ಕನ್ನಡಗರಲ್ಲಿ ಭಾಷಾಭಿಮಾನ ಮೂಡಿಲ್ಲ: ಪ.ಮಲ್ಲೇಶ್ ಬೇಸರ

Update: 2018-01-06 15:28 GMT

ಮೈಸೂರು,ಜ.6: ಕನ್ನಡದ ಬಗ್ಗೆ ಹಲವಾರು ಹೋರಾಟಗಳು ನಡೆದಿದ್ದು, ಭಾಷೆಯ ಬಗ್ಗೆ ಕನ್ನಡಿಗರಲ್ಲಿ ಅಭಿಮಾನ ಮೂಡದೇ ಇರುವುದು ಬೇಸರದ ಸಂಗತಿ. ಮಾತೃ ಭಾಷೆಯನ್ನು ನಿರ್ಲಕ್ಷಿಸುವುದು ಹೆತ್ತಮ್ಮನನ್ನು ನಿರ್ಲಕ್ಷ್ಯಿಸಿದಂತಹ ಬಹು ದೊಡ್ಡ ಅಪರಾಧವಾಗಿದೆ ಎಂದು ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ, ಹಿರಿಯ ಕನ್ನಡ ಚಳುವಳಿಗಾರ ಪ.ಮಲ್ಲೇಶ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ  ಕನ್ನಡ ಚಳವಳಿ ಕೇಂದ್ರ ಸಮಿತಿ, ಮೈಸೂರು ಶರಣ ಮಂಡಲಿ, ಕನ್ನಡ ಬೆಳಕು ವಾರಪತ್ರಿಕೆ ಸಂಯುಕ್ತಾಶ್ರಯದಲ್ಲಿ 2018ರ ಕನ್ನಡ ಅಂಕಿಗಳ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕನ್ನಡ ಭಾಷೆಗಾಗಿ ಬೀದಿಗಿಳಿದು ಹೋರಾಟ ಮಾಡಿ ಪೋಲೀಸರಿಂದ ಒದೆ ತಿಂದು ಜೈಲು ಪಾಲಾಗಿರುವವರು ಒಂದು ವರ್ಗವಾದರೆ, ಭಾಷೆ ಹೆಸರಿನಲ್ಲಿ  ಘನತೆ, ಗೌರವ ಹೆಚ್ಚಿಸಿಕೊಂಡು ಪ್ರಭಾವ ಬೀರುವ ಪ್ರತಿಷ್ಠಿತ ವಲಯವೊಂದು ಸೃಷ್ಟಿಯಾಗಿದೆ ಎಂದ ಅವರು, ಸುಪ್ರೀಂ ಕೋರ್ಟ್ ನ ತೀರ್ಪಿನಿಂದ ಕನ್ನಡಕ್ಕೆ  ಧಕ್ಕೆಯಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಉಳಿವಿಗೆ ಕ್ರಮ ವಹಿಸಲು ರಾಜ್ಯದ ಸಂಸದರಿಗೆ ಪತ್ರ ಬರೆಯಲಾಗಿತ್ತು. ಆದರೆ ಯಾವೊಬ್ಬ ಸಂಸದರು ಕೂಡಾ ಪತ್ರಕ್ಕೆ ಸ್ಪಂದಿಸಿಲ್ಲ. ಕನ್ನಡದ ಉಳಿವಿಗಾಗಿ ಸಂಸತ್ತಿನಲ್ಲಿಯೂ ಧ್ವನಿ ಎತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಭಾಷಾ ಉಳಿವಿಗಾಗಿ ಕರ್ನಾಟಕದಲ್ಲಿ ನಡೆದಷ್ಟು ಹೋರಾಟ ಬೇರೆಯೆಲ್ಲಿಯೂ ನಡೆದಿಲ್ಲ. ಭಾಷಾ ಉಳಿವಿಗಾಗಿ ಜ.28ರಂದು ರಾಜ್ಯಮಟ್ಟದ ಸಮ್ಮೇಳನ ನಡೆಸಲಾಗುತ್ತಿದ್ದು. ಸಮ್ಮೇಳನದಲ್ಲಿ ಕನ್ನಡ ಹೋರಾಟಗಾರರು, ಲೇಖಕರು, ಪ್ರಗತಿಪರರು ಮೊದಲಾದವರು ಭಾಗಿಯಾಗಲಿದ್ದಾರೆ. ಸಮ್ಮೇಳನದಲ್ಲಿ ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣ, ಸರ್ಕಾರಿ ಶಾಲೆಗಳ ಬಲವರ್ಧನೆ, ಖಾಸಗಿ ಶಾಲೆಗಳ ಕಡಿವಾಣಕ್ಕೆ ಚಿಂತನೆಗಳು ಗೋಷ್ಠಿಗಳು ನಡೆಯುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯ ಬಿ.ಎಂ.ನಟರಾಜು, ಡಾ.ಡಿ.ತಿಮ್ಮಯ್ಯ, ಮೈಸೂರು ಶರಣ ಮಂಡಲಿ ಪ್ರಧಾನ ಸಂಚಾಲಕ ಎಂ.ಚಂದ್ರಶೇಖರ್, ಗೌರವಾಧ್ಯಕ್ಷ ಯು.ಎಸ್.ಶೇಖರ್, ಕನ್ನಡ ಚಳುವಳಿ ಕೇಂದ್ರ ಸಮಿತಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ ಮೊದಲಾದವರು ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News