ಕಾಳುಮೆಣಸು ಕಾನೂನು ಬಾಹಿರ ಆಮದು: ಕಠಿಣ ಕ್ರಮಕ್ಕೆ ವಾಣಿಜ್ಯ ಸಚಿವರಿಗೆ ನಿಯೋಗದ ಮನವಿ

Update: 2018-01-13 16:59 GMT

ಮಡಿಕೇರಿ, ಜ.13: ಭಾರತಕ್ಕೆ ಆಮದಾಗುತ್ತಿರುವ  ಕಾಳುಮೆಣಸಿನಲ್ಲಿ ಸಾಕಷ್ಟು ಕಾನೂನು ಬಾಹಿರ ವಹಿವಾಟು ನಡೆಯುತ್ತಿದ್ದು ಈ ಬಗ್ಗೆ ಕೇಂದ್ರ ವಾಣಿಜ್ಯ ಇಲಾಖೆ ಕಠಿಣ ಕ್ರಮ ಕೈಗೊಳ್ಳುವಂತೆ   ಕಾಳು ಮೆಣಸು ಬೆಳೆಗಾರ ಸಮನ್ವಯ ಸಮಿತಿ ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರನ್ನು ಒತ್ತಾಯಿಸಿದೆ. 

ದೆಹಲಿಯಲ್ಲಿ ವಾಣಿಜ್ಯ ಸಚಿವರನ್ನು ಭೇಟಿಯಾದ   ಕಾಳು ಮೆಣಸು ಬೆಳೆಗಾರ ಸಮನ್ವಯ ಸಮಿತಿಯ ಪ್ರಧಾನ ಸಂಚಾಲಕ ಕೊಂಕೋಡಿ ಪದ್ಮನಾಭ,   ಕಾಳು ಮೆಣಸಿನ ಆಮದು ಮೇಲೆ ಕೆಜಿ. ಒಂದಕ್ಕೆ  ರೂ.500 ಕನಿಷ್ಟ ಆಮದು ಬೆಲೆ ಹೇರಿದರೂ ವ್ಯಾಪಾರಿಗಳು ಹೊಸ ಕಳ್ಳದಾರಿಯನ್ನು ಕಂಡು ಹಿಡಿದು ವಿಯೆಟ್ನಾಂ ದೇಶದ ಕಳಪೆ ಕಾಳು ಮೆಣಸನ್ನು ಕೆಜಿ.ಗೆ ರೂ.130 ರ ಆಸುಪಾಸಿನಲ್ಲಿ ಖರೀದಿಸಿ ಶ್ರೀಲಂಕಾಕ್ಕೆ ತಂದು ಅಲ್ಲಿಂದ ಭಾರತಕ್ಕೆ ಆಮದು ಮಾಡಿ ಸರಕಾರಕ್ಕೆ ಕೋಟ್ಯಾಂತರ ರೂಪಾಯಿಗಳ ತೆರಿಗೆ ವಂಚನೆ ಮಾಡುತ್ತಾ ಕಡಿಮೆ ದರದಲ್ಲಿ ಮಾರುಕಟೆಗೆ ಬಿಡುತ್ತಿರುವುದು ಭಾರತದಲ್ಲಿ ದರ ಕುಸಿತಕ್ಕೆ ಕಾರಣವಾಗಿದೆ ಎಂದು ಸಚಿವರಲ್ಲಿ   ಆತಂಕ ವ್ಯಕ್ತಪಡಿಸಿದರು. ಕೇಂದ್ರ ವಾಣಿಜ್ಯ ಸಚಿವ .ಸುರೇಶ್ ಪ್ರಭು  ಅವರಿಗೆ  ಕಾಳುಮೆಣಸು ಬೆಳೆಗಾರರು ಎದುರಿಸುತ್ತಿರುವ ಮತ್ತಷ್ಟು ಸಮಸ್ಯೆಗಳನ್ನು ಮನದಟ್ಟು ಮಾಡಲಾಯಿತು.  

ವಿಯೆಟ್ನಾನಿಂದ ಆಮದಾಗುವ ಕಾಳು ಮೆಣಸಿನಲ್ಲಿ ವಿಷಕಾರಕ ಅಂಶಗಳಿರುವುದರಿಂದ ಅದನ್ನು ಕಡ್ಡಾಯವಾಗಿ ರಾಸಾಯನಿಕ ಪರೀಕ್ಷೆಗೊಳಪಡಿಸಬೇಕು. ಶ್ರೀಲಂಕಾದಿಂದ ಅಮದಾಗುವ ಕಾಳು ಮೆಣಸು, ಅದು ವಿಯೆಟ್ನಾಂ ಕಾಳು ಮೆಣಸು ಆಗಿದ್ದು, ಅದರ ಮೂಲವನ್ನು ಪರಿಶೋಧಿಸಬೇಕು.  ಶ್ರೀಲಂಕಾ ಬೆಳೆಯುವ ಕಾಳು ಮೆಣಸಿಗಿಂತ ಹೆಚ್ಚಗೆ ಪ್ರಮಾಣದ ಕಾಳು ಮೆಣಸನ್ನು ರಫ್ತು ಮಾಡುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.  ಬಾಂಗ್ಲಾ ಮತ್ತು ಮಯನ್ಮಾರಿನಿಂದ ಕಾನೂನು ಬಾಹಿರವಾಗಿ ವಿಯೆಟ್ನಾಂ ಕಾಳು ಮೆಣಸನ್ನು ಭಾರತಕ್ಕೆ ನುಗ್ಗಿಸುತ್ತಿದ್ದು ಮತ್ತು ಶ್ರೀಲಂಕಾದಿಂದ ಆಮದಾಗುವ ಕಾಳು ಮೆಣಸು ವ್ಯವಹಾರದಲ್ಲಿ ಕೋಟ್ಯಾಂತರ ರೂಪಾಯಿಯ ತೆರಿಗೆ ವಂಚನೆ ಆಗುತ್ತಿದ್ದು ಈ ಬಗ್ಗೆ ತಕ್ಷಣ ಕ್ರಮಕೈಗೊಳ್ಳಬೇಕು.

ಕಾಳು ಮೆಣಸನ್ನು ಕಾಳು ಮೆಣಸು ಬೆಳೆಯದೇ ಇರುವ ದೇಶಗಳಾದ ಜರ್ಮನಿ, ಸ್ಮೈನ್, ಇಟಲಿ ಮೊದಲಾದ ದೇಶಗಳ ಹೆಸರಿನಲ್ಲಿ ಆಮದಾಗುತ್ತಿದ್ದು ಇದರಲ್ಲಿ ಭಾರೀ ಅವ್ಯವಹಾರ ಆಗುತ್ತಿರುವ  ಸಂಶಯವಿದೆ.  ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬುದೂ ಸೇರಿದೆಂತೆ  ಪ್ರಮುಖ   ಬೇಡಿಕೆಗಳನ್ನು ವಾಣಿಜ್ಯ ಸಚಿವರ ಮುಖೇನ ಕೇಂದ್ರ  ಸರಕಾರಕ್ಕೆ ಸಲ್ಲಿಸಲಾಯಿತು. ಕಾಳುಮೆಣಸು ಬೆಳೆಗಾರರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದ  ಸಚಿವ ಸುರೇಶ್ ಪ್ರಭು, ಸಂಬಂಧಿತ ಅಧಿಕಾರಿಗಳು ಈ ಬಗ್ಗೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳುವುದಾಗಿ  ಭರವಸೆ ನೀಡಿದರು. 

ಮುಂದಿನ ಕೆಲವೇ  ದಿನಗಳಲ್ಲಿ  ಕಾಳು ಮೆಣಸಿನ  ದರ ಕನಿಷ್ಟ  450   ರು. ದಾಟಬಹುದಾಗಿದ್ದು ಬೆಳೆಗಾರರು ಬೆಲೆ ಕುಸಿತದ ಬಗ್ಗೆ ಭಯ ಪಡುವ ಅಗತ್ಯವಿಲ್ಲ ಎಂದು ಕಾಳು ಮೆಣಸು ಸಮನ್ವಯ ಸಮಿತಿಯ ಸಂಚಾಲಕರೂ ಆಗಿರುವ ಅಡಿಕೆ ಮಾರಾಟ ಫೆಡರೇಶನ್  ಅಧ್ಯಕ್ಷ  ಕೊಂಕೋಡಿ ಪದ್ಮನಾಭ  ಸಚಿವರ ಭೇಟಿ ನಂತರ  ಭರವಸೆ  ವ್ಯಕ್ತಪಡಿಸಿದ್ದಾರೆ. 

ಈ ನಿಯೋಗದಲ್ಲಿ  ಕಾಳುಮೆಣಸು ಬೆಳೆಗಾರ ಸಮನ್ವಯ ಸಮಿತಿ  ಪ್ರಧಾನ ಸಂಚಾಲಕ ಕೊಂಕೋಡಿ ಪದ್ಮನಾಭ, ಸಮಿತಿಯ  ಸಮನ್ವಯ ಸಂಚಾಲಕ ಕೆ.ಕೆ.ವಿಶ್ವನಾಥ್,   ಕ್ಯಾಂಪೈನ್ ಪ್ರತಿನಿಧಿಗಳಾದ ಮಂಜುನಾಥ್, ದಯಾನಂದ ಹೆಗ್ಡೆ ,   ಕೊಡಗು ಪ್ಲಾಂಟರ್ಸ್ ಅಸೊಸಿಯೇಷನ್ ಪ್ರತಿನಿಧಿ  ಪ್ರದೀಪ್ ಪೂವಯ್ಯ,  ಕನಾ9ಟಕ ಬೆಳೆಗಾರರ ಒಕ್ಕೂಟದ ಪ್ರತಿನಿಧಿ ಜಯರಾಂ, ಮಲೆನಾಡು ಅಡಿಕೆ ಮಾರಾಟಗಾರರ ಸಹಕಾರ ಸಂಘದ ಪ್ರತಿನಿಧಿ  ಎಡಗೆರೆ ಸುಬ್ರಹ್ಮಣ್ಯ,  ಕನಾ9ಟಕ ಬೆಳೆಗಾರರ  ಸಂಘಟನೆಯ ಅಧ್ಯಕ್ಷ  ಪ್ರಮೋದ್ , ಶಿರಸಿ ತಾಲೂಕು ಕ?ಷಿ ಉತ್ಪನ್ನ ಸಹಕಾರ ಮಾರುಕಟ್ಟೆ ಸೊಸೈಟಿ   ಪ್ರತಿನಿಧಿಗಳಾದ  ಜಿ.ಎಂ.ಹೆಗಡೆ , ಟಿಎಂ.ಎಸ್.ಎಸ್. ಯಂ.ಆರ್.ಹೆಗಡೆ  ಮೊದಲಾದವರು ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News