ಬಿಜೆಪಿ ಪರಿವರ್ತನಾ ಯಾತ್ರೆಗೆ ಎಸ್.ಎಂ.ಕೃಷ್ಣ ಸಾಥ್ :ನರೇಂದ್ರ ಮೋದಿಯ ಗುಣಗಾನ

Update: 2018-01-19 16:59 GMT

ಮಂಡ್ಯ/ಮದ್ದೂರು, ಜ.19: ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರ್ಪಡೆಗೊಂಡ ನಂತರ ಗೌಣವಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಮೊದಲ ಬಾರಿಗೆ ತನ್ನ ತವರು ಮದ್ದೂರಿನಲ್ಲಿ ಗುರುವಾರ ಬಿಜೆಪಿಯ ವೇದಿಕೆ ಹಂಚಿಕೊಂಡರು.

ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಅಧಿಕೃತವಾಗಿ ತಮ್ಮ ಪ್ರಥಮ ಭಾಷಣ ಮಾಡಿದ ಕೃಷ್ಣ, ನರೇಂದ್ರಮೋದಿ, ಅಮಿತ್ ಶಾ ಸೇರಿದಂತೆ ಬಿಜೆಪಿ ಸರಕಾರವನ್ನು ಭರಪೂರ ಶ್ಲಾಘಿಸಿ ಬಿಜೆಪಿ ಅಧಿಕಾರಕ್ಕೆ ತರಲು ಜತೆ ಜತೆಯಲ್ಲಿ ಹೆಜ್ಜೆ ಹಾಕುವುದಾಗಿ ತಿಳಿಸಿದರು.

ರಾಜ್ಯದಲ್ಲಿರುವ ತನ್ನ ಅನುಯಾಯಿಗಳು ಬಿಜೆಪಿ ಬಲಪಡಿಸಲು ಕಟಿ ಬದ್ದರಾಗಬೇಕು. ಈ ಮೂಲಕ ಮುಂದಿನ ಮುಖ್ಯಮಂತ್ರಿಯಾಗಲಿರುವ ಯಡಿಯೂರಪ್ಪ ಅವರ ಕೈಬಲಪಡಿಸಬೇಕು. ರಾಜ್ಯದಲ್ಲೂ ಕೇಂದ್ರದ ನರೇಂದ್ರಮೋದಿಯವರ ಸರಕಾರದ ಪ್ರತಿಬಿಂಬ ಕಾಣಬೇಕು ಎಂದು ಹೇಳಿದರು.

ದೇಶದಲ್ಲಿ ದೊಡ್ಡ ಪರಿವರ್ತನೆಯಾಗಿದೆ:
2014 ಇಸವಿಯಲ್ಲಿ ಭಾರತ ದೇಶ ದೊಡ್ಡ ಪರಿವರ್ತನೆಯನ್ನು ಕಂಡಿತು. ಈ ಬದಲಾವಣೆಯ ಹರಿಕಾರರಾಗಿ, ಕಾರಣೀಭೂತರಾಗಿ, ಶ್ರೀಸಾಮಾನ್ಯನ ಆಶೀರ್ವಾದದಿಂದ ನರೇಂದ್ರಮೋದಿ ದೇಶದ ಪ್ರಧಾನಿಯಾಗಿ ನಮಗೆ ಒದಗಿ ಬಂದರು ಎಂದು ಕೃಷ್ಣ ಹೇಳಿದರು.

ಮೋದಿ ಅವರು ಪ್ರಧಾನಿಯಾದ ಮೇಲೆ ನಿಷ್ಕಳಂಕವಾದಂತಹ, ಪಾರದರ್ಶಕತೆಯಿಂದ ಕೂಡಿರುವ, ದೇಶದ ಬೆಳವಣಿಗೆಗೆ ಪೂರಕವಾದ ಒಂದು ಆಡಳಿತ ಕೊಡುತ್ತಾ ಬಂದಿದ್ದಾರೆ. ಇತಿಹಾಸವನ್ನು ಮುಂದೆ ಬರೆಯುವವರು ಮೋದಿಯವರಿಂದ ಎಂತಹ ಪರಿವರ್ತನೆ ದೇಶದಲ್ಲಿ ಆಗಿದೆ, ಆಗುತ್ತಾ ಇದೆ, ಆಗುವುದು ಬಹಳಷ್ಟಿದೆ ಎಂಬುದನ್ನು ದಾಖಲಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟರು.

ದೇಶದ ಜನ ಭ್ರಷ್ಟತೆಯಿಂದ, ಭ್ರಷ್ಟಾಚಾರದಿಂದ ಬೇಸತ್ತು ಹೋಗಿದ್ದರು. ಹಿಂದೆ ಕಾಂಗ್ರೆಸ್‍ನ ಆಡಳಿತದಲ್ಲಿ ಕಂಡಂತಹ ಆರ್ಥಿಕ ವ್ಯವಸ್ಥೆಗೆ ಸಂಬಂಧಪಟ್ಟಂತಹ ಹಲವಾರು ಕೆಟ್ಟ ಪರಿಸ್ಥಿತಿಯನ್ನು ನಾವು ನೋಡಿದೆವು. ಜನರಿಗೆ ಅದರಿಂದ ಮುಕ್ತಿ ಬೇಕಾಗಿತ್ತು. ಆ ಮುಕ್ತಿಯನ್ನು ಕಾಣಲು ಮಾನ್ಯ ನರೇಂದ್ರಮೋದಿಯವರನ್ನು ಈ ದೇಶದ ಜನರೇ ಸೃಷ್ಟಿ ಮಾಡಿದರು ಎಂಬುದು ಅತಿಶಯವಲ್ಲ ಎಂದು ಅವರು ನುಡಿದರು.

ಇಂದು ದೇಶ ವಿಶ್ವದ ಸಮುದಾಯದಲ್ಲಿ ದೊಡ್ಡ ಹೆಸರನ್ನು ಮಾಡಿದೆ. ನಾನೂ ವಿದೇಶಾಂಗ ಸಚಿವನಾಗಿ ಹತ್ತಾರು ದೇಶ ಸುತ್ತಿಬಂದಿದ್ದೇನೆ. ಆದರೆ, ಕಳೆದ ಮೂರು ವರ್ಷದಲ್ಲಿ ಭಾರತಕ್ಕೆ ಸಿಕ್ಕಿರುವ ಜನಮನ್ನಣೆ, ಅದರಲ್ಲೂ ಮೋದಿಗೆ ಸಿಕ್ಕಿರುವ ಪ್ರಾಮುಖ್ಯತೆಯನ್ನು ಪ್ರತಿಯೊಬ್ಬ ಭಾರತೀಯನು ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ಬೆಳವಣಿಗೆಯಾಗಿದೆ ಎಂದರು.

ನರೇಂದ್ರಮೋದಿಯವರು ಈ ದೇಶಕ್ಕೆ ಕೊಟ್ಟಿರುವ ಆಡಳಿತದ ಪ್ರತಿಬಿಂಬವನ್ನು ಮುಂದೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿರುವ ಬಿಜೆಪಿ ಸರಕಾರವೂ ಕೊಡಬೇಕು. ಅದು ಅನಿವಾರ್ಯ ಕೂಡ. ಮುಂದೆ ರಾಜ್ಯದ ಮುಖ್ಯಮಂತ್ರಿ ಆಗುವ ಯಡಿಯೂರಪ್ಪ ಅವರು ನರೇಂದ್ರಮೋದಿ ಆಡಳಿತದ ಪ್ರತಿಬಿಂಬದ ಆಡಳತದ ಸಿದ್ದಾಂತಕ್ಕೆ ಕಟ್ಟುಬೀಳಬೇಕಾಗುತ್ತದೆ ಎಂದು ಅವರು ಸಲಹೆ ನೀಡಿದರು.

ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ:
ನಂತರ ಮಾತನಾಡಿದ ಯಡಿಯೂರಪ್ಪ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ನಿತ್ಯ ಕೊಲೆ, ಸುಲಿಗೆ ನಡೆಯುತ್ತಿವೆ. ಎರಡು ದಿನಕ್ಕೊಮ್ಮೆ ದಲಿತ ಮಹಿಳೆ, ಮೂರು ದಿನಕ್ಕೊಮ್ಮೆ ಅಮಾಯಕರ ಕೊಲೆ ನಡೆಯುತ್ತಿದೆ ಎಂಬುದಾಗಿ ವರದಿಯೇ ಹೇಳುತ್ತದೆ ಎಂದು ಆರೋಪಿಸಿದರು.

ತಾನು ಮುಖ್ಯಮಂತ್ರಿಯಾದ ಮೇಲೆ ನೀರಾವರಿಗೆ 1 ಲಕ್ಷ ಕೋಟಿ ರೂ. ಮೀಸಲಿಡುತ್ತೇನೆ. ಅದರಲ್ಲಿ ಸಿ.ಪಿ.ಯೋಗೇಶ್ವರ್ ಕೋರಿಕೆಯಂತೆ ಮಂಡ್ಯ ಜಿಲ್ಲೆಯ ನೀರಾವರಿ ಅಭಿವೃದ್ಧಿಗೆ 1,500 ಕೋಟಿ ರೂ. ಕೊಡುತ್ತೇನೆ ಎಂದು ಅವರು ಭರವಸೆ ನೀಡಿದರು.

ಬಿಜೆಪಿ ಪರಿವರ್ತನಾ ಯಾತ್ರೆಗೆ ರಾಜ್ಯಾದ್ಯಂತೆ ವ್ಯಾಪಕ ಜನಬೆಂಬಲ ವ್ಯಕ್ತವಾಗಿದ್ದು, ಜನರ ನಂಬಿಕೆ ಉಳಿಸಿಕೊಳ್ಳುತ್ತೇನೆ. ಎಸ್.ಎಂ.ಕೃಷ್ಣ ಅವರ ಸೇರ್ಪಡೆಯಿಂದ ಬಿಜೆಪಿಗೆ ದೊಡ್ಡ ಬಲ ಬಂದಂತಾಗಿದೆ. ಕೃಷ್ಣ ಅವರ ಅನುಯಾಯಿಗಳು ಬಿಜೆಪಿಗೆ ಬರಬೇಕು ಎಂದು ಅವರು ಮನವಿ ಮಾಡಿದರು.

ಶಾಸಕರಾದ ಸಿ.ಪಿ.ಯೋಗೇಶ್ವರ್, ಸಿ.ಟಿ.ರವಿ, ಮಾಜಿ ಸಂಸದೆ ತೇಜಸ್ವಿನಿ ರಮೇಶ್, ಮಾಜಿ ಶಾಸಕ ಡಿ.ಎಸ್.ವೀರಯ್ಯ, ಮೈಸೂರಿನ ಮಾದೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ನಾಗಣ್ಣಗೌಡ, ಮದ್ದೂರು ತಾಲೂಕು ಅಧ್ಯಕ್ಷ ಲಕ್ಷ್ಮಣ್‍ಕುಮಾರ, ಮಂಡ್ಯ್ ನಗರಾಧ್ಯಕ್ಷ ಎಚ್.ಆರ್.ಅರವಿಂದ್, ಮಲ್ಲಿಕಾರ್ಜುನ್, ವನಜಾಕ್ಷಿ ರಾಮರಾಜು, ಎಂ.ಸಿ.ಸಿದ್ದು, ಚಾಮನಹಳ್ಳಿ ಮಹೇಂದ್ರ, ಟೈರ್ ಗಿರೀಶ್, ರಘು, ವೀರಭದ್ರ, ಗುರುಮಲ್ಲೇಶ್, ಸೇರಿದಂತೆ ಹಲವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News