ಮುಂದಿನ ರಾಜ್ಯ ಬಜೆಟ್‌ನಲ್ಲಿ ಬೆಳಕಿನ ಭಾಗ್ಯ ಘೋಷಣೆ

Update: 2018-01-17 17:40 GMT

ಪೊನ್ನಂಪೇಟೆ, ಜ.17: ಮುಂದಿನ ಫೆಬ್ರವರಿಯಲ್ಲಿ ಮಂಡನೆಯಾಗುವ ರಾಜ್ಯ ಬಜೆಟ್‌ನಲ್ಲಿ ರಾಜ್ಯದ ಬಡ ಜನತೆಗಾಗಿ ಬೆಳಕಿನ ಭಾಗ್ಯ ಯೋಜನೆಯನ್ನು ಘೋಷಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದು ವಿಶೇಷ ಮನವಿ ಸಲ್ಲಿಸಲಾಗುವುದು ಎಂದು ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪಹೇಳಿದ್ದಾರೆ.

ತಮ್ಮ ಬೆಳಕಿನ ಭಾಗ್ಯ ಯೋಜನೆಯಡಿ ಜಿಲ್ಲೆಯ ಎಲ್ಲಾ ಗ್ರಾಪಂ ವ್ಯಾಪ್ತಿಯ ಕಡುಬಡವರಿಗೆ ವಿತರಿಸಲಾಗುತ್ತಿರುವ ಸೋಲಾರ್ ದೀಪಗಳನ್ನು ತಮ್ಮ 40 ಮತ್ತು 41ನೇ ಕಾರ್ಯಕ್ರಮವಾಗಿ ಮಾಯಮುಡಿ ಮತ್ತು ಕಿರುಗೂರು ಗ್ರಾಪಂ ವ್ಯಾಪ್ತಿಯ ಬಡ ಫಲಾನುಭವಿಗಳಿಗೆ ಬುಧವಾರ ಮಾಯಮುಡಿ ಗ್ರಾಪಂ ಸಭಾಂಗಣದಲ್ಲಿ ವಿತರಿಸಿ ಅವರು ಮಾತನಾಡಿದರು.

ಕೊಡಗಿನ ಬಡಜನರ ಮನೆಯ ಕತ್ತಲನ್ನು ಹೋಗಲಾಡಿಸಲು ಜಾರಿಗೊಂಡಿರುವ ಬೆಳಕಿನ ಭಾಗ್ಯ ಯೋಜನೆಗೆ ಕೇಂದ್ರ ಸರಕಾರದ ನಯಾಪೈಸೆಯ ಅನುದಾನವಿಲ್ಲ. ಈ ಯೋಜನೆಯನ್ನು ಜಾರಿಗೊಳಿಸಲು ತಮಗೆ ಸಿಎಂ ಸಿದ್ದರಾಮಯ್ಯ ಅವರ ಜನಪರ ಭಾಗ್ಯ ಯೋಜನೆಗಳೇ ಪ್ರೇರಣೆ ಎಂದು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪಹೇಳಿದ್ದಾರೆ.

ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆಯಾಗಿ ಕಾಟಾಚಾರಕ್ಕೆ ರಾಜ್ಯ ಪ್ರವಾಸ ಮಾಡಿ ಸಮಯ ವ್ಯರ್ಥಗೊಳಿಸಲು ತಾನು ಸಿದ್ಧಳಿಲ್ಲ. ಬದಲಿಗೆ ತನಗೆ ರಾಜಕೀಯವಾಗಿ ಆಶ್ರಯ ನೀಡಿದ ಜಿಲ್ಲೆಯ ಬಡಜನರಿಗೆ ಏನನ್ನಾದರೂ ಮಾಡಬೇಕೆಂಬ ಹಂಬಲದಿಂದ ಬಡವರ ಮನೆ ಬೆಳಗಲು ಜರ್ಮನಿ ನಿರ್ಮಿತ ಅತ್ಯಾಧುನಿಕ ಸೋಲಾರ್ ಮನೆದೀಪವನ್ನು ನೀಡುವ ಬೆಳಕಿನ ಭಾಗ್ಯ ಯೋಜನೆಯನ್ನು ಸ್ವಂತ ಆಸಕ್ತಿಯಿಂದ ಜಾರಿಗೆ ತರಲಾಗಿದೆ ಎಂದು ಪದ್ಮಿನಿ ಪೊನ್ನಪ್ಪತಿಳಿಸಿದರು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಒಟ್ಟು 58 ಗ್ರಾಪಂ ಮತ್ತು 2 ಪಟ್ಟಣ ಪಂಚಾಯತ್ ವ್ಯಾಪ್ತಿಯ ಫಲಾನುಭವಿಗಳಿಗೆ ಸೋಲಾರ್ ಮನೆದೀಪ ನೀಡಲು ಉದ್ದೇಶಿಸಲಾಗಿದೆ. ಈಗಾಗಲೇ 41 ಗ್ರಾಪಂ ವ್ಯಾಪ್ತಿಯ ಫಲಾನುಭವಿಗಳಿಗೆ ವಿತರಣಾ ಕಾರ್ಯ ಪೂರ್ಣಗೊಂಡಿದೆ ಎಂದು ಹೇಳಿದ ಪದ್ಮಿನಿ ಪೊನ್ನಪ್ಪ, ಖ್ಯಾತ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ನೇತೃತ್ವದ ಸ್ಪ್ರೆಡ್ಡಿಂಗ್ ಹ್ಯಾಪಿನೆಸ್ ಫೌಂಡೇಶನ್ ಮತ್ತು ಸ್ಲೈಡರ್ ಕಂಪೆನಿ ವತಿಯಿಂದ ತಮ್ಮ ಪದ್ಮಿನಿ ಪೊನ್ನಪ್ಪ ಪೌಂಡೇಷನ್ ಮೂಲಕ ಬೆಳಕಿನ ಭಾಗ್ಯ ಯೋಜನೆಯನ್ನು ಫಲಾನುಭವಿಗಳಿಗಾಗಿ ಜಾರಿಗೊಳಿಸಲಾಗುತ್ತಿದೆ. ಇದಕ್ಕಾಗಿ ಜರ್ಮನಿಯಿಂದ 1,500 ಸೋಲಾರ್ ಮನೆದೀಪ ಬಂದಿವೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಜಿಪಂ ಸದಸ್ಯ ಬಿ.ಎನ್. ಪ್ರಥ್ಯು ಮಾತನಾಡಿ, ಬೆಳಕಿನ ಭಾಗ್ಯ ಯೋಜನೆಯಿಂದ ತಾಲೂಕಿನ ಬಹಳಷ್ಟು ಬಡವರ ಮನೆಯ ಕತ್ತಲು ದೂರವಾಗಿದೆ. ಇದಕ್ಕೆ ಪದ್ಮಿನಿ ಪೊನ್ನಪ್ಪ ಅವರ ವಿಶೇಷ ಪ್ರಯತ್ನ ಕಾರಣ. ಈಗಾಗಲೇ ಮಾಯಮುಡಿ ಗ್ರಾಪಂ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗಾಗಿ ಸರಕಾರ 37 ಲಕ್ಷ ರೂ. ಅನುದಾನ ಮಂಜೂರಾತಿ ನೀಡಿದೆ ಎಂದರು.

ಕಾರ್ಯಕ್ರಮದಲ್ಲಿ ಮಾಯಮುಡಿ ಗ್ರಾ.ಪಂ. ವ್ಯಾಪ್ತಿಯ 22 ಮತ್ತು ಕಿರುಗೂರು ಗ್ರಾ.ಪಂ. ವ್ಯಾಪ್ತಿಯ 17 ಫಲಾನುಭವಿಗಳಿಗೆ ಸೋಲಾರ್ ಮನೆದೀಪಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಯಮುಡಿ ಗ್ರಾಪಂ ಅ್ಯಕ್ಷೆ ಭವಾನಿ ಮೋಹನ್ ವಹಿಸಿದ್ದರು.

ಸಮಾರಂಭದಲ್ಲಿ ತಾಪಂ ಮಾಜಿ ಸದಸ್ಯ ಮತ್ತು ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಎಸ್. ಟಾಟು ಮೊಣ್ಣಪ್ಪ, ತಾಪಂ ಸದಸ್ಯೆ ಆಶಾ ಜೇಮ್ಸ್, ಮಾಯಮುಡಿ ಗ್ರಾಪಂ ಉಪಾಧ್ಯಕ್ಷೆ ಗೌರಿರಾಮ, ಸದಸ್ಯರಾದ ಆಪಟ್ಟಿರ ಸೌಮ್ಯ ಮೊಣ್ಣಪ್ಪ, ವಿಠಲ್ ನಾಚಯ್ಯ, ಸಿ.ಕೆ. ಚಿಣ್ಣಪ್ಪ, ಶಾಂತ, ಬುಶ್ರ, ಟಿ.ವಿ. ಶ್ರೀಧರ್, ಮಣಿಕುಂಞಿ, ಮಂಜುಳ, ಕಿರುಗೂರು ಗ್ರಾಪಂ ಸದಸ್ಯ ಪಿ.ಕೆ. ಗಿರೀಶ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಕೆ.ಎಂ. ಅಬ್ದುಲ್ ರೆಹಮಾನ್ (ಬಾಪು), ಕಿರುಗೂರು ವಲಯ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ. ಬೋಪಣ್ಣ, ಕಾಂಗ್ರೆಸ್ ಮುಖಂಡರಾದ ಎಸ್.ಎಂ. ವಿಶ್ವನಾಥ್, ಮಾಂಗೇರ ಪೊನ್ನಪ್ಪ, ಕಾಳಪಂಡ ರಾಜ ಮೊದಲಾದವರು ಪಾಲ್ಗೊಂಡಿದ್ದರು. ಹರೀಶ್ ಸ್ವಾಗತಿಸಿದರು. ಸೌಮ್ಯ ಮೊಣ್ಣಪ್ಪವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News