ಚಿಕ್ಕಬಳ್ಳಾಪುರ : ಕ್ರಿಸ್ಮಸ್ ಆಚರಣೆ
ಚಿಕ್ಕಬಳ್ಳಾಪುರ,ಡಿ.25:ನಗರದಲ್ಲಿ ಕ್ರಿಸ್ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಶ್ರದ್ಧಾಭಕ್ತಿ ಹಾಗೂ ಸಂಭ್ರಮ ಸಡಗರದಿಂದ ಆಚರಿಸಿದರು.
ನಗರದ ಪ್ರಮುಖ ದೇವಾಲಯಗಳಾದ ಸಿಎಸ್ಐ ಕ್ರೈಸ್ಟ್ ಚರ್ಚ್, ಸೆಂಟ್ ಕ್ಸೇವಿಯರ್ ಚರ್ಚ್ ಸೇರಿದಂತೆ ಇತರೆ ದೇವಾಲಗಳು ವಿಶೇಷವಾಗಿ ಅಲಂಕೃತಗೊಂಡಿದ್ದವು. ಬೆಳಗ್ಗೆಯಿಂದಲೇ ಚರ್ಚ್ಗಳಿಗೆ ಭೇಟಿ ನೀಡಿ ಕ್ರೈಸ್ತ ಬಾಂಧವರು, ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಕ್ರಿಸ್ತನ ಸಂದೇಶಗಳನ್ನು ಆಲಿಸಿದರು.
ಕ್ರಿಸ್ಮಸ್ ಆಚರಣೆಯ ಅಂಗವಾಗಿ ಎಲ್ಲ ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನಾ ಕೂಟಗಳನ್ನು ಏರ್ಪಡಿಸಲಾಗಿತ್ತು. ಬೆಳಗ್ಗೆಯಿಂದ ಆರಂಭವಾದ ಕ್ರಿಸ್ಮಸ್ ಆಚರಣೆಯಲ್ಲಿ ನಗರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಿಂದ ಆಗಮಿಸಿದ ಕ್ರೈಸ್ತ ಬಾಂಧವರು, ಸ್ನೇಹಿತರು ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು.
ಹಬ್ಬದ ಹಿನ್ನೆಲೆಯಲ್ಲಿ ಉಡುಗೊರೆ, ಸಿಹಿ, ಬಗೆ ಬಗೆಗೆಯ ಆಹಾರ ಖಾದ್ಯಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬದ ವಾತಾವರಣವನ್ನು ಮತ್ತಷ್ಟು ಸಂತಸದಿಂದ ಕಳೆದರು. ಅಲ್ಲದೆ ಜಾತಿ, ಮತ ಬೇದಭಾವವಿಲ್ಲದೇ ಅಪಾರ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಾಮರಸ್ಯ ಭಾವೈಕ್ಯತೆಯನ್ನು ಮೆರೆದರು.ಗೋದಲಿ ನಿರ್ಮಾಣ, ಕ್ರೀಸ್ಮಸ್ ಟ್ರೀ ಸೇರಿದಂತೆ ಬಗೆ ಬಗೆ ಅಲಂಕಾರಗಳು ಹಬ್ಬಕ್ಕೆ ಮತ್ತಷ್ಟು ಮೆರಗು ನೀಡಿತು.
ಸಂಸದ ಎಂ.ವೀರಪ್ಪ ಮೊಯಿಲಿ, ಶಾಸಕ ಡಾ.ಕೆ. ಸುಧಾಕರ್, ಮಾಜಿ ಶಾಸಕ. ಎಸ್.ಎಂ. ಮುನಿಯಪ್ಪ, ಕೆ.ವಿ. ಮತ್ತು ಪಂಚಗಿರಿ ದತ್ತಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ವಿ. ನವೀನ್ ಕಿರಣ್, ಜಿಪಂ ಸದಸ್ಯ ಕೆ.ಸಿ. ರಾಜಾಕಾಂತ್ ಸೇರಿದಂತೆ ಮತ್ತಿತರರು ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಿ ಕ್ರಿಸ್ಮಸ್ ಹಬ್ಬದ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಸಿಎಸ್ಐ ಚರ್ಚ್ನ ಹೆನ್ರಿ ಪ್ರಸನ್ನಕುಮಾರ್, ಎಸ್. ವಿನ್ಸ್ಟನ್ಕೆನಡಿ, ಕಿರಣ್ ವಿಕ್ಟರ್, ವೀಣಾದತ್, ಶಸಿಕಲಾ ಸೈಮನ್ ಸೇರಿದಂತೆ ಮತ್ತಿತರರು ಇದ್ದರು.
ಮನುಷ್ಯ ಸ್ವಾರ್ಥಿಯಾಗಿ ದ್ವೇಷ, ಅಸೂಯೆಗಳ ನಡುವೆ ಮಾನವೀಯತೆ, ಸಂಸ್ಕೃತಿ, ಸಂಪ್ರದಾಯಗಳನ್ನು ಮರೆತು ಇಡೀ ಸಮಾಜವನ್ನೇ ಕೌರ್ಯದತ್ತ ಕೊಂಡೊಯ್ಯುವ ಸಂದರ್ಭದಲ್ಲಿ ಭೂಮಿಯಲ್ಲಿ ಜನ್ಮ ತಾಳಿ ಮನುಷ್ಯನಲ್ಲಿ ಪ್ರೀತಿ ಹಾಗೂ ಸಮಾಜದಲ್ಲಿ ಶಾಂತಿಯನ್ನು ನೆಲೆಸುವಂತೆ ಮಾಡಿದ ಏಸು ಕ್ರಿಸ್ತನ ಸಂದೇಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕಿದೆ.
- ಡಾ.ಕೆ. ಸುಧಾಕರ್, ಶಾಸಕ, ಚಿಕ್ಕಬಳ್ಳಾಪುರ.
ಕ್ರಿಸ್ತನು ಸಾರಿದ ಶಾಂತಿ, ಸಹಬಾಳ್ವೆ ಸೇರಿದಂತೆ ಪರೋಪಕಾರಿ ಗುಣಗಳು ಪ್ರಸ್ತುತದ ದಿನಗಳಿಗೆ ಅಗತ್ಯವಾಗಿದೆ. ಅಲ್ಲದೆ ಏಸು ಕ್ರಿಸ್ತನು ಎರಡು ರೊಟ್ಟಿ ಹಾಗೂ ಐದು ಮೀನುಗಳನ್ನು ಐದು ಸಾವಿರ ಮಂದಿಗೆ ಹಂಚಿದ ವೃತ್ತಾಂತವು ಸಾರುವಂತೆ ಉಳ್ಳವರು ಬಡವರಿಗೆ ಸಹಾಯ ಮಾಡುವ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕಿದೆ.
- ಕೆ.ವಿ. ನವೀನ್ ಕಿರಣ್, ಕೆ.ವಿ. ಮತ್ತು ಪಂಚಗಿರಿ ದತ್ತಿ ಅಧ್ಯಕ್ಷ, ಚಿಕ್ಕಬಳ್ಳಾಪುರ.