ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸಭೆ: ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ
ಮಡಿಕೇರಿ, ಜ.28 :ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಹೋರಾಟಗಾರರ ಹಾಗೂ ಮುಖ್ಯಮಂತ್ರಿಗಳ ನೇತೃತ್ವದ ವಿವಿಧ ಸಚಿವರುಗಳ ಮತ್ತು ಉನ್ನತ ಅಧಿಕಾರಿಗಳ ಸಭೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ಸಂಜೆ ನಡೆಯಿತು.
ಭೂಮಿ ಸಮಸ್ಯೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳನ್ನು ಮತ್ತು ಹೋರಾಟಗಾರರನ್ನು ಒಳಗೊಂಡ ಸಮಿತಿಯನ್ನು ರಚಿಸಲು ಮತ್ತು ಫೆಬ್ರವರಿ ಮೊದಲ ವಾರದಲ್ಲಿ ಸಮಿತಿಯ ಸಭೆ ಕರೆದು ರಾಜ್ಯದ ಭೂಮಿ ವಿಚಾರವಾಗಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
ಫಾರಂ 53 ರಲ್ಲಿ ಅರ್ಜಿ ಸಲ್ಲಿಸಲು 1998 ಕೊನೆಯ ಅವಕಾಶವಾಗಿತ್ತು. ಬಳಿಕ ಅರ್ಜಿ ಸಲ್ಲಿಸಲು ಅವಕಾಶ ಇಲ್ಲದೆ ಹಲವಾರು ಭೂ ಹಿಡುವಳಿದಾರರು ವಂಚಿತರಾಗಿದ್ದರು. ಇದರ ಬಗ್ಗೆ ಹೋರಾಟ ಸಮಿತಿ ಮುಖ್ಯಮಂತ್ರಿಗಳ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಲು ಮಾರ್ಚ್ ವರೆಗೆ ಅವಕಾಶ ಕಲ್ಪಿಸುವುದಾಗಿ ತಿಳಿಸಿದರು.
ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಿ ವಾಸವಾಗಿರುವವರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ಪಾಲೇಮಾಡಿನ ಸ್ಮಶಾನ ಜಾಗವನ್ನು ಹೊರತು ಪಡಿಸಿ ಉಳಿದ ಜಾಗದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುವಂತೆ ಕೊಡಗು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಭೂಮಿ ಮತ್ತು ವಸತಿಯ ವಿಚಾರವಾಗಿ ಹೋರಾಟಗಾರರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಕೈ ಬಿಡುವುದರ ಬಗ್ಗೆ ಭರವಸೆ ನೀಡಿದ ಮುಖ್ಯಮಂತ್ರಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ಸೂಚಿಸಿದರು.
ಸಭೆಯಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ವಸತಿ ಸಚಿವ ಕೃಷ್ಣಪ್ಪ, ಲೋಕೋಪಯೋಗಿ ಸಚಿವ ಮಹದೇವಪ್ಪ ಹಾಗೂ ಸರಕಾರದ ಉನ್ನತ ಮಟ್ಟದ ಬಹುತೇಕ ಅಧಿಕಾರಿಗಳು ಉಪಸ್ಥಿತರಿದ್ದರು.
ಹೋರಾಟಗಾರರ ಪರವಾಗಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್ ದೊರೆಸ್ವಾಮಿ ನೇತೃತ್ವದಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸಿರಿಮನೆ ನಾಗರಾಜ್, ನೂರ್ ಶ್ರೀಧರ್, ಅಮೀನ್ ಮೊಹಿಸಿನ್, ವಿಜಯಮ್ಮ, ಡಿ.ಹೆಚ್.ಪೂಜಾರ್, ಕಂದೇಗಾಲ ಶ್ರೀನಿವಾಸ್, ಸ್ವರ್ಣಭಟ್, ಕರಿಯಪ್ಪ ಗುಡಿಮನಿ, ಅಭಯ್, ಮುಸ್ತಫ ಮತ್ತಿತರರು ಹಾಜರಿದ್ದರು.