ಮಡಿಕೇರಿ: ಕಳವು ಪ್ರಕಣದ ನಾಲ್ವರು ಆರೋಪಿಗಳ ಬಂಧನ

Update: 2018-01-18 10:00 GMT

ಮಡಿಕೇರಿ, ಜ.18 : ಎರಡು ಪ್ರತ್ಯೇಕ ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿರುವ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮುಕ್ಕೋಡ್ಲು ಗ್ರಾಮದ ಪದ್ಮನಾಭ ಅವರ ತೋಟದಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದ ಬೀಟಿ ಮರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗಳಾದ ಸುಂಟಿಕೊಪ್ಪದ ಲತೀಫ್, ಬೋಯಿಕೇರಿಯ ಸುಜಿತ್ ಎಂಬವರನ್ನು ಪೊಲೀಸರು ಬಂಧಿಸಿದ್ದು, 3 ಲಕ್ಷ ರೂ. ಮೌಲ್ಯದ ಬೀಟಿ ಮರ ಹಾಗೂ ಕೃತ್ಯಕ್ಕೆ ಬಳಸಿದ್ದ 2 ಲಕ್ಷ ರೂ. ಮೌಲ್ಯದ ಕಾರನ್ನು ವಶಪಡಿಸಿಕೊಂಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿ ದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಮತ್ತೊಂದು ಪ್ರಕರಣದಲ್ಲಿ ಕಡಗದಾಳು ಗ್ರಾಮದ ಮುತ್ತಮ್ಮ ಎಂಬವರ ಮನೆಗೆ ನುಗ್ಗಿದ ದುಷ್ಕರ್ಮಿಗಳು 1 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದರು. ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ನಿವಾಸಿಗಳಾದ ಕೃಷ್ಣ ಹಾಗೂ ಯತೀಶ್ ಎಂಬವರುಗಳನ್ನು ಬಂಧಿಸಿ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಈ ಎರಡು ಪ್ರತ್ಯೇಕ ಪ್ರಕರಣದ ಆರೋಪಿಗಳ ಪತ್ತೆಗಾಗಿ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಪಿ.ರಾಜೇಂದ್ರ ಪ್ರಸಾದ್ ಅವರ ನಿರ್ದೇಶನದಂತೆ ಪೊಲೀಸ್ ಉಪ ಅಧೀಕ್ಷಕ ಸುಂದರ್ ರಾಜ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಬಿ.ಆರ್. ಪ್ರದೀಪ್, ಉಪ ನಿರೀಕ್ಷಕ ವಿ. ಚೇತನ್, ಪ್ರೊಬೇಷನರಿ ಪಿ.ಎಸ್.ಐ. ಶ್ರೀನಿವಾಸ್ ನೇತೃತ್ವದಲ್ಲಿ ಠಾಣೆ ಸಿಬ್ಬಂದಿಗಳಾದ ಎಎಸ್‌ಐ ಅಲೆಗ್ಸಾಂಡರ್, ಹೆಡ್‌ಕಾನ್ಸ್‌ಟೇಬಲ್ ಇಬ್ರಾಹಿಂ, ವಿಜಯ್‌ ಕುಮಾರ್, ಕಾನ್ಸ್‌ಟೇಬಲ್‌ಗಳಾದ ಶಿವರಾಜ್, ಸತೀಶ್, ದಿನೇಶ್, ಪ್ರೇಮ್‌ ಕುಮಾರ್ ಹಾಗೂ ಚಾಲಕರಾದ ಸುನಿಲ್, ಅರುಣ್ ಕುಮಾರ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News