ಮೂರು ಮನೆಗಳಲ್ಲಿ ಕಳ್ಳತನ: ಲಕ್ಷಾಂತರ ರೂ. ಮೌಲ್ಯದ ನಗನಾಣ್ಯ ಅಪಹರಣ

Update: 2018-01-12 12:27 GMT

ಶಿವಮೊಗ್ಗ, ಜ. 12: ಜಿಲ್ಲೆಯ ಭದ್ರಾವತಿ ಪಟ್ಟಣದ ಹಳೇನಗರ ಹಾಗೂ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಗಳಲ್ಲಿ ನಡೆದ ಮೂರು ಪ್ರತ್ಯೆಕ ಮನೆಗಳ್ಳತನ ಪ್ರಕರಣಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ನಗನಾಣ್ಯ ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ನಡೆದಿದೆ. ಮನೆಯಲ್ಲಿ ಯಾರು ಇಲ್ಲದಿರುವ ವೇಳೆಯೇ ಕಳ್ಳರು ಈ ಕೃತ್ಯಗಳನ್ನು ನಡೆಸಿದ್ದಾರೆ. 

ಪ್ರಕರಣ 1: ಹಳೇನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಂಬೇಡ್ಕರ್ ನಗರ 2 ನೇ ತಿರುವಿನ ನಿವಾಸಿ ನಾಗರಾಜ್ ಎಂಬುವರ ಮನೆಯಲ್ಲಿದ್ದ 17,500 ರೂ. ಮೌಲ್ಯದ ಚಿನ್ನಾಭರಣ ಹಾಗೂ 20 ಸಾವಿರ ನಗದನ್ನು ಕಳ್ಳರು ಅಪಹರಿಸಿದ್ದಾರೆ. ಕಳುವಾದ ನಗನಾಣ್ಯದ ಮೌಲ್ಯ 37,500 ರೂ.ಗಳೆಂದು ಅಂದಾಜಿಸಲಾಗಿದೆ. 

ಪ್ರಕರಣ 2: ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ನೀಲಕಂಠಗೌಡ ಎಂಬುವರ ಮನೆಯ ಬಾಗಿಲ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರ ತಂಡವೊಂದು, ಗಾಡ್ರೇಜ್ ಬೀರು ಮುರಿದು ಅದರೊಳಗಿದ್ದ 29 ಗ್ರಾಂ ತೂಕದ 72,500 ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ಅಪಹರಿಸಿ ಪರಾರಿಯಾಗಿದೆ. 

ಪ್ರಕರಣ 3: ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಮಕ್ಕ ಕಾಂಪೌಂಡ್ ಬಡಾವಣೆಯ ನಿವಾಸಿ ಗಿರಿರಾಜ್ ಎಂಬುವರ ಮನೆಯಲ್ಲಿಯೂ ಕಳವು ನಡೆದಿದೆ. ಒಂದು ಜೊತೆ ಓಲೆ, ಟ್ಯಾಬ್, ಮೊಬೈಲ್ ಪೋನ್‍ನನ್ನು ಕಳ್ಳರು ಅಪಹರಿಸಿದ್ದಾರೆ. ಕಳುವಾದ ವಸ್ತುಗಳ ಅಂದಾಜು ಮೌಲ್ಯ 24 ಸಾವಿರ ರೂ.ಗಳಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News