ಮೈಸೂರು: ಮಾಗಿ ಉತ್ಸವಕ್ಕೆ ಉತ್ತಮ ಸ್ಪಂದನೆ; ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಹರಿದು ಬರುತ್ತಿರುವ ಜನಸಾಗರ

Update: 2017-12-25 16:41 GMT

ಮೈಸೂರು, ಡಿ. 25: ಪ್ರವಾಸಿಗರನ್ನು ತನ್ನತ್ತ ಇನ್ನಷ್ಟು ಆಕರ್ಷಿಸಲು ಜಿಲ್ಲಾಡಳಿ ಕೈಗೊಂಡಿರುವ ಮಾಗಿ ಉತ್ಸವಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಅರಮನೆ ಆವರಣದಲ್ಲಿ ಆಯೋಜಿಸಿರುವ ಫಲಪುಷ್ಟ ಪ್ರದರ್ಶನವನ್ನು ಕಣ್‍ತುಂಬಿಕೊಳ್ಳಲು ಜನಸಾಗರವೇ ಹರಿದು ಬರುತ್ತಿದ್ದು, ಕ್ರಿಸ್‍ಮಸ್ ಹಬ್ಬ ಮತ್ತಷ್ಟು ಮೆರುಗು ನೀಡಿದೆ.

ವಿವಿಧ ಬಣ್ಣಗಳ ಹೂವುಗಳಿಂದ ಅಲಂಕರಿಸಲಾಗಿರುವ ಈ ಮನಮೋಹಕ ದೃಶ್ಯವನ್ನು ಆನಂದಿಸಲು ಬೇರೆ, ಬೇರೆ ಜಿಲ್ಲೆ, ರಾಜ್ಯಗಳು ಮತ್ತು ಸ್ಥಳೀಯರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಬಣ್ಣ ಬಣ್ಣದ ಹೂಗಳ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳುವ ಮೂಲಕ ತಮ್ಮ ಮನದಾಸೆಯನ್ನು ಈಡೇರಿಸಿಕೊಳ್ಳುತ್ತಿದ್ದಾರೆ.

ಹಳೆಯ ಮರದ ಮಾದರಿಯಿಂದ ಮಾಡಲಾಗಿರುವ  ಮೈಸೂರು ಅರಮನೆ ಪ್ರಮುಖ ಆಕರ್ಷಣೆಯಾಗಿದೆ. ಅರಮನೆಯ ಮುಂದೆ ನಿಂತು ಫೋಟೋ ಕ್ಲಿಕ್ಕಿಸುವವರ ಸಂಖ್ಯೆಯಿಂದ ಜನರಿಗೆ ಸ್ವಲ್ಪ ಕಿರಿಕಿರಿ ಉಂಟಾದರೂ ಜನ ಸಂತೋಷದಿಂದಲೇ ಇಲ್ಲಿ ಮೂಡಿ ಬಂದಿರುವ ಅನೇಕ ಬಗೆಯ ಅಲಂಕೃತ ದೃಶ್ಯಾವಳಿಗಳಿಗೆ ಮನಸೋತಿದ್ದಾರೆ.

ಸುಮಾರು ಎರಡು ಎಕರೆ ವಿಶಾಲ ಪ್ರದೇಶದಲ್ಲಿ ಕೆಂಪು ಮತ್ತು ಬಿಳಿಗುಲಾಬಿ ಹೂವುಗಳಿಂದ ಆಯೋಜನೆಗೊಂಡಿರುವ ಆನೆಯ ಸಾರೋಟು, ಕಂಬದ ಮಾದರಿಯ ಹಳೆಯ ಅರಮನೆ, ಚಿನ್ನದ ಸಿಂಹಾಸನ, ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಮಾದರಿ, ಮೂರು ಗೋಪುರಗಳು, ಸಾರ್ವಜನಿಕರ ಗೋಪುರದ ಮುಂಭಾಗ ಎರಡು ಬಾತುಕೋಳಿಗಳು ಸ್ವಾಗತ ಕೋರುವ ಮಾದರಿ, ವಿಐಪಿ ಗೋಪುರ, ಮತ್ತೊಂದು ನಿರ್ಗಮನದ ಗೋಪುರಗಳು ಅದ್ಭುತವಾಗಿ ಮೂಡಿಬಂದಿದೆ.

ಫಲಪುಷ್ಪ ಪ್ರದರ್ಶನ ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಮಕ್ಳ ಆಕರ್ಷಣೆಗಾಗಿ ಹೂವಿನಿಂದ ನಿರ್ಮಿಸಲಾಗಿರುವ ಕಾಳಿಂಗ ಸರ್ಪ, ಆಮೆ, ನಕ್ಷತ್ರ ಮೀನು, ಆಕ್ಟೋಪಸ್, ಜೈಹನುಮಾನ್, 18 ಅಡಿ ಎತ್ತರದ ಸುಖೋಯ್ ಏರಕ್ರಾಫ್ಟ್, ಛೋಟಾ ಭೀಮ್ ಮತ್ತು ಛೋಟಾ ಕೃಷ್ಣ ಆಕೃತಿಗಳು ಮನರಂಜನೆ ನೀಡುತ್ತಿವೆ.

ವರಹಾಸ್ವಾಮಿ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಸುಮಾರು ಹತ್ತು ಅಡಿ ಎತ್ತರ ಮತ್ತು ಇನ್ನೂರ ಎಂಬತೈದು ಅಡಿ ಉದ್ದದ ವರ್ಟಿಕಲ್ ಗಾರ್ಡನ್ ಅನ್ನು ಆಕರ್ಷಿತವಾಗಿ ವ್ಯವಸ್ಥೆಮಾಡಲಾಗಿದೆ.

ಜನರಗಿ ಮತ್ತಷ್ಟು ಮುದ ನೀಡಲು ಎರಡು ಬಾರಿ ಹೂವುಗಳನ್ನು ಅಲಂಕರಿಸಲಾಗುತ್ತಿದ್ದು, ಒಂದು ಬಾರಿಗೆ ಮೂರು ವರೆ ಲಕ್ಷ ಹೂಗಳಿಂದ ಅಲಂಕರಿಸಲಾಗುತ್ತಿದ್ದು, ಮತ್ತೊಂದು ಬಾರಿ ಅಲಂಕರಿಸಲಾಗುವುದು. ಒಟ್ಟಾರೆ ಎಲ್ಲಾ ಮಾದರಿಯ ಆಕೃತಿಗಳನ್ನು 7 ಲಕ್ಷ ಹೂಗಳಿಂದ ಅಲಂಕರಿಸಲಾಗುವುದು ಒಟ್ಟು 85 ಜನರನ್ನು ಈ ಕೆಲಸಕ್ಕೆ ಬಳಸಿಕೊಳ್ಳಲಾಗಿದೆ ಎಂದು ಇದರ ಹಿಂದಿನ ರೂವಾರಿ ಉಮಾಶಂಕರ್ ತಿಳಿಸಿದರು.

ನಗರದ ಸಿದ್ಧಾರ್ಥ ನಗರದಲ್ಲಿ ವಾಸವಿರುವ ಇವರು, ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲಿಯೂ ಆಯೋಜಿಸುವ ಫಲಪುಷ್ಟ ಪ್ರದರ್ಶನದಲ್ಲಿ ಪಾಲ್ಗೊಂಡು ಅಲಂಕಾರ ಮಾಡುತ್ತಾರೆ. ಮೈಸೂರು ದಸಾರದಲ್ಲಿ ಪ್ರತಿಬಾರಿಯೂ ಕುಪ್ಪಣ್ಣ ಪಾರ್ಕ್‍ನಲ್ಲಿ ವಿವಿಧ ಹೂವುಗಳಿಂದ ಅಲಂಕಾರಿಕ ಮಾದರಿಗಳನ್ನು ನಿರ್ಮಿಸುತ್ತೇನೆ ಎಂದರು. ಡಿ.23 ರಿಂದ ಆಯೋಜನೆಗೊಂಡಿರುವ ಈ ಫಲಪುಷ್ಪ ಪ್ರದರ್ಶನ ಜ.1 ರವರೆಗೂ ಇರಲಿದೆ. ಡಿ.27 ರಂದು ಮತ್ತೊಮ್ಮೆ ಹೊಸ ಹೂವುಗಳಿಂದ ಅಲಂಕರಿಸಿ ಮೆರುಗು ನೀಡಲಾಗುವುದು ಎಂದು ಹೇಳಿದರು.

ಇದರ ಸಂಪೂರ್ಣ ಉಸ್ತುವಾರಿ ವಹಿಸಿಕೊಂಡು ಯಾವುದೇ ಹೂಗಳನ್ನು ಜನರು ಕೀಳದಂತೆ ನೋಡಿಕೊಂಡು ಬಂದವರಿಗೆಲ್ಲ ಎಚ್ಚರಿಕೆಯನ್ನು ನೀಡುತ್ತ ತೋಟಗಾರಿಕಾ ಇಲಾಖೆ ಸಹಾಯಕ ಅಧಿಕಾರಿ ರಾಮಕೃಷ್ಣಪ್ಪ ಶ್ರಮಿಸುತ್ತಿದ್ದಾರೆ. ಪ್ರತಿ ದಿನ ಪ್ರವಾಸಿಗರೇ 20 ಸಾವಿರ ಮಂದಿ ಆಗಮಿಸುತ್ತಾರೆ. ಸ್ಥಳೀಯರು ಪ್ರವಾಸಿಗರು ಸೇರಿದಂತೆ ಪ್ರತಿ ದಿನ 40 ರಿಂದ 50 ಸಾವಿರ ಜನರು ವೀಕ್ಷಿಸುತ್ತಿದ್ದಾರೆ ಎಂದು ತಿಳಿಸಿದರು.

ತುಂಬಾ ಚೆನ್ನಾಗಿ ಹೂಗಳಿಂದ ಅಲಂಕರಿಸಲಾಗಿದೆ. ಕಂಬದ ಮಾದರಿಯಹಳೆ ಅರಮನೆ ಅದ್ಭುತವಾಗಿದೆ. ಹಿಂದೆ ಅರಮನೆ ಹೇಗಿತ್ತು ಎಂಬುದನ್ನು ಬಿಂಬಿಸುತ್ತಿದೆ. ಇಂತಹ ಉತ್ಸವಗಳಿಂದ ಸಾಂಸ್ಕøತಿಕ ನಗರಿ ಮತ್ತಷ್ಟು ಜನಪ್ರಿಯಗೊಳ್ಳಲಿದೆ.

ಮಂಜುನಾಥ್, ಹೆಬ್ಬಾಳು ನಿವಾಸಿ.

ಈ ಹೂವುಗಳಿಂದ ಅಲಕೃಂತಗೊಂಡ ಮಾದರಿಗಳು ಸಂತೋಷವನ್ನುಂಟು ಮಾಡಿದವು. ಇವುಳನ್ನು ವೀಕ್ಷಿಸಿದ ನನಗೆ ಉಲ್ಲಾಸವಾಯಿತು. ಹಳೆಯ ಅರಮನೆ ಮಾದರಿ ಮೆಚ್ಚುಗೆಗೆ ಪಾತ್ರವಾಯಿತು. ಎಲ್ಲಾ ಮಾದರಿಗಳು ಅಧ್ಬುತವಾಗಿ ಮೂಡಿ ಬಂದಿವೆ.

ಲೀಲಾವತಿ ಮತ್ತು ಸೌಮ್ಯ, ಸ್ಥಳೀಯ ನಿವಾಸಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News