×
Ad

ಗುಂಡ್ಲುಪೇಟೆ: ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಅಕ್ರಮವಾಗಿ ತಲೆ ಎತ್ತುತ್ತಿರುವ ಅಂಗಡಿಗಳು

Update: 2018-01-02 20:19 IST

ಗುಂಡ್ಲುಪೇಟೆ,ಜ.2: ಗುಂಡ್ಲುಪೇಟೆ-ಕಲ್ಲಿಕೋಟೆ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಅಕ್ರಮವಾಗಿ ನೂರಾರು ಅಂಗಡಿ, ಮಳಿಗೆ ಹಾಗೂ ಬೇಕರಿಗಳು ಸ್ಥಾಪನೆಯಾಗಿದ್ದರೂ ಅಧಿಕಾರಿಗಳು ಕಂಡು ಕಾಣದಂತೆ ಇದ್ದಾರೆ. ಗುಂಡ್ಲುಪೇಟೆ ಪಟ್ಟಣದಿಂದ ಮೊದಲುಗೊಂಡು ಮಲ್ಲಯ್ಯನಪುರ, ಕೂತನೂರು, ಭೀಮನಭೀಡು, ಕಣ್ಣೇಗಾಲ ಗೇಟ್, ಮದ್ದಯ್ಯನ ಹುಂಡಿ, ಮದ್ದೂರು, ಕಗ್ಗಳದ ಹುಂಡಿ ಗ್ರಾಮಗಳ ರಸ್ತೆಯ ಬದಿಯಲ್ಲಿ ನೂರಕ್ಕೂ ಹೆಚ್ಚು ಅಂಗಡಿಗಳು ಕಳೆದ ಐದಾರು ವರ್ಷದಿಂದಲೂ ಕಾರ್ಯ ನಿರ್ವಹಿಸುತ್ತಾ ಬರುತ್ತಿವೆ. 

ಈ ಮೊದಲು ಕೇವಲ ಜಮೀನಿನಲ್ಲಿ ಬೆಳೆದ ತರಕಾರಿಗಳನ್ನು ಮಾತ್ರ ಮಾರಾಟ ಮಾಡಲು ತೆಂಗಿನ ಗರಿಯ ಷೆಡ್‍ಗಳನ್ನು ಕಟ್ಟಿಕೊಂಡಿದ್ದರು. ಆದರೆ ಬರು-ಬರುತ್ತಾ ಕಬ್ಬಿಣದ ತಗಡುಗಳ ಮೇಲ್ಛಾವಣಿ, ಕಾಂಕ್ರಿಟ್ ನೆಲಹಾಸಿನ ಕಟ್ಟಡಗಳು ತಲೆ ಎತ್ತಿವೆ. ಹೋಟೆಲ್, ಬೇಕರಿಗಳು ಹುಟ್ಟಿಕೊಂಡಿವೆ.

ಕಾರು ಮತ್ತಿತ್ತರ ವಾಹನಗಳಲ್ಲಿ ಕೇರಳಕ್ಕೆ ತೆರಳುವ ಜನರು ರಸ್ತೆಯ ಮಧ್ಯದಲ್ಲೇ ವಾಹನಗಳನ್ನು ನಿಲ್ಲಿಸಿ ಕಾಫಿ- ಟೀ ಕುಡಿಯುಲು ತೊಡಗುತ್ತಾರೆ. ತರಕಾರಿಗಳನ್ನು ಕೊಳ್ಳುತ್ತಾರೆ. ಇದರಿಂದ ಬೇರೆ ವಾಹನಗಳು ಹೆದ್ದಾರಿಯಲ್ಲಿ ಸಂಚರಿಸಲು ಪ್ರಯಾಸ ಪಡಬೇಕಾಗಿದೆ. ಈ ನಡುವೆ ಅಪಘಾತಗಳು ನಡೆದು ಮೂರು ತಿಂಗಳ ಒಳಗೆ ಹತ್ತಕ್ಕೂ ಹೆಚ್ಚು ಮಂದಿ ತಮ್ಮ ಪ್ರಾಣವನ್ನೇ ಬಿಟ್ಟಿದ್ದಾರೆ.

ಹೆದ್ದಾರಿಯ ಬದಿಯಲ್ಲಿ ಇರುವ ಅಂಗಡಿಗಳಲ್ಲಿ ಬಹುತೇಕ ಎಲ್ಲರೂ ಮಲಯಾಳಿ ಭಾಷಿಕರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಜೆ ಸಮೀಪಿಸುತ್ತಿದ್ದಂತೆ ಬೇರೊಂದು ಲೋಕ ಸೃಷ್ಟಿಯಾಗುತ್ತಿದೆ. ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿವೆ. ಇದನ್ನು ಯಾರು ತಡೆಯುತ್ತಿಲ್ಲ ಎಂದು ಸ್ಥಳೀಯ ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಾರೆ.

ವಾಣಿಜ್ಯ ಚಟುವಟಿಕೆಗಳನ್ನು ನಡೆಸಬೇಕಾದರೆ ಸ್ಥಳೀಯ ಗ್ರಾಮ ಪಂಚಾಯಿತ್ ನ ಅನುಮತಿ ಮತ್ತು ಪರವಾನಿಗೆ ಬೇಕು. ಆದರೆ ಈ ಕುರಿತು ಹೆದ್ದಾರಿಯ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಗ್ರಾಮ ಪಂಚಾಯಿತ್ ಗಳಾದ ಕೂತನೂರು, ಭೀಮನಭೀಡು, ಕಣ್ಣೇಗಾಲ, ಬೇರಂಬಾಡಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಕೇಳಿದರೆ, “ ನಮ್ಮ ಪಂಚಾಯಿತ್ ವತಿಯಿಂದ ಯಾವುದೇ ಅನುಮತಿ ಕೊಟ್ಟಿಲ್ಲ. ಪರವಾನಗಿಯನ್ನು ನೀಡಿಲ್ಲ. ಕೆಲವೊಂದು ಕಂದಾಯ ಜಮೀನಿನಲ್ಲಿ ಇವೆ. ಅವು ನಮ್ಮ ವ್ಯಾಪ್ತಿಗೆ ಬರುವುದಿಲ್ಲ.  ಹೆದ್ದಾರಿ ಅಂಚಿನಲ್ಲೇ ಇರುವುದರಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಅಧಿಕಾರಿಗಳನ್ನು ಕೇಳಬೇಕು” ಎಂದು ಉತ್ತರ ನೀಡುತ್ತಾರೆ.

ಇಷ್ಟು ವರ್ಷದಿಂದಲೂ ಅನುಮತಿ ಇಲ್ಲದೆ ರಾಜರೋಷವಾಗಿ ಅಂಗಡಿಗಳು ಚಟುವಟಿಕೆಯಿಂದ ಇದ್ದರೂ ಅಧಿಕಾರಿಗಳು ನಮಗೆ ಏನು ಗೊತ್ತಿಲ್ಲ ಎಂದು ಹೇಳುತ್ತಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಸ್ಥಳೀಯ ಗ್ರಾಮಸ್ಥರಾದ ಬಸವಣ್ಣ, ಪುಟ್ಟಸ್ವಾಮಿ,ಲಿಂಗರಾಜಪ್ಪ ಮತ್ತಿತರರು ಆರೋಪಿಸುತ್ತಾರೆ.

ಯಾವುದೇ ಅಂಗಡಿ, ವಾಣಿಜ್ಯ ಚಟುವಟಿಕೆಯ ಮಳಿಗೆಗಳಿಗೆ ಗ್ರಾಮ ಪಂಚಾಯಿತಿಯಿಂದ ಅನುಮತಿ ತಗೆದುಕೊಳ್ಳಬೇಕು. ಇದು ಕಡ್ಡಾಯ. ಹೆದ್ದಾರಿ ಬದಿಯಲ್ಲಿ ಇರುವ ಅಂಗಡಿಗಳಿಗೆ ಕಾನೂನು ರೀತಿ ನೋಟಿಸ್ ನೀಡಬೇಕು ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ

                            - ಎಚ್.ಎಸ್.ಬಿಂದ್ಯಾ, ತಾಪಂ ಇಓ, 
                                  ಗುಂಡ್ಲುಪೇಟೆ

ಕಂದಾಯ ಜಮೀನಿನಲ್ಲಿ ಅಂಗಡಿ- ಮುಂಗಟ್ಟುಗಳು ಸ್ಥಾಪನೆಯಾಗಿದ್ದರೆ ನಿರೀಕ್ಷರನ್ನು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಲಾಗುವುದು
                                             - ಕೆ.ಸಿದ್ದು, ತಹಶೀಲ್ದಾರ್,
                                               ಗುಂಡ್ಲುಪೇಟೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News