ದಾವಣಗೆರೆ : ಅಖಿಲ ಕರ್ನಾಟಕ ಕಾರ್ಮಿಕ ಕಟ್ಟಡ ಮತ್ತು ಇತರೆ ಕಾರ್ಮಿಕರ ಸಂಘದ ಕಾರ್ಯಕ್ರಮ
ದಾವಣಗೆರೆ,ಜ.21: ನಿತ್ಯವು ಶ್ರಮವಹಿಸಿ ದುಡಿಯುವ ಕಾರ್ಮಿಕರಿಗೆ ಸೌಲಭ್ಯ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವ ಅನಿವಾರ್ಯತೆ ಇದೆ ಎಂದು ಕೆಟಿಜೆ ನಗರದ ಪಿಎಸ್ಐ ಆರ್. ರಾಜು ಹೇಳಿದರು.
ನಗರದ ದುರ್ಗಾಂಬಿಕಾ ದೇವಸ್ಥಾನದಲ್ಲಿ ರವಿವಾರ ಅಖಿಲ ಕರ್ನಾಟಕ ಕಾರ್ಮಿಕ ಕಟ್ಟಡ ಮತ್ತು ಇತರೆ ಕಾರ್ಮಿಕರ ಸಂಘದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ದೇಶಕ್ಕೆ ದುಡಿದರೆ, ಕಾರ್ಮಿಕರು ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದಾರೆ. ಒಂದು ದೇಶ ಬಲಿಷ್ಠಗೊಳ್ಳಬೇಕಾದರೆ ಎಲ್ಲಾ ರೀತಿಯ ಸಹಕಾರ ಸೌಲಭ್ಯಗಳು ಅಗತ್ಯ. ಎಷ್ಟೇ ಹಣ ಇದ್ದರೂ ಸಹ ಕೆಲಸವಾಗದಿದ್ದರೆ ಅಭಿವೃದ್ಧಿ ಕಾಣಲು ಹೇಗೆ ಸಾಧ್ಯ?. ಆದ್ದರಿಂದ ಸರ್ಕಾರ ಮತ್ತು ಕಾರ್ಮಿಕರ ಸಂಘಟನೆಗಳು ಕಾರ್ಮಿಕರ ಒಳಿತನ್ನು ಬಯಸುವ ಮೂಲಕ ಸೌಲಭ್ಯ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಕಾರ್ಮಿಕರ ನಿತ್ಯದ ಶ್ರಮದಿಂದ ದೇಶವು ಅಭಿವೃದ್ಧಿಯಾಗುತ್ತಿದ್ದು, ಕಾರ್ಮಿಕರು ಕಟ್ಟಡದಲ್ಲಿ ಕೆಲಸ ಮಾಡುವ ವೇಳೆ ಸುರಕ್ಷತೆಯ ಬಗ್ಗೆ ಕಾಳಾಜಿ ಇರಬೇಕು. ಕಾರ್ಮಿಕರು ಯಾವುದೇ ರೀತಿಯ ಸುರಕ್ಷತೆ ಇಲ್ಲದೆ ಬಹುಮಹಡಿಯಲ್ಲಿ ಕೆಲಸ ಮಾಡುವುದರಿಂದ ಅಪಾಯ ಆಗುವ ಸಾಧ್ಯತೆ ಇರುತ್ತದೆ. ತಮ್ಮ ಜೀವಗಳನ್ನು ಸಂರಕ್ಷಣೆ ಮಾಡಿಕೊಳ್ಳುವುದಕ್ಕೆ ಮುನ್ನೆಚ್ಚರಿಕ ಕ್ರಮಗಳನ್ನು ಅನುಸರಿಸಬೇಕು ಎಂದು ಕಾರ್ಮಿಕರಿಗೆ ಕಿವಿ ಮಾತು ಹೇಳಿದರು.
ದುರ್ಗಾಂಬಿಕಾ ದೇವಸ್ಥಾನದ ಉಪಾಧ್ಯಕ್ಷ ಜಯಣ್ಣ ಮಾತನಾಡಿ, ಸರ್ಕಾರವು ಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯ ನೀಡಬೇಕು. ಸುಂದರ ನಗರವನ್ನಾಗಿಸುವುದಕ್ಕೆ ಕಷ್ಟಪಡುವ ಕಾರ್ಮಿಕರು ಶ್ರಮ ಜೀವಿಗಳು. ಸೂರು ಕಟ್ಟುವ ಕಾರ್ಮಿಕರಿಗೆ ಸ್ವಂತ ಸೂರು ಕಟ್ಟಿಕೊಳ್ಳಲು ಆಗುತ್ತಿಲ್ಲ. ಸರ್ಕಾರ ಕಾರ್ಮಿಕರಿಗೆ ಆಶ್ರಯ ಮನೆ ನೀಡಬೇಕು ಎಂದ ಅವರು, ಕಾರ್ಮಿಕರು ಹೋರಾಟದ ಮೂಲಕ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.
ದೇವಸ್ಥಾನದ ಧರ್ಮದರ್ಶಿ ಎಚ್.ಬಿ.ರಾಮಚಂದ್ರಪ್ಪ, ಸಂಘದ ರಾಜ್ಯಾಧ್ಯಕ್ಷ ಎನ್. ನಾಗರಾಜ್ ನಾಯ್ಕ್, ಆನಂದ್, ಜೆ.ಬಿ. ಉಮೇಶ್, ಸಂಘದ ಸಂಸ್ಥಾಪಕ ಟಾರ್ಗೇಟ್ ಅಸ್ಲಾಂ, ಪರುಶುರಾಮ್, ಅಬ್ದುಲ್ ಜಬ್ಬಾರ್, ನಾಗರಾಜಪ್ಪ ಮತ್ತಿತರರು ಇದ್ದರು.