ನಾಗಮಂಗಲದಲ್ಲಿ ಮಂಡ್ಯ ಜಿಲ್ಲಾ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನ

Update: 2017-12-30 17:39 GMT

ನಾಗಮಂಗಲ, ಡಿ.30: ಮಕ್ಕಳ ಸರ್ವಾಂಗೀಣ ವಿಕಾಸದಲ್ಲಿ ಪೋಷಕರು, ಶಿಕ್ಷಕರು ಹಾಗೂ ಸಮಾಜದ ಪಾತ್ರ ಅತ್ಯಂತ  ಮಹತ್ವದ್ದಾಗಿದ್ದು, ಎಲ್ಲರೂ ಜವಾಬ್ಧಾರಿ ಅರಿತು ನಡೆದಾಗ ಮಾತ್ರವೇ ಮೌಲ್ಯಯುತ, ಆರೋಗ್ಯಕರ ಸಮಾಜ ಸೃಷ್ಠಿಸಲು ಸಾದ್ಯವೆಂದು ಮಂಡ್ಯ ಜಿಲ್ಲಾ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ, ಕರಡಹಳ್ಳಿ ಸರಕಾರಿ ಪ್ರೌಢಶಾಲೆಯ 10ನೆ ತರಗತಿ ವಿದ್ಯಾರ್ಥಿನಿ ಕು.ಎಸ್.ಜಯಲಕ್ಷ್ಮಿ ಅಭಿಪ್ರಾಯಪಟ್ಟಿದ್ದಾರೆ.

ಆದಿಚುಂಚನಗಿರಿ ಟ್ರಸ್ಟ್ ಮತ್ತು ಮಂಡ್ಯ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಗರದ ಎಸ್‍ಎಸಿ ಕಾಲೇಜು ಆವರಣದಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ  ಪ್ರಥಮ  ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಸಾಹಿತ್ಯದ ವಿವಿಧ ಪ್ರಾಕಾರಗಳಲ್ಲಿ ಮಕ್ಕಳ ಸಾಹಿತ್ಯವೂ ಒಂದಾಗಿದ್ದು, ಇತ್ತೀಚಿನ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಸಮ್ಮೇಳನದ ಆಯ್ಕೆ ಸ್ಪರ್ಧೆಗೆ ಬಂದ ನಾನು ಅಧ್ಯಕ್ಷೆಯಾಗಿ ಆಯ್ಕೆಯಾಗಿರುವುದು ನನ್ನ ಪಾಲಿಗೆ ಅವಿಸ್ಮರಣೀಯವಾಗಿದೆ ಎಂದು  ಸಂತಸ ವ್ಯಕ್ತಪಡಿಸಿದ ಅವರು,  ಶಾಲೆಗಳು ಕೇವಲ ಪಾಠ ಬೋಧಿಸುವ ಕೋಣೆಗಳಾಗಿರದೆ ರಾಷ್ಟ್ರಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವ ತಾಯಿಯ ಮಡಿಲಾಗಬೇಕೆಂಬುದು ನನ್ನ ಹೆಬ್ಬಯಕೆ ಎಂದು ಪ್ರತಿಪಾದಿಸಿದರು.

ವಿದ್ಯಾರ್ಥಿಗಳ ಮೊಬೈಲ್ ಬಳಕೆ ಅಪಾಯಕಾರಿ:
ಪ್ರತಿಯೊಬ್ಬ ಮಗುವಿನಲ್ಲೂ ತನ್ನದೇ ಆದ ವಿಶೇಷ ಸಾಮರ್ಥ್ಯ ಇರುತ್ತದೆ . ಅದನ್ನು ಗುರುತಿಸಿ ಪೋಷಿಸಿ ಬೆಳೆಸುವ ಹೊಣೆ ಪೋಷಕರು ಮತ್ತು ಶಿಕ್ಷಕರದ್ದಾಗಿದೆ. ಅಲ್ಲದೆ ಸಮೂಹ ಮಾಧ್ಯಮ ಹಾಗೂ ಮೊಬೈಲ್‍ಗಳ ಅತಿಯಾದ ಬಳಕೆ ಪರಿಣಾಮ ಇಂದಿನ ಮಕ್ಕಳ ನಡವಳಿಕೆ ತೀರಾ ಅಪಾಯಕಾರಿ ಮಟ್ಟ ತಲುಪಿದೆ ಅನಿಸುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.ಸಮೂಹ ಮಾಧ್ಯಮಗಳ ಕೌರ್ಯ, ಹಿಂಸೆ, ಪ್ರೀತಿ-ಪ್ರೇಮ, ಕೌಟಿಂಬಿಕ ಜಗಳ, ವಿದ್ಯಾರ್ಥಿಗಳ ಮುಂದೆಯೇ ಶಿಕ್ಷಕರ ಕಿತ್ತಾಟ, ಕೀಳು ಅಭಿರುಚಿಯ ಹಾಸ್ಯ, ಅಹಂಕಾರ, ಹೆಣ್ಣಿನ ಅಮಾನವೀಯ ಚಿತ್ರಣ ಇತ್ಯಾದಿ  ಅಂಶಗಳು ವಿದ್ಯಾರ್ಥಿ ವ್ಯಕ್ತಿತ್ವದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಜಯಲಕ್ಷ್ಮಿ ಎಚ್ಚರಿಸಿದರು.

ವೈಜ್ಞಾನಿಕ ಚಿಂತನೆಗೆ ಆದ್ಯತೆ:
ನಾವುಗಳು ಮೊದಲು ಮೂಢ ನಂಬಿಕೆಗಳನ್ನ ತೊರೆದು ವಿಜ್ಞಾನ ಮತ್ತು ತಂತ್ರಜ್ಞಾನದ ಸದ್ಬಳಕೆ ಮಾಡಿಕೊಂಡು ವೈಜ್ಞಾನಿಕ ಚಿಂತನೆಗಳ ಮೂಲಕ ಭಾರತವನ್ನು ಕಟ್ಟಬೇಕಿದೆ.  ನಮ್ಮ  ದೃಷ್ಠಿ ಕೋನ ಕೇವಲ ಅಂಕ ಮತ್ತು ಉದ್ಯೋಗಕ್ಕೆ ಮಾತ್ರ ಸೀಮಿತವಾಗಿರಿಸದೆ ನಮ್ಮ ನಡೆ ನುಡಿ ಸಾಹಿತ್ಯ ರಚನೆಗಳ ಮೂಲಕ ಸಮಾಜವನ್ನು ಸರಿದಾರಿಗೆ ತರುವ ಮಾದರಿಯಲ್ಲಿ ಬದುಕಬೇಕು ಎಂದು ಆಕೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಹೆಚ್ಚುತ್ತಿರುವ ಬಾಲಾಪರಾದಗಳ ಬಗ್ಗೆ ವಿ.ಶಿಲ್ಪ ಕಳವಳ;

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಪಾಂಡವಪುರ ತಾಲೂಕು ನಾರಾಯಣಪುರ ಸರಕಾರಿ ಪೌಢಶಾಲೆಯ ವಿದ್ಯಾರ್ಥಿನಿ ಕು.ವಿ.ಶಿಲ್ಪ, ಇತ್ತೀಚಿನ ದಿನಗಳಲ್ಲಿ ಬಾಲಾಪರಾಧಗಳು, ಬಾಲಕಾರ್ಮಿಕ ಪದ್ದತಿ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. 

ಶಿಕ್ಷಣವೊಂದರಿಂದಲೇ ಒರ್ವ ವ್ಯಕ್ತಿ ಪರಿಪೂರ್ಣನಾಗಿ ಅಪರಾದ ಜಗತ್ತನ್ನು ಬೇಧಿಸಲಾರ. ಆದ್ದರಿಂದ ಜನತೆ ಬಾಲಕಾರ್ಮಿಕ ಪದ್ದತಿ ನಿರ್ಮೂಲನೆಗೆ  ಸಹಕರಿಸಬೇಕು.  ಅದೆಷ್ಟೋ ಮಕ್ಕಳು ಬಡತನದ ಕಾರಣಗಳಿಂದ ತಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆಗೆ ಅವಕಾಶವಂಚಿತರಾಗಿ ಮೂಲೆಗುಂಪಾಗುತ್ತಿದ್ದಾರೆ. ತನ್ನಲ್ಲಿರುವ ಪ್ರತಿಭೆಯು ಒಡಮೂಡಲು ತಾನೂ ತನ್ನದು ಎಂಬ ಸಂಕುಚಿತ ಭಾವನೆ ತೊರೆದು ವಿಶ್ವವೇ ನಮ್ಮದು ನಮಗೋಸ್ಕರ ಎಂಬ ವಿಶಾಲ ಭಾವನೆಯಿಂದ ನಾಡು ನುಡಿ ಭಾಷೆ ಬೆಳವಣಿಗಾಗಿ ಸಾಹಿತ್ಯ ಕೃಷಿಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.

ಮಕ್ಕಳ ಸಮ್ಮೇಳನಕ್ಕೂ ಅನುದಾನ ನೀಡಿ
ಸಮ್ಮೇಳನದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ರಾಜ್ಯಾದ್ಯಕ್ಷ ಸಿ..ಎಸ್.ಅಶೋಕ್, ಸಾಹಿತ್ಯ ಕ್ಷೇತ್ರದಲ್ಲಿ ಮಕ್ಕಳ ಸಾಹಿತ್ಯದ ಕೊಡುಗೆಯೂ ಅಪಾರವಾಗಿದ್ದು, ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಸಿಗುವಂತ ಪ್ರಚಾರ, ಅನುದಾನಗಳು ಮಕ್ಕಳ ಸಾಹಿತ್ಯ ಸಮ್ಮೇಳನಗಳಿಗೂ ಸರಕಾರ ನೀಡಬೇಕು ಎಂದು ಒತ್ತಾಯಿಸಿದರು.

ಶಿಶು ಸಾಹಿತಿ ಶಿವಮೊಗ್ಗ ಅಂತಃಕರಣ ರಚಿಸಿರುವ ಹೊನ್ನಾರು ಕೃತಿ ಬಿಡುಗಡೆ ಮಾಡಲಾಯಿತು. ಸಮ್ಮೇಳನದ ಸಾನಿಧ್ಯವನ್ನು ಆದಿಚುಂಚನಗಿರಿ ಪೀಠಾದ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮಿವಹಿಸಿದ್ದರು. ಶ್ರೀಮಠದ ಕಾರ್ಯದರ್ಶಿ ಪ್ರಸನ್ನನಾಥಸ್ವಾಮಿ ಹಾಗೂ ಶಾಸಕ ಚಲುವರಾಯಸ್ವಾಮಿ, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎನ್. ಮಂಜುನಾಥ್, ವಿಚಾರಗೋಷ್ಠಿಗಳ ಅಧ್ಯಕ್ಷರಾದ ಪಾಂಡವಪುರ ತಾಲೂಕಿನ ಕು.ಯಶವಂತ್, ಮದ್ದೂರು ತಾಲೂಕು ಹೊನ್ನಲಗೆರೆ ಕು.ಎನ್.ದೀಪಶ್ರೀ, ಕವಿಗೋಷ್ಠಿ ಅಧ್ಯಕ್ಷರಾದ ಪಾಂಡವರಪುರ ಕು.ರೇವಂತ್,  ಮದ್ದೂರು ಬಿಇಓ ರೇಣುಕಮ್ಮ, ನಾಗಮಂಗಲ ಬಿಇಓ ಡಿ.ಆರ್.ಅಮಿತ್, ಇತರರು ಉಪಸ್ಥಿತರಿದ್ದರು.
ಸಮ್ಮೇಳನಾಧ್ಯಕ್ಷೆ  ಕು.ಜಯಲಕ್ಷ್ಮಿ ಅವರನ್ನು  ನಗರದ ಮುಖ್ಯರಸ್ತೆಯಲ್ಲಿ ಕಲಾತಂಡಗಳ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News