ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ಜಿಲ್ಲೆಯ 30624 ಪಡಿತರ ಚೀಟಿ ಅರ್ಜಿ ದಾರರಲ್ಲಿ 26906 ಅರ್ಜಿದಾ ರರಿಗೆ ಕಾರ್ಡ್ಗಳು ಮನೆ ಬಾಗಿ ಲಿಗೆ
ತಲುಪಲಿದೆ ಎಂದರು.
ಕೊಟ್ಟಿಗೆಹಾರದಲ್ಲಿ ಮಸೀದಿ ಪಕ್ಕದಲ್ಲೇ ಮದ್ಯದ ಅಂಗಡಿ ತೆರೆಯಲಾಗಿದೆ ಎಂದು ದೂರಿದಾಗ ಇದರ ಬಗ್ಗೆ ಪರಿಶೀಲಿಸಲು ಸಚಿವರು ಅಬಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಹಾಗೂ ಅನುದಾನದ ಬಗ್ಗೆ ಬೆಂಗಳೂರಿನಲ್ಲಿ ಜನಪ್ರತಿ ನಿಧಿಗಳು ಮತ್ತು ಅಧಿಕಾರಿಗಳ ಸಭೆ ನಡೆಸಿ
ತೀರ್ಮಾನಿಸಲಾಗುವುದು ಎಂದು ಸಚಿವರು ಸಭೆಗೆ ತಿಳಿಸಿ ಡಿ.29 ಅಥವಾ 30 ರಂದು ಸಭೆ ನಡೆಸಲು ದಿನಾಂಕ ನಿಗದಿಗೊಳಿಸಲು ಮುಂದಾದರು.
ಸಭೆಯಲ್ಲಿ ಎಸ್ಪಿ ಕೆ.ಅಣ್ಣಾಮಲೈ, ಜಿಪಂ ಉಪಾಧ್ಯಕ್ಷ ರಾಮಸ್ವಾಮಿ, ಜಿಪಂ ಸಿಇಓ ಮತ್ತಿತರರಿದ್ದರು.