ಕ್ಷೇತ್ರದ ಅಭಿವೃದ್ಧಿಯ ಶ್ರೇಯಸ್ಸು ಪತ್ರಕರ್ತರಿಗೆ ಸಲ್ಲಲಿ: ಶಾಸಕ ಮಾಂಕಾಳ್ ವೈದ್ಯ
► ಕ್ಷೇತ್ರ ಅಭಿವೃದ್ಧಿಗೆ 1,500 ಕೋಟಿ ರೂ. ಅನುದಾನ
► ಪತ್ರಕರ್ತರ ಕಾರ್ಯ ಶ್ಲಾಘನೀಯ
► ತನ್ನ ಕ್ಷೇತ್ರ ದೇಶಕ್ಕೆ ವಿದ್ಯುತ್ ನೀಡಿದೆ
ಭಟ್ಕಳ, ಡಿ.25: ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಬಿಡುಗಡೆಗೊಂಡಿರುವ 1,500 ಕೋಟಿ ರೂ. ಅನುದಾನದ ಶ್ರೇಯಸ್ಸು ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರಿಗೆ ಸಲ್ಲುತ್ತದೆ ಎಂದು ಶಾಸಕ ಮಾಂಕಾಳ್ ವೈದ್ಯ ಹೇಳಿದ್ದಾರೆ.
ಇಲ್ಲಿನ ಸಾಗರ ರಸ್ತೆಯ ಶ್ರೀಗುರುಸುಧೀಂದ್ರ ಕಾಲೇಜು ಮೃದಾನದಲ್ಲಿ ಭಟ್ಕಳ ತಾಲೂಕು ಕಾರ್ಯನಿರತ ಸಂಘದ ಬೆಳ್ಳಿಹಬ್ಬ ಸಂಭ್ರಮದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಬಡರಪರ ಕಾಳಜಿ ಹೊಂದಿದ ಪತ್ರಕರ್ತರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಲು ಪ್ರಯತ್ನಿಸಿದ್ದಾರೆ. ಇಲ್ಲಿನ ಪತ್ರಕರ್ತರ ಕಾರ್ಯ ಶ್ಲಾಘನೀಯವಾಗಿದೆ. ತಾನು ಆರಂಭದಿಂದಲೂ ಕ್ಷೇತ್ರದ ಪ್ರಗತಿ ಕುರಿತು ಚಿಂತಿತನಾಗಿದ್ದೆ. ಪತ್ರಕರ್ತರು ತನ್ನನ್ನು ಎಚ್ಚರಿಸುವ ಕೆಲಸ ಮಾಡಿದರು. ಅದಕ್ಕಾಗಿ ಕ್ಷೇತ್ರ ಅಭಿವೃದ್ಧಿಗಾಗಿ 1,500 ಕೋ. ರೂ ಅನುದಾನ ಬಿಡುಗಡೆಗೊಂಡಿದೆ ಎಂದರು.
ಭಟ್ಕಳ ಕಾರ್ಯನಿರತ ಪತ್ರಕರ್ತರ ಸದಸ್ಯರು ಸಮಾಜಮುಖಿ ಚಿಂತನೆಯುಳ್ಳವರು ಎಂದರು. ತಾಲೂಕಿನ 7ಸಾವಿರ ಮನೆಗೆ ವಿದ್ಯುತ್ ನೀಡುವಲ್ಲಿ ತಾನು ಸಫಲವಾಗಿದ್ದೇನೆ. ತನ್ನ ಕ್ಷೇತ್ರ ಇಡೀ ದೇಶಕ್ಕೆ ವಿದ್ಯುತ್ ನೀಡಿದೆ. ತನ್ನಿಂದ ಯಾವ ರೀತಿಯ ಸಹಾಯ, ಸಹಕಾರ ಮಾಡಲು ಸಾಧ್ಯವಾಯಿತೋ ಅದೆಲ್ಲವನ್ನೂ ಮಾಡಿದ್ದೇನೆ. ಇದಕ್ಕೆಲ್ಲ ಪತ್ರಕರ್ತರೇ ಕಾರಣೀಕರ್ತರು. ತಾನು ಕಷ್ಟದಿಂದ ಬಂದವನು ಸಮಾಜದ ಕಷ್ಟನಷ್ಟಗಳನ್ನು ಅನುಭವಿಸಿದ್ದೇನೆ. ಇದಕ್ಕೆ ಪತ್ರಕರ್ತರು ತನ್ನನ್ನು ಎಚ್ಚರಿಸುವ ಕೆಲಸ ಮಾಡಿದ್ದು ಅದನ್ನು ಕಾರ್ಯರೂಪಕ್ಕೆ ತಂದಿದ್ದೇನೆ ಎಂದರು.
ಎಲ್ಲ ರಾಜಕಾರಣಿಕಾರಣಿಗಳು ಕೆಟ್ಟವರಲ್ಲ. ಹಾಗೆ ಎಲ್ಲ ಪತ್ರಕರ್ತರೂ ಕೆಟ್ಟವರಲ್ಲ. ಒಳ್ಳೆಯವರು ಸಮಾಜದಲ್ಲಿ ಬಹಳಷ್ಟು ಮಂದಿ ಇದ್ದಾರೆ. ಆ ಒಳ್ಳೆಯವರಿಂದ ಸಮಾಜಕ್ಕೆ ಒಳಿತಾಗುತ್ತದೆ ಎಂದರು. ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯಾಧ್ಯಕ್ಷ ಎನ್. ರಾಜು ಮಾತನಾಡಿದರು. ಸನ್ಮಾನಿತಗೊಂಡ ಸಾಧಕರಾದ ವಿವೇಕ ಮಹಾಲೆ, ಆಫ್ತಾಬ್ ಹುಸೈನ್ ಕೋಲಾ, ಶ್ವೇತಾ ಆಚಾರ್ಯ ಮಾತನಾಡಿದರು.
ಬೆಳ್ಳಿಹಬ್ಬ ಸಂಭ್ರಮದ ಗೌರವಾಧ್ಯಕ್ಷ ಹಾಗೂ ಶಾಸಕ ಮಾಂಕಾಳ್ ವೈದ್ಯ, ಜಿಪಂ ಅಧ್ಯಕ್ಷೆ ಜಯಶ್ರಿ ಮೊಗೇರ್, ಉದ್ಯಮಿ ಶಿವಾನಿ ಶಾಂತರಾಮ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ, ಸಂಘದ ಮಾಜಿ ಅಧ್ಯಕ್ಷರಾದ ಸತೀಶ್ ನಾಯ್ಕ, ಕರಿಯಪ್ಪನಾಯ್ಕ, ರಾಘವೇಂದ್ರ ಹೆಬ್ಬಾರ್ ಹಾಗೂ ಸ್ಥಾಪಕ ಅಧ್ಯಕ್ಷ ರಾಧಾಕೃಷ್ಣ ಭಟ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದಿಂದ ಪತ್ರಿಕಾ ವಿತರಕರಿಗೆ ಸೈಕಲ್ ವಿತರಣೆಯ ಯೋಜನೆಯ ಅಂಗವಾಗಿ ಶಾಸಕ ವೈದ್ಯರು ಇಬ್ಬರು ಪತ್ರಿಕಾ ವಿತರಕರಿಗೆ ಸೈಕಲ್ ವಿತರಣೆ ಮಾಡಿದರು. ಸಮಾರಂಭದಲ್ಲಿ ತಂಝೀಮ್ ಅಧ್ಯಕ್ಷ ಮುಝಮ್ಮಿಲ್ ಕಾಝೀಯಾ, ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಭ್ರಾಯ ಭಟ್ ಬಕ್ಕಳ, ಎಂ.ಆರ್. ಮಾನ್ವಿ, ಫಯಾಝ್ ಮುಲ್ಲಾ, ಮೋಹನ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ಭಾಸ್ಕರ್ ನಾಯ್ಕ ಸ್ವಾಗತಿಸಿದರು. ಸಹಕಾರ್ಯದರ್ಶಿ ಮೋಹನ್ ನಾಯ್ಕ ವಂದಿಸಿದರು. ಶ್ರೀಧರ್ ಶೇಟ್ ಕಾರ್ಯಕ್ರಮ ನಿರೂಪಿಸಿದರು.
‘ಪತ್ರಕರ್ತ ಸಮಾಜದ ಏಳಿಗೆಗೆ ಲೇಖನಿ ಬಳಸಲಿ’
ಪತ್ರಕರ್ತ ತನ್ನ ಧರ್ಮವನ್ನು ಅರಿತು ನಡೆಯಬೇಕು. ಅವನು ಹಿಂದೂ, ಮುಸ್ಲಿಂ, ಕ್ರೈಸ್ತನಾಗಿರಬಹುದು. ಆದರೆ ಪತ್ರಿಕಾಧರ್ಮವನ್ನು ಮರೆಯಬಾರದು. ಸಮಾಜದ ಏಳಿಗೆಗಾಗಿ ನಮ್ಮ ಲೇಖನಿಯನ್ನು ಬಳಸಬೇಕು ಎಂದು ಹಿರಿಯ ಪತ್ರಕರ್ತ ರಂಜಾನ್ ದರ್ಗಾ ಹೇಳಿದ್ದಾರೆ. ಸ್ಮರಣ ಸಂಚಿಕೆ ಸವಿನೆನಪು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಇದು ಭಟ್ಕಾಕಳಂಕನ ನಾಡು: ಜೈನಧರ್ಮದ ಆಶಯಗಳೊಂದಿಗೆ ಬೆಳೆದ ಭಟ್ಕಳ ಅಹಿಂಸಾ ಪರ ಮೋಧರ್ಮ ಎಂಬ ಮಾತುಗಳಿಂದ ಪ್ರೇರಣೆ ಪಡೆದು ನಡೆಯಬೇಕು. ಮನುಷ್ಯ ಜಾತಿ ಒಂದೇ ಸತ್ಯ ಎಂಬ ತತ್ವದಡಿ ಬದುಕು ಸಾಗಿಸಬೇಕು. ಈ ಹಿನ್ನೆಲೆಯಲ್ಲಿ ಭಟ್ಕಳದ ಜನತೆ ಚಿಂತಿಸಬೇಕು ಎಂದರು.