×
Ad

ರೈತರು ಕಾರ್ಮಿಕರಾಗಿ ನಗರ ಪ್ರದೇಶಗಳಿಗೆ ಮುಖ ಮಾಡುತ್ತಿರುವುದು ದುರಂತ: ಸೇನಾನಿ ವಿಷಾದ

Update: 2018-01-15 22:23 IST

ಮೂಡಿಗೆರೆ, ಜ.15: ಕೃಷಿ ಕ್ಷೇತ್ರಕ್ಕೆ 10 ಸಾವಿರ ವರ್ಷ ಇತಿಹಾಸ ಇದ್ದರೂ ಸಹ ಇಂದಿನ ಆಧುನಿಕ ಯುಗದವರೆಗೂ ರೈತರ ಸಂಕಷ್ಟ ಕೊನೆಗೊಳ್ಳದೇ ಕೃಷಿಯನ್ನೇ ಬಿಟ್ಟು, ಕಾರ್ಮಿಕರಾಗಿ ಮಹಾನಗರಗಳಿಗೆ ತೆರಳುತ್ತಿರುವುದು ರೈತ ಸಮುದಾಯದ ದುರಂತ ಎಂದು ಖ್ಯಾತ ಪರಿಸರ ಪ್ರೇಮಿ ಚಿಂತಕ ಸೇನಾನಿ ವಿಷಾಧ ವ್ಯಕ್ತಪಡಿಸಿದರು.

ಅವರು ಸೋಮವಾರ ಹಳಸೆಯ ದಿ ಕಾಫಿ ಕೋರ್ಟ್‍ನಲ್ಲಿ ದೇವವೃಂದ ಸಂಪಾದಕತ್ವದ ಆರಂಭ ರೈತರ ದ್ವಿಮಾಸಿಕ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಹಿಂದಿನ ಮಹಾರಾಜರ ಹಾಗೂ ಬ್ರಿಟೀಷರ ಕಾಲದಲ್ಲಿ ರೈತರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿತ್ತು. ಕೃಷಿಕರು ಶತಮಾನಗಳ ಹಿಂದೆಯೇ ನಿರಂತರವಾಗಿ ಶೋಷಣೆಗೊಳಗಾಗುತ್ತಿದ್ದರು ಎಂದು ನುಡಿದರು.

ರೈತರಿಂದ ಹೆಚ್ಚು ತೆರಿಗೆ ವಸೂಲಿ ಮಾಡಲಾಗುತ್ತಿತ್ತು. ದೇಶದ ಎಲ್ಲಾ ಬಹುತೇಕ ರಾಷ್ಟ್ರೀಯ ಸ್ಮಾರಕವನ್ನು ರೈತರ ಹಣದಲ್ಲೇ ಕಟ್ಟಿದ್ದರು. ಎಲ್ಲಿಯೂ ರೈತರ ಹೆಸರನ್ನು ಬಳಸಲಿಲ್ಲ. ಪ್ರಜಾಪ್ರಭುತ್ವದ ನಂತರ ದೇಶದಲ್ಲಿ 13 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಯಂತಹ ಪ್ರಕರಣಗಳು ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಅತೀ ಹೆಚ್ಚಾಗಿ ನಡೆಯುತ್ತಿದೆ. ಇದಕ್ಕೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುವ ಅಗತ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಾಹಿತಿ ದಿವಂಗತ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಧರ್ಮಪತ್ನಿ ರಾಜೇಶ್ವರಿ ತೇಜಸ್ವಿ ಮಾತನಾಡಿ, ಕೃಷಿ ಕ್ಷೇತ್ರದ ಪತ್ರಿಕೆಗಳು ಬೆಳೆಗಾರರಿಗೆ ಸಂಪೂರ್ಣ ಮಾಹಿತಿಯನ್ನು ನೀಡುವಂತಿದ್ದರೆ, ಅದರಂತೆ ರೈತರು ತಮ್ಮ ಜಮೀನುಗಳಲ್ಲಿ ಫಲವತ್ತಾಗಿ ಬೆಳೆ ಬೆಳೆದರೆ ಸರಕಾರದಿಂದ ಸಹಾಯಧನ ರೈತರಿಗೆ ಅವಶ್ಯಕತೆ ಇಲ್ಲದಂತಾಗುತ್ತದೆ. ಸಹಾಯಧನಕ್ಕಾಗಿ ಕಚೇರಿಯಿಂದ ಕಚೇರಿಗೆ ರೈತರು ಅಲೆದಾಡುವುದು ತಪ್ಪುತ್ತದೆ ಎಂದು ತಿಳಿಸಿದರು. 

ಮಾಧ್ಯಮಗಳು ಸಮಾಜದ ಕೈಗನ್ನಡಿ ಇದ್ದಂತೆ. ಓದುಗರಿಗೆ ಆಕರ್ಷಣೆ ನೀಡುವ ಜೊತೆಗೆ ಪತ್ರಿಕೆಗಳ ಲೇಖನದಿಂದ ಪರಿಸರವನ್ನು ಉಳಿಸುವಂತಾಗಬೇಕು. ಪ್ರಕೃತಿ ಉಳಿದರೆ ಜನರಿಗೆ ಆರೋಗ್ಯ ಹಾಗೂ ಬೆಳೆಯುವ ಬೆಳೆಗಳು ಸಮೃದ್ಧಿಯಾಗಿ ರೈತರನ್ನು ಸಂಕಷ್ಟದಿಂದ ಪಾರು ಮಾಡುವುದರೊಂದಿಗೆ ಜನರಿಗೂ ಉತ್ತಮ ಆಹಾರ ಪದಾರ್ಥ ದೊರೆಯಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆರಂಭ ರೈತ ಸಂಚಿಕೆಯ ಸಂಪಾದಕ ದೇವವೃಂದ ಜಯರಾಂ ಮಾತನಾಡಿ, ಬೆಳೆಗಳ ನಿರ್ವಹಣೆಗೆ ಸಹಕಾರಿಯಾಗಲೆಂದು ಆರಂಭ ಎಂಬ ದ್ವಿಮಾಸಿಕ ಸಂಚಿಕೆಯನ್ನು ಹೊರ ತರಲಾಗಿದೆ. ಇದರಲ್ಲಿ ಮೌಲ್ಯಾಧಾರಿತ ಬೆಳೆ ವಿಧಾನ, ಕೃಷಿ ಸಾಮಾಜಿಕ ವಿಚಾರ ಮಂಥನ ಸಂಗ್ರಹಿಸಿ ಸರ್ವಕಾಲಿಕ ವಿಚಾರಗಳ ಲೇಖನವಾಗಿ ರೈತರ ಕೈಗೆ ನೀಡಿದಾಗ ರೈತರಿಗೆ ಜೀವ ಜಗತ್ತಿನ ಗಡಿಯಾರವಾಗಿ ಬಳಸಿಕೊಳ್ಳಬಹುದು ಎಂದು ತಿಳಿಸಿದರು.

ಬೆಳೆಗಾರ ಪತ್ರಿಕೆ ಸಂಪಾದಕ ಸುರೇಂದ್ರ, ಕೃಷಿಕ ಪತ್ರಿಕೆ ಸಂಪಾದಕ ಆ.ರಾ.ಸುಚೇತನಾ, ಧರ್ಪಣ ಪತ್ರಿಕೆ ಸಂಪಾದಕ  ಪ್ರಸನ್ನ ಗೌಡಹಳ್ಳಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಕೃಪಾಕರ, ಮುಖಂಡರಾದ ಮಧುಚಂದನ್, ಧರ್ಮರಾಜ್, ಡಾ.ಅಂಕೇಗೌಡ, ನಂದಿತಾ ಧರ್ಮರಾಜ್, ಸಿ.ಸುರೇಶ್, ಲಾವಣ್ಯ ಮೋಹನ್, ಸುರೇಶ್ ಚಂದ್ರದತ್ತ, ವಿವೇಕ್ ಪುಣ್ಯಮೂರ್ತಿ, ರಾಘವೇಂದ್ರ, ದಿವ್ಯಪ್ರಸಾದ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News