ಮಹಾದಾಯಿಗೆ ಒಪ್ಪಿಗೆ ಸೂಚಿಸಬೇಡಿ: ಮಹಾರಾಷ್ಟ್ರ ಸಿಎಂ ಫಡ್ನವೀಸ್ಗೆ ಮರಾಠಾ ಯುವ ಮಂಚ್ ಪತ್ರ
ಬೆಳಗಾವಿ, ಡಿ. 28: ಉತ್ತರ ಕರ್ನಾಟಕದಲ್ಲಿ ಮಹಾದಾಯಿಗಾಗಿ ಸಂಘರ್ಷ ನಡೆಯುತ್ತಿರುವಾಗಲೇ ಎಂಇಎಸ್ ಕ್ಯಾತೆ ತೆಗೆದಿದ್ದು, ಗಡಿ ವಿವಾದ ಬಗೆ ಹರಿಸುವವರೆಗೂ ಮಹಾರಾಷ್ಟ್ರ ಸರಕಾರ ಮಹಾದಾಯಿ ಯೋಜನೆಗೆ ಒಪ್ಪಿಗೆ ಸೂಚಿಸಬಾರದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ಗೆ ಎಂಇಎಸ್ ಪತ್ರ ಬರೆದು ತಕರಾರು ತೆಗೆದಿದೆ.
ನಗರದ ಮರಾಠಾ ಯುವ ಮಂಚ್ ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕರ್ನಾಟಕ ಸರಕಾರ ಗಡಿಭಾಗದ ಮರಾಠಿಗರಿಗೆ ಅನ್ಯಾಯ ಮಾಡುತ್ತಿದೆ. ಮಹಾದಾಯಿ ವಿಚಾರದಲ್ಲಿ ಕರ್ನಾಟಕ ಸರಕಾರದ ಮೂಗು ಹಿಡಿದು ಕರ್ನಾಟಕ ಸರಕಾರಕ್ಕೆ ಪಾಠ ಕಲಿಸಿ, ಮಹಾದಾಯಿ ಯೋಜನೆಗೆ ಒಪ್ಪಿಗೆ ಸೂಚಿಸಬೇಡಿ ಎಂದು ಎಂಇಎಸ್ ಮಹಾರಾಷ್ಟ್ರ ಸರಕಾರಕ್ಕೆ ಎಚ್ಚರಿಕೆ ನೀಡಿದೆ.
ಮಹಾಜನ್ ಆಯೋಗದ ವರದಿ ಪ್ರಕಾರ ಕಳಸಾ-ಬಂಡೂರಿ ನಾಲೆ ಪ್ರದೇಶ ಮಹಾರಾಷ್ಟ್ರಕ್ಕೆ ಸೇರುತ್ತದೆ. ಕರ್ನಾಟಕ ಸರಕಾರ ಈ ಪ್ರದೇಶದಲ್ಲಿ ನಾಲೆ ಅಗೆದು ಮಾವುಲಿ ದೇವಸ್ಥಾನಕ್ಕೆ ಧಕ್ಕೆ ಮಾಡಿದೆ. ಗಡಿ ವಿವಾದ ಬಗೆಹರಿಸಲು ಸರಕಾರದ ಮೇಲೆ ಒತ್ತಡ ಹಾಕಿ ಎಂದು ನಾಡ ವಿರೋಧಿ ಎಂಇಎಸ್ ಕ್ಯಾತೆ ತೆಗೆದಿದೆ.
ಉತ್ತರ ಕರ್ನಾಟಕದ ಜನ ಕುಡಿಯುವ ನೀರಿಗಾಗಿ ಕಣ್ಣೀರು ಸುರಿಸುತ್ತಿರುವಾಗ ಎಂಇಎಸ್ನವರು ಇದೇ ಕಣ್ಣೀರಿನಲ್ಲಿ ಕೈ ತೊಳೆಯಲು ಹೊಂಚು ಹಾಕಿದ್ದು, ಮಹಾದಾಯಿ ನೀರನ್ನು ಕರ್ನಾಟಕದ ನೆಲಕ್ಕೆ ಹರಿಯಲು ಅನುಮತಿ ಕೊಡಬೇಡಿ ಎಂದು ತಕರಾರು ತೆಗೆದಿದೆ.