×
Ad

ಅನಂತ್ ಕುಮಾರ್ ಹೆಗಡೆಗೆ ನಾಚಿಕೆಯಾಗಬೇಕು; ಬಿಜೆಪಿ ನಾಯಕ ಶ್ರೀನಿವಾಸ್ ಪ್ರಸಾದ್ ಕೆಂಡಾಮಂಡಲ

Update: 2017-12-30 20:50 IST

ಮೈಸೂರು,ಡಿ.30: ಸಂವಿಧಾನ ಕುರಿತು ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಗೋ.ಮಧುಸೂದನ್ ಅವರಿಗೆ ನಾಚಿಕೆಯಾಗಬೇಕು, ಐದು ಬಾರಿ ಸಂಸದರಾಗಿ ಆಯ್ಕೆಯಾದರೂ ಸಂವಿಧಾನದ ಮಹತ್ವ ತಿಳಿದುಕೊಳ್ಳಲು ಹೆಗಡೆಗೆ ಸಾಧ್ಯವಾಗಿಲ್ಲೆವೇ ಎಂದು ಸ್ವಪಕ್ಷದ ನಾಯಕರ ವಿರುದ್ಧ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿ.ಶ್ರೀನಿವಾಸ್‌ಪ್ರಸಾದ್ ಆಕ್ರೋಶಪಡಿಸಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತೀಯ ಸಂವಿಧಾನದ ಬಗ್ಗೆ ಯಾರೂ ಕೂಡ ಹಗುರವಾಗಿ ಮಾತನಾಡಬಾರದು. ಸಂವಿಧಾನ ಭಾರತೀಯರ ಶ್ರೇಷ್ಠ ಗ್ರಂಥ. ಅಂತಹ ಮಹತ್ತರವಾದ ಸಂವಿಧಾನದ ಬಗ್ಗೆ ಮಾತನಾಡಿದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಇತ್ತೀಚೆಗೆ ಸಂವಿಧಾನ ಕುರಿತು ನೀಡಿರುವ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು.

ಎರಡು ಬಾರಿ ಎಂಎಲ್‌ಸಿ ಆಗಿರುವ ಗೋ. ಮಧುಸೂದನ್‌ಗೆ ಇನ್ನೂ ಬುದ್ಧಿ ವಿಕಾಸವಾಗಿಲ್ಲ. ಗೋ. ಮಧುಸೂದನ್‌ರನ್ನು ಎಲ್ಲರೂ ‘ಗೋ’ ಅನ್ನುತ್ತಾರೆ, ‘ಕಮ್’ ಅನ್ನುವುದಿಲ್ಲ. ಅನಾವಶ್ಯಕವಾಗಿ ಆತ ಸಂವಿಧಾನದ ಬಗ್ಗೆ ಮಾತನಾಡುತ್ತಾನೆ. ಆತನಿಗೆ ಸಂವಿಧಾನದ ಮಹತ್ವ ಏನೆಂದು ಗೊತ್ತಿಲ್ಲ, ಸಂವಿಧಾನದ ಕುರಿತು ಹಾದಿ ಬೀದಿಯಲ್ಲಿ ಮಾತನಾಡುವ ಆತನಿಗೆ ನಾಚಿಕೆ ಆಗಬೇಕು ಎಂದು ತಮ್ಮದೇ ಪಕ್ಷದ ನಾಯಕನ ವಿರುದ್ಧ ಏಕವಚನದಲ್ಲೇ ಹರಿಹಾಯ್ದರು.ಅಲ್ಲದೆ ಸಂವಿಧಾನದ ಬಗ್ಗೆ ಹಗುರವಾದ ಹೇಳಿಕೆ ನೀಡುವವರ ವಿರುದ್ದ ಬಿಜೆಪಿ ವರಿಷ್ಠರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ನಮ್ಮ ಭಾವನೆಗಳನ್ನು ಕೆರಳಿಸಬೇಡಿ. ನನಗೆ ಅಂಬೇಡ್ಕರ್ ಮುಖ್ಯ. ಯಾವುದೇ ರಾಜಕೀಯ ಪಕ್ಷ ಮುಖ್ಯವಲ್ಲ. ಯಾವ ಪಕ್ಷ ಆದರೂ ಅಷ್ಟೇ. ಮೋದಿ, ಅಮಿತ್ ಶಾ, ಯಡಿಯೂರಪ್ಪ ರಾಜಕೀಯ ನಾಯಕಾದರೆ ಅಂಬೇಡ್ಕರ್ ನಮ್ಮ ಆಧ್ಯಾತ್ಮಿಕ ನಾಯಕ. ನಾವೆಲ್ಲ ಈ ಮಟ್ಟಕ್ಕೆ ಬರಲು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಕಾರಣ ಎಂದು ಭಾವುಕರಾದರು.

ಪೇಜಾವರ ಶ್ರೀಗಳ ವಿರುದ್ಧ ಗರಂ:
ಸಂವಿಧಾನ ಅಂಬೇಡ್ಕರ್ ಒಬ್ಬರೇ ಬರೆದಿದ್ದಲ್ಲ ಎಂದು ಹೇಳಿಕೆ ನೀಡಿರುವ ಉಡುಪಿ ಪೇಜಾ ಪೇಜಾವರ ಶ್ರೀಗಳ ಹೇಳಿಕೆಯು ಖಂಡನೀಯ ಎಂದರು.

ಪೇಜಾವರ ಶ್ರೀಗಳೇ, ನೀವು ನಿಮ್ಮ ಮಠದ ಬಗ್ಗೆ ಮಾತನಾಡಿ ಅಷ್ಟೇ. ಸಂವಿಧಾನದ ಬಗ್ಗೆ ಯಾಕೆ ಮಾತನಾಡುತ್ತೀರಿ. ಈ ದೇಶದ ಚರಿತ್ರೆ ಬಗ್ಗೆ ನಿಮಗೆ ಗೊತ್ತೇ. ಧರ್ಮ ಸಂಸತ್‌ನಲ್ಲಿ ನೀವು ಮಾತನಾಡಿದ್ದು ಸರಿನಾ? ಎಂದು ಪೇಜಾವರ ಶ್ರೀಗಳ ವಿರುದ್ಧ ವಾಗ್ದಾಳಿ ನಡೆಸಿದರು. ನನ್ನ ಇಡೀ ರಾಜಕೀಯ ಜೀವನ ಕುರಿತು ಪುಸ್ತಕ ಬರೆಯುತ್ತಿದ್ದು, ಸದ್ಯದಲ್ಲೇ ಬಿಡುಗಡೆ ಮಾಡುತ್ತೇನೆಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಲೋಕಸಭಾ ಸದಸ್ಯ ಕಾಗಲವಾಡಿ ಶಿವಣ್ಣ, ವಿಧಾನಪರಿಷತ್ ಮಾಜಿ ಸದಸ್ಯ ಸಿದ್ಧರಾಜು, ಮುಡಾ ಮಾಜಿ ಅಧ್ಯಕ್ಷರುಗಳಾದ ಮೋಹನ್ ಕುಮಾರ್, ಬಸವೇಗೌಡ, ಬಿಜೆಪಿ ಮುಖಂಡರಾದ ರಾಜೇಂದ್ರ, ಕುಂಬರಹಳ್ಳಿ ಶಿವಣ್ಣ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕರ್ನಾಟಕ ಏಕೀಕರಣದ ಬಗ್ಗೆಯೇ ಗೊತ್ತಿಲ್ಲಾ ಇದೀಗ ನವಕರ್ನಾಟಕ ನಿರ್ಮಾಣ ಯಾತ್ರೆಗೆ ಹೊರಟಿದ್ದಾರೆ. ಸಿದ್ದರಾಮಯ್ಯ ತೊಡೆ ತಟ್ಟಿಕೊಂಡು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲು ಬರುತ್ತಿದ್ದಾರೆ.ಸಿದ್ದರಾಮಯ್ಯರನ್ನು ಸೋಲಿಸುವುದೇ ನನ್ನ ಏಕೈಕ ಗುರಿ. ಮುಂದಿನ ಚುನಾವಣೆಯಲ್ಲಿ ನಾನು ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ.
- ವಿ.ಶ್ರೀನಿವಾಸಪ್ರಸಾದ್, ರಾಜ್ಯ ಬಿಜೆಪಿ ಉಪಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News