ಓ ಮೆಣಸೇ..

Update: 2018-01-15 07:02 GMT

ಕರ್ನಾಟಕ ಕಾಂಗ್ರೆಸ್‌ಗೆ ಎಟಿಎಂ ಇದ್ದಂತೆ. - ಯೋಗಿ ಆದಿತ್ಯನಾಥ, ಉ.ಪ್ರ. ಮುಖ್ಯಮಂತ್ರಿ

ಬಿಜೆಪಿಯ ಬಳ್ಳಾರಿ ಎಟಿಎಂ ಕೆಟ್ಟು ಕೂತಿದೆ.

---------------------
ರಾಜ್ಯದ ಹಿತ ಕಾಪಾಡಲು ಪ್ರಾದೇಶಿಕ ಪಕ್ಷ ಅನಿವಾರ್ಯ -ದೇವೇಗೌಡ, ಮಾಜಿ ಪ್ರಧಾನಿ

ಮಕ್ಕಳ ಹಿತ ಕಾಪಾಡಲು ಎಂದರೆ ಪ್ರಾಮಾಣಿಕವಾಗಿರುತ್ತಿತ್ತು.

---------------------
ಲಾಲು ಪ್ರಸಾದ್ ಯಾದವ್ ಬಿಜೆಪಿ ಸೇರಿದ್ದರೆ ಶಿಕ್ಷೆ ಅನುಭವಿಸಬೇಕಾಗಿರಲಿಲ್ಲ - ಅಖಿಲೇಶ್ ಯಾದವ್, ಎಸ್ಪಿ ನಾಯಕ

ಬಿಜೆಪಿ ಸೇರುವುದಕ್ಕಿಂತ ದೊಡ್ಡ ಶಿಕ್ಷೆಯಿದೆಯೇ?

---------------------

ಸಿದ್ದರಾಮಯ್ಯ ಸರಕಾರ ಕರಾವಳಿಯ ಪೊಲೀಸರ ಕೈ ಕಟ್ಟಿ ಹಾಕಿದೆ - ನಳಿನ್ ಕುಮಾರ್ ಕಟೀಲು, ಸಂಸದ

ಕೋಮುವಾದಿಗಳ ಜೊತೆಗೆ ಕೈಜೋಡಿಸದೇ ಇರುವುದಕ್ಕಾಗಿ.

---------------------

ಕರಾವಳಿಯಲ್ಲಿ ಶಾಂತಿ ಸ್ಥಾಪನೆಗೆ ಪೇಜಾವರ ಶ್ರೀ - ವೀರೇಂದ್ರ ಹೆಗ್ಗಡೆ ಮುಂದಾಗಲಿ - ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆ ಸಂಸ್ಥಾಪಕ

ಅವರು ಪ್ರಯತ್ನಿಸುತ್ತಲೇ ಇದ್ದಾರೆ, ನೀವು ಬಿಡಬೇಕಲ್ಲ?

---------------------

ಏಟಿಗೆ ಏಟು - ಕಣ್ಣಿಗೆ ಕಣ್ಣು ಪರಿಹಾರವಲ್ಲ - ಪ್ರತಾಪ್ ಸಿಂಹ, ಸಂಸದ

ತಮ್ಮ ಮೇಲಿರುವ ಕೇಸುಗಳನ್ನು ಹಿಂದೆಗೆಯಲು ಪೊಲೀಸರಿಗೆ ಈ ರೀತಿಯ ಮನವಿಯೇ?

---------------------

ಸಿದ್ದರಾಮಯ್ಯ ಮತ್ತು ಗೋಸುಂಬೆ ಮಧ್ಯೆ ಸ್ಪರ್ಧೆ ನಡೆದರೆ ಗೋಸುಂಬೆ ಸೋಲುತ್ತದೆ. - ಸಿ.ಟಿ. ರವಿ, ಶಾಸಕ

ಹೌದು. ನಿಮಗೆ ಸೋಲೇ ಗತಿ.

---------------------

ಯಡಿಯೂರಪ್ಪರ ಹೆಣ ಹೊರಲು ಬಿಜೆಪಿಯ ನಾಲ್ವರು ನಾಯಕರು ಸಿದ್ಧರಾಗುತ್ತಿದ್ದಾರೆ. - ಸಿದ್ದನಗೌಡ ಪಾಟೀಲ್, ಸಿಪಿಐ ನಾಯಕ 

ಅವರ ಜೊತೆಗೆ ರಾಜ್ಯ ಬಿಜೆಪಿಯ ಹೆಣವನ್ನು ಕೂಡ ಹೊರಲಿದ್ದಾರೆ.

---------------------

ಸ್ಮಾರ್ಟ್ ಪ್ರಧಾನಿಗೆ ತಕ್ಕಂತೆ ಸ್ಮಾರ್ಟ್ ಸಿಎಂ ಆಗಿ ಯಡಿಯೂರಪ್ಪರನ್ನು ಆಯ್ಕೆ ಮಾಡಬೇಕಿದೆ - ಅನಂತ ಕುಮಾರ್, ಕೇಂದ್ರ ಸಚಿವ

ಅದಕ್ಕೆ ತಮ್ಮ ಬಣ ಅವಕಾಶ ಕೊಡಬೇಕು.

---------------------

ಉತ್ತರ ಕೊರಿಯ ಅಧ್ಯಕ್ಷ ಕಿಮ್ ಜಾಂಗ್ ಉನ್ ಜೊತೆ ಮಾತುಕತೆಗೆ ಸಿದ್ಧ. - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ

ಕೈಯಲ್ಲಿ ಅಣುಬಾಂಬ್ ಇಟ್ಟುಕೊಂಡು ಮಾತುಕತೆಯೇ?

---------------------

ಇನ್ನೆರಡು ಬಾರಿ ಯೋಗಿ ಆದಿತ್ಯನಾಥ್ ಕರ್ನಾಟಕಕ್ಕೆ ಬಂದರೆ ಸಿಎಂ ಸಿದ್ದರಾಮಯ್ಯ ಜೈಶ್ರೀರಾಮ್ ಎಂದು ಘೋಷಣೆ ಕೂಗಿದರೂ ಆಶ್ಚರ್ಯವೇನಿಲ್ಲ. - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಹೇ ರಾಮ್ ಎಂಬ ಗಾಂಧಿಯ ಕೊನೆಯ ಉದ್ಗಾರ ಅದು.

---------------------

ಸಿಎಂ ಸಿದ್ದರಾಮಯ್ಯರಿಂದ ಬಿಜೆಪಿ ಮತ್ತು ಆರೆಸ್ಸೆಸ್‌ನ್ನು ಬಗ್ಗುಬಡಿಯಲು ಸಾಧ್ಯವಿಲ್ಲ - ಕೆ.ಎಸ್. ಈಶ್ವರಪ್ಪ, ಬಿಜೆಪಿ ನಾಯಕ

ಅದಕ್ಕಾಗಿ ಅದರ ಹೊಣೆಯನ್ನು ನೀವೇ ವಹಿಸಿದಂತಿದೆ.

---------------------

ಭಾರತ ಹಾಗೂ ಪಾಕಿಸ್ತಾನದ ಪ್ರಧಾನಿಗಳು ಸ್ನೇಹಿತರಾಗಬೇಕು - ಮೆಹಬೂಬ ಮುಫ್ತಿ, ಜಮ್ಮು ಕಾಶ್ಮೀರ ಮುಖ್ಯಮಂತ್ರಿ

ಪ್ರಧಾನಿಗಳು ಸ್ನೇಹಿತರಾಗಿಯೇ ಇದ್ದಾರೆ. ಆದರೆ ದೇಶಗಳನ್ನು ಸ್ನೇಹಿತರಾಗಿಸಲು ಅವಕಾಶ ನೀಡುತ್ತಿಲ್ಲ.

---------------------

ಸಾಲ ಮಾಡಿ ಆಡಳಿತ ನಡೆಸುವವನು ನಾನಲ್ಲ - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಅಂದರೆ ರಾಜ್ಯವನ್ನು ಮಾರಿಯೇ ಆಡಳಿತ ನಡೆಸುವ ಹುನ್ನಾರವೇ ?

---------------------

ನನಗೆ ಕಳೆದುಕೊಳ್ಳಲು ಏನೂ ಇಲ್ಲ - ಉಪೇಂದ್ರ, ಕೆಪಿಜೆಪಿ ಸಂಸ್ಥಾಪಕ

ಕಳೆದುಕೊಳ್ಳುವುದಕ್ಕೆ ಮತದಾರರಿದ್ದಾರಲ್ಲ, ನಿಮಗೇನು ಚಿಂತೆ?

---------------------

ನನ್ನಿಂದ ಬೆಳೆದವರೇ ನನ್ನನ್ನು ಮೂಲೆಗುಂಪು ಮಾಡಿದರು - ಜನಾದರ್ನ ಪೂಜಾರಿ, ಕಾಂಗ್ರೆಸ್ ನಾಯಕ

ಕಲ್ಲಡ್ಕ ಪ್ರಭಾಕರ ಭಟ್ಟರ ವಿರುದ್ಧ ಇಂತಹದೊಂದು ಆರೋಪವೇ?

---------------------

ನ್ಯೂಟನ್‌ಗಿಂತ ಮೊದಲೇ ಗುರುತ್ವ ನಿಯಮ ಕಂಡುಹಿಡಿದದ್ದು ಎರಡನೇ ಬ್ರಹ್ಮಗುಪ್ತ - ವಾಸುದೇವ್ ದೇವ್ನಾನಿ, ರಾಜಸ್ಥಾನ ಸಚಿವ

ಬಹುಷಃ ನ್ಯೂಟನ್ ಅದನ್ನು ಗುಪ್ತವಾಗಿ ಕದ್ದಿರಬೇಕು.

---------------------

ಎಚ್‌ಡಿಕೆ ಒಬ್ಬ ಹಿಟ್ ಆ್ಯಂಡ್ ರನ್ ಸ್ಪೆಷಲಿಷ್ಟ್ - ಜಗದೀಶ್ ಶೆಟ್ಟರ್, ಬಿಜೆಪಿ ನಾಯಕ

ರಾಗಿ ಹಿಟ್ ತಿಂದ ಜೀವ ಅದು.

---------------------

ಗೋವು ಸಾಯುವವರೆಗೆ ಅದು ನಮ್ಮ ಬಹಳ ದೊಡ್ಡ ಆಸ್ತಿ - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ

ಸತ್ತ ನಂತರವೂ ಮಾಂಸಾಹಾರಿಗಳಿಗೆ ಅದು ಆಸ್ತಿಯೇ.

---------------------

ನಾನು ಬೇವರ್ಸಿ ಅಲ್ಲ - ಅನಿಲ್‌ರಾಜ್, ಶಾಸಕ

ಇಷ್ಟು ತಡವಾಗಿ ನಿಮಗೆ ಗೊತ್ತಾಯಿತೇ?

---------------------

ನಮ್ಮದು ಎಲ್ಲರನ್ನೂ ಒಳಗೊಂಡ ಹಿಂದುತ್ವ - ಡಾ.ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

ಸಂದರ್ಭ ಬಂದಾಗ ಆರೆಸ್ಸೆಸ್‌ನ್ನೂ ಬಳಸಿಕೊಳ್ಳುತ್ತೀರಿ ಎಂದಾಯಿತು.

---------------------

ಬುಟ್ಟಿಯಲ್ಲಿ ಹಾವಿಲ್ಲದಿದ್ದರೂ ಯಡಿಯೂರಪ್ಪ ಪುಂಗಿ ಊದುತ್ತಿದ್ದಾರೆ - ಸಿದ್ದರಾಮಯ್ಯ, ಮುಖ್ಯಮಂತ್ರಿ

ಹಾವು ಈಶ್ವರಪ್ಪರ ಪ್ಯಾಂಟೊಳಗೆ ಸೇರಿಕೊಂಡಿದೆ.

---------------------

ಶತಮಾನಗಳ ಇತಿಹಾಸ ಹೊಂದಿರುವ ಕಾಂಗ್ರೆಸನ್ನು ಅಳಿಸಿಹಾಕುವವರು ಯಾರೂ ಹುಟ್ಟಿಲ್ಲ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ

ಕಾಂಗ್ರೆಸ್‌ನ ನಾಯಕರು ಈವರೆಗೆ ಮಾಡಿದ್ದೇನು ಮತ್ತೆ?

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...