ಸಂಘ ಸಂಸ್ಥೆಗಳನ್ನು ಉದ್ಘಾಟನೆಗೆ ಸೀಮಿತಗೊಳಿಸದೆ ಅಭಿವೃದ್ಧಿಗಾಗಿ ಬಳಕೆ ಮಾಡಿ: ಶಾಸಕ ನರೇಂದ್ರ
ಹನೂರು,ಜ.24: ಸಂಘ ಸಂಸ್ಥೆಗಳನ್ನು ಕೇವಲ ಉದ್ಘಾಟನೆಗಷ್ಟೇ ಸೀಮಿತಗೊಳಿಸದೆ ಗ್ರಾಮಗಳ ಅಭಿವೃದ್ಧಿಗಾಗಿ ಬಳಕೆ ಮಾಡಿಕೊಳ್ಳಬೇಕು. ಅಲ್ಲದೆ ಗ್ರಾಮದಲ್ಲಿನ ಅರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ಒದಗಿಸಿಕೊಟ್ಟು ಸಂಘಕ್ಕೆ ಕೀರ್ತಿ ತರುವಂತಾಗಬೇಕು ಎಂದು ಶಾಸಕ ನರೇಂದ್ರ ತಿಳಿಸಿದರು.
ಕ್ಷೇತ್ರ ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿ ಗುಂಡೇಗಾಲ ಯುವಕ ಸಂಘವನ್ನು ಉದ್ಘಾಟನೆಗೊಳಿಸಿ ಮಾತನಾಡಿದ ಶಾಸಕ ನರೇಂದ್ರ, ಗ್ರಾಮದಲ್ಲಿನ ಯುವಕ ಸಂಘಗಳನ್ನು ಕೇವಲ ವೈಯಕ್ತಿಕ ಲಾಭಕ್ಕಷ್ಟೇ ಬಳಕೆ ಮಾಡಿಕೊಳ್ಳದೇ ಗ್ರಾಮಗಳ ಅಭಿವೃದ್ಧಿಗಾಗಿ ಬಳಕೆ ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ಗ್ರಾಮವನ್ನು ಯಾವ ಉತ್ಸಾಹದೊಂದಿಗೆ ಪ್ರಾರಂಭಿಸುತ್ತಾರೋ ಅದೇ ಉತ್ಸಾಹದಿಂದ ನಡೆಸಿಕೊಂಡು ಬರಬೇಕು. ನಿಗದಿತ ಕಾಲಮಿತಿಯಲ್ಲಿ ಸಾಮಾನ್ಯ ಸಭೆ, ವಾರ್ಷಿಕ ಸಭೆಗಳನ್ನು ನಡೆಸಿ, ವಾರ್ಷಿಕವಾಗಿ ಲೆಕ್ಕ ತಪಸಾಣೆ ನಡೆಸಿ ಕಾನೂನಾತ್ಮಕವಾಗಿ ಮಾನ್ಯತೆ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಮನವಿ ಸಲ್ಲಿಕೆ: ಕೂಡ್ಲೂರು ಗ್ರಾಮದಿಂದ ಏಳುದಂಡು ಮುನೇಶ್ವರ ದೇವಾಲಯಕ್ಕೆ ಸಮರ್ಪಕ ರಸ್ತೆ ವ್ಯವಸ್ಥೆ, ಮತ್ತು ದೇವಾಲಯದ ಭಕ್ತಾದಿಗಳಿಗೆ ಕುಡಿಯುವ ನೀರು, ಶೌಚಾಲಯ ಮತ್ತು ನೆರಳಿನ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಮನವಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷ ರಾಜು, ಪ.ಪಂ ಅಧ್ಯಕ್ಷೆ ಮಮತಾ ಮಹಾದೇವು, ಉಪಾಧ್ಯಕ್ಷ ಬಸವರಾಜು, ಜಿ.ಪಂ ಸದಸ್ಯರಾದ ಬಸವರಾಜು, ಇರ್ಷಾದ ಭಾನು, ತಾ.ಪಂ ಸದಸ್ಯರಾದ ನಟರಾಜು, ಸುಮತಿ, ಗ್ರಾ.ಪಂ ಅಧ್ಯಕ್ಷೆ ರಾಜೇಶ್ವರಿ, ಉಪಾಧ್ಯಕ್ಷೆ ಚಿತ್ರಾ, ಸದಸ್ಯರಾದ ಸಿದ್ದರಾಜು, ಕೆಂಪರಾಜು, ತಾ.ಪಂ ಮಾಜಿ ಅಧ್ಯಕ್ಷ ವೆಂಕಟರಮಣ ನಾಯ್ಡು, ಮುರುಡೇಶ್ವರ ಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷರುಗಳಾದ ಚಿಕ್ಕತಮ್ಮಯ್ಯ, ಜಯರಾಜ್ ಅಭಿಯಂತರರುಗಳಾದ ಕುಮಾರ್, ಪ್ರತಾಪ್ ಇನ್ನಿತರರು ಹಾಜರಿದ್ದರು.